Advertisement

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

09:39 PM May 15, 2024 | Team Udayavani |

ಹುಣಸೂರು: ತಾಲೂಕಿನ ಅರಸು ಕಲ್ಲಳ್ಳಿ ಬಳಿ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ, ಘಟನೆಯಲ್ಲಿ ಎರಡು ಬಸ್‌ಗಳು ಹಾಗೂ ಎರಡು ಕಾರುಗಳಿಗೆ ತೀವ್ರ ಜಖಂ ಆಗಿದೆ.

Advertisement

ಮೈಸೂರು-ಬಂಟ್ವಾಳ ಹೆದ್ದಾರಿ-275ರ ಅರಸು ಕಲ್ಲಹಳ್ಳಿ ಗೇಟ್ ಬಳಿಯಲ್ಲಿ ಘಟನೆ ನಡೆದಿದ್ದು, ಮೈಸೂರು ತಾಲೂಕಿನ ಹೂಟಗಳ್ಳಿಯ ಎಸ್‌ಆರ್‌ಎಸ್ ಕಾಲೋನಿಯ ಲೇ. ಬೈರಪ್ಪರ ಪತ್ರ, ಕೂಲಿ ಕಾರ್ಮಿಕ ಕರಿಯಪ್ಪ(40) ಮೃತಪಟ್ಟಾತ, ಇವರಿಗೆ ಪತ್ನಿ, ಪುಟ್ಟ ಮಕ್ಕಳಿದ್ದಾರೆ.

ಘಟನೆ ವಿವರ:
ಕರಿಯಪ್ಪ ಹುಣಸೂರು ತಾಲೂಕಿನ ಅತ್ತಿಕುಪ್ಪೆಯಲ್ಲಿ ಬುಧವಾರ ನಡೆದ ಗ್ರಾಮದ ಹಬ್ಬದಲ್ಲಿ ಬಾಗವಹಿಸಿ ಸಂಜೆ 6.30ರ ವೇಳೆಗೆ ವಾಪಸ್ ಆಗುತ್ತಿದ್ದ ವೇಳೆ ಅರಸು ಕಲ್ಲಹಳ್ಳಿ ಬಳಿ ಹುಣಸೂರು ಡಿಪೋಗೆ ಸೇರಿದ ಬಸ್ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಿಂದ ಗಾಬರಿಗೊಂಡ ಬಸ್ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಬರುತ್ತಿದ್ದ ಇನ್ನೋವಾ ಕಾರು ಬಸ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರ ಹಿಂದೆ ಬರುತ್ತಿದ್ದ ಬೆಂಜ್ ಕಾರು ಇನ್ನೋವಾ ಕಾರಿಗೆ ಹಾಗೂ ಹಿಂದೆ ಬರುತ್ತಿದ್ದ ಮತ್ತೊಂದು ಸರಕಾರಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಎಲ್ಲಾ ವಾಹನಗಳಿಗೂ ಜಖಂಗೊಂಡಿದ್ದು. ಎಲ್ಲರೂ ಸಣ್ಣಪುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೆದ್ದಾರಿ ಜಾಮ್:
ಅಪಘಾತದಿಂದ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು. ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಗ್ರಾಮಾಂತರ ಠಾಣೆ ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ ಹೆದ್ದಾರಿ ಮದ್ಯದಲ್ಲೇ ಸಾವನ್ನಪ್ಪಿದ್ದ ಶವವನ್ನು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೇಯಲ್ಲಿ ಪ್ರಕರಣ ದಾಖಲಾಗಿದೆ.

ವಿಷಯ ತಿಳಿದು ಅಡಿಷನಲ್ ಎಸ್.ಪಿ. ಡಾ.ನಂದಿನಿ, ಡಿವೈಎಸ್‌ಪಿ ಗೋಪಾಲಕೃಷ್ಣ ಹಾಗೂ ಚಿಕ್ಕರಂಗಶೆಟ್ಟಿ ಭೇಟಿ ಇತ್ತು ಪರಿಶೀಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next