ಸುಳ್ಯ: ಕಾಡಮಲ್ಲಿಗೆ ಖ್ಯಾತಿಯ ಹಿರಿಯ ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ಅಲ್ಪ ಕಾಲದ ಅಸೌಖ್ಯದಿಂದ ಕೆಯ್ಯೂರು ಗ್ರಾಮದ ಸಂತೋಷ್ ನಗರದ ಮನೆಯಲ್ಲಿ ನಿಧನರಾದರು.
ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದ ಬೆಳ್ಳಾರೆ ವಿಶ್ವನಾಥ ರೈ ಅವರು ಕರ್ನಾಟಕ ಮೇಳದಲ್ಲಿ ಮಂಡೆಚ್ಚ, ಅಳಿಕೆ, ಬೋಳಾರ, ಸಾಮಗ, ಮಿಜಾರು, ಪುಳಿಂಚ ಮೊದಲಾದ ಮಹಾನ್ ಚೇತನಗಳ ಒಡನಾಡಿಯಾಗಿದ್ದರು. ಅಳಿಕೆ ಯಕ್ಷನಿಧಿ, ಬೋಳಾರ ಪ್ರಶಸ್ತಿ ಇತ್ಯಾದಿಗಳನ್ನು ಪಡೆದಿರುವುದಲ್ಲದೆ ಇತ್ತೀಚೆಗಷ್ಟೇ ಕಲ್ಲಡ್ಕದಲ್ಲಿ ಪುಳಿಂಚ ರಾಮಯ್ಯ ಶೆಟ್ಟಿ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.
1949ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದ ವಿಶ್ವನಾಥ ರೈ ಅವರು 2 ನೇ ತರಗತಿ ಶಿಕ್ಷಣ ಪಡೆದಿದ್ದರು. ಅಚ್ಚುತ ಮಣಿಯಾಣಿ ಯವರಿಂದ ಯಕ್ಷ ನಾಟ್ಯಾಭ್ಯಾಸ ಮಾಡಿ ತನ್ನ 9ನೇ ವರ್ಷ ಪ್ರಾಯದಲ್ಲಿ ರಂಗಪ್ರವೇಶ ಮಾಡಿದರು. ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಿಂದ ಭರತನಾಟ್ಯವನ್ನೂ ಅಭ್ಯಾಸ ಮಾಡಿದರು. ಬಾಲಕನಿದ್ದಾಗಲೇ ತನ್ನ ಅಭಿನಯಕ್ಕೆ ಮಾಸ್ಟರ್ ಹಿರಣ್ಣಯ್ಯರಿಂದ ಚಿನ್ನದ ಉಂಗುರದ ಸನ್ಮಾನ ಸ್ವೀಕರಿಸಿದ್ದವರು ವಿಶ್ವನಾಥ ರೈ.
ಇದನ್ನೂ ಓದಿ:ತಣ್ಣಗಾಗದ “ಕಾಳಿ ಮಾತೆ’ ಸಿನಿಮಾ ಪೋಸ್ಟರ್ ವಿವಾದ
Related Articles
ಕರ್ನಾಟಕ ಮೇಳ ಒಂದರಲ್ಲೇ 35 ವರುಷಗಳ ತಿರುಗಾಟ ಮಾಡಿದ್ದ ವಿಶ್ವನಾಥ ರೈ, ಮಧೂರು ಮೇಳದಲ್ಲಿ ಒಂದು ವರ್ಷ, ಸುರತ್ಕಲ್ ಮೇಳದಲ್ಲಿ ಐದು ವರ್ಷ, ಕದ್ರಿ ಮೇಳದಲ್ಲಿ ಎರಡು ವರ್ಷ, ಬಪ್ಪನಾಡು ಒಂದು ವರ್ಷ, ಕುಂಟಾರು ಮೇಳದಲ್ಲಿ ಎರಡು ವರ್ಷ, ಎಡನೀರು ಮೇಳದಲ್ಲಿ ಒಂದು ವರ್ಷ, ಕಟೀಲು ಮೇಳದಲ್ಲಿ ಮೂರು ವರ್ಷ ತಿರುಗಾಟ ಮಾಡಿದ್ದಾರೆ.