ನವದೆಹಲಿ: ಜನ ಊಟ ಮಾಡಲಿಕ್ಕೆ ರೆಸ್ಟೋರೆಂಟ್ಗಳಿಗೆ, ಹೋಟೆಲ್ಗಳಿಗೆ ಹೋಗುವುದು ಅತ್ಯಂತ ಸಹಜ ವಿದ್ಯಮಾನ. ಬಿಲ್ ಕೊಡುವಾಗ ಕೆಲವು ಪ್ರತಿಷ್ಠಿತ ಹೋಟೆಲ್ಗಳಲ್ಲಿ ಸೇವಾಶುಲ್ಕ ಎಂದು ಹೆಚ್ಚುವರಿ ಮೊತ್ತ ವಿಧಿಸುವ ಪರಿಪಾಠವೂ ಇದೆ!
ಅದರ ವಿರುದ್ಧ ಒಂದಷ್ಟು ಮಂದಿ ಪ್ರತಿಭಟಿಸಿ ಸುಮ್ಮನಾಗಿದ್ದಾರೆ. ಅದಕ್ಕೆಲ್ಲ ಅಂತ್ಯ ಹಾಡಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಒಂದು ಹೊಸ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ. ಆ ಪ್ರಕಾರ ಇನ್ನು ಮುಂದೆ ಗ್ರಾಹಕರು, ಗ್ರಾಹಕ ಆಯೋಗ ಮತ್ತು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ (ಸಿಸಿಪಿಎ) ದೂರು ನೀಡಬಹುದು!
ಹಿಂದಿನ ಗ್ರಾಹಕ ರಕ್ಷಣಾ ಕಾಯ್ದೆಯಡಿ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ಈ ಅಧಿಕಾರ ನೀಡಿರಲಿಲ್ಲ. ಈಗ ಅಂತಹದ್ದೊಂದು ಅಧಿಕಾರ ನೀಡಲು ಇನ್ನು ಕೆಲವೇ ದಿನಗಳಲ್ಲಿ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ರಚಿಸಲಿದೆ. ಅಂದರೆ ಗ್ರಾಹಕರಿಗಿನ್ನು ಕಾನೂನು ನೆರವು ಸಿಗಲಿದೆ.
ಸಿಸಿಪಿಎ ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಮುಖ್ಯ ವ್ಯವಸ್ಥೆಯಾಗಿರಲಿದೆ.
2017ರಲ್ಲಿ ಬಿಡುಗಡೆಯಾದ ಮಾರ್ಗದರ್ಶಿ ಸೂತ್ರಗಳಲ್ಲಿ, ಹೋಟೆಲ್ಗಳು ಬಿಲ್ಗಳಲ್ಲಿ ಸೇವಾ ಶುಲ್ಕ ಎಂದು ಮುದ್ರಿಸಲು ಅವಕಾಶ ನೀಡಲಾಗಿತ್ತು. ಆದರೆ ಎಷ್ಟು ಮೊತ್ತವೆಂದು ಗ್ರಾಹಕರೇ ನಿರ್ಧರಿಸಬೇಕಿತ್ತು. ಅದನ್ನು ಹೋಟೆಲ್ಗಳು ಹಾಕುವ ಹಾಗಿರಲಿಲ್ಲ. ಇನ್ನು ಮುಂದೆ ಸೇವಾಶುಲ್ಕವನ್ನು ಕಡ್ಡಾಯವಾಗಿ ಕಾನೂನು ಬಾಹಿರವೆಂದೇ ಸರ್ಕಾರ ಪರಿಗಣಿಸಲಿದೆ.