Advertisement

ವೇದಗಳ ಆಳಕ್ಕಿಳಿದಿದ್ದ ವಿದ್ವತ್‌ ನಿಧಿ ಆಚಾರ್ಯ

12:13 AM Nov 27, 2021 | Team Udayavani |

ಆಚಾರ್ಯರ ಪಾಂಡಿತ್ಯ ಎಷ್ಟಿತ್ತೆಂದರೆ ಜಗತ್ತಿನ ಯಾವುದಾದರೂ ಇತಿಹಾಸ, ನಾಗರಿಕತೆ, ಲೇಖಕರು, ಸಂಸ್ಕೃತಿ, ಪರಂಪರೆ, ಧರ್ಮದ ಕುರಿತಾಗಿ ಕೇಳಿದರೆ ಕೇವಲ ಮಾಹಿತಿಯನ್ನು ಕೊಡುವುದಷ್ಟೇ ಅಲ್ಲ, ಅವುಗಳ ಕುರಿತ ಆಳ ಜ್ಞಾನವನ್ನು ಹರವಿಡುತ್ತಿದ್ದರು. ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ, ವೇದ, ಉಪನಿಷತ್‌ಗಳ ಒಂದೊಂದು ಎಳೆಯ ಬಗ್ಗೆಯೂ ಗಂಟೆಗಟ್ಟಲೇ ಮಾತನಾಡುವಷ್ಟು ವಿದ್ವತ್ತು ಅವರೊಳಗಿತ್ತು…

Advertisement

ಆರ್‌ಟಿಒ ಅಧಿಕಾರಿ ಆತ. ಓದುವ ಹವ್ಯಾಸದ ಸನಿಹವೂ ಹೋದವರಲ್ಲ. ಎಲ್ಲೋ ಕುಳಿತಾಗ ಟೈಂಪಾಸ್‌ಗಾಗಿ “ತರಂಗ’ ಕೈಗೆತ್ತಿಕೊಂಡಿದ್ದರಂತೆ. ಅದರಲ್ಲಿ ಹಿರಿಯ ವಿದ್ವಾಂಸ ಕೆ.ಎಸ್‌. ನಾರಾಯಣಾಚಾರ್ಯರು ಬರೆದಿದ್ದ “ಆಚಾರ್ಯ ಚಾಣಕ್ಯ’ ಧಾರಾವಾಹಿಯಾಗಿ ಮೂಡಿ ಬಂದಿತ್ತು. ಅದನ್ನು ಆಸಕ್ತಿಯಿಂದ ಓದಿ, ಮರುದಿನವೇ ನಮ್ಮ ಪುಸ್ತಕದ ಅಂಗಡಿಗೆ ಓಡೋಡಿ ಬಂದಿದ್ದರು. “ನಾನ್‌ ಇಷ್ಟೊಂದು ಫಾಸ್ಟ್‌ ಓದುತ್ತೇನೆ ಅಂತ ಗೊತ್ತೇ ಇರ್ಲಿಲ್ಲ. ದಯಮಾಡಿ, ಆಚಾರ್ಯರ ಇನ್ನಷ್ಟು ಪುಸ್ತಕಗಳನ್ನು ಕೊಡಿ’ ಅಂತಹೇಳಿ, ಒಂದಿಷ್ಟು ಕೃತಿಗಳನ್ನು ಕೊಂಡೊಯ್ದಿದ್ದರು.ಇದಾಗಿ ಎರಡು ವರುಷ ಕಳೆದಿದ್ದಷ್ಟೇ. ಈಗ ಆ ಅಧಿಕಾರಿ ಬೆಂಗಳೂರಿನ ತಮ್ಮ ಮನೆಯಲ್ಲಿ ದೊಡ್ಡ ಲೈಬ್ರೆರಿ ನಿರ್ಮಿಸಿದ್ದಾರೆ. ಮನೆಯ ಪಕ್ಕದ ಜಾಗದಲ್ಲಿ ಒಂದು ಧ್ಯಾನ ಮಂದಿರ ಕಟ್ಟಿಸಿದ್ದಾರೆ. ನಿತ್ಯದ ಧ್ಯಾನ ಅವರೊಳಗೆ ಅಧ್ಯಾತ್ಮ ಸುಗಂಧ ಹಬ್ಬಿಸುತ್ತಿದೆ. ಬರಡು ಚಿಂತನೆಯ ಮನಸ್ಸಿನೊಳಗೆ ಸಕಾರಾತ್ಮಕ ಚಿಂತನೆಗಳು ಮನೆಮಾಡಿವೆ. ಇವೆಲ್ಲವೂ ಸಾಧ್ಯವಾಗಿದ್ದು, ನಾರಾಯಣಾಚಾರ್ಯರ ಬರಹಗಳ ಪ್ರೇರಣೆಯಿಂದ.
* * *
ಇದು ನಾರಾಯಣಾಚಾರ್ಯರ ಬರಹದ ಶಕ್ತಿಯಾ ದರೆ, ಪ್ರವಚನದ ಮೋಡಿ ಮತ್ತೊಂದು ಬಗೆಯದ್ದು. ಯುವಜನರ ಬದುಕಿನ ದಿಕ್ಕು ಬದಲಿಸುವಂಥ ಶಕ್ತಿ ಅವರ ಮಾತುಗಳಲ್ಲಿತ್ತು. ಮಂಜುನಾಥ ಬೆಳಿರಾಯ ಎಂಬ ಅವರು ಇದಕ್ಕೆ ಸೂಕ್ತ ನಿದರ್ಶನ. ಆಚಾರ್ಯರ ಪ್ರವಚನ ದಿಂದ ಪ್ರೇರಿತರಾದ ಮಂಜುನಾಥ್‌, ಕೈತುಂಬಾ ಸಂಬಳ ನೀಡುತ್ತಿದ್ದ ಉನ್ನತ ಹುದ್ದೆ ತೊರೆದು, ಸಮಾಜಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಸಮಾನ ಮನಸ್ಕರ ಜತೆಗೂಡಿ ಅವರೀಗ ಬೆಂಗಳೂರು ಸನಿಹದ ದೊಡ್ಡ ಆಲದ ಮರದ ಬಳಿ ವಿದ್ಯಾಕ್ಷೇತ್ರ ಆರಂಭಿಸಿದ್ದಾರೆ. ಔಪಚಾರಿಕ ಶಿಕ್ಷಣ ಪರಂಪರೆ ಯನ್ನು ಬದಿಗಿಟ್ಟು, ಕೌಶಲಾಧಾರಿತ ಶಿಕ್ಷಣ ಕಲಿಸುವ ಹೊಣೆ ಹೊತ್ತಿದ್ದಾರೆ.
* * *
ಕನ್ನಡದಲ್ಲಿ ಒಬ್ಬ ಮೇರು ವಿದ್ವಾಂಸನ ಕೃತಿಗಳು 35 ಲಕ್ಷಕ್ಕೂ ಅಧಿಕ ಮಾರಾಟ ಕಂಡಿದೆಯೆಂದರೆ ನಾರಾಯಣಾಚಾರ್ಯರ ಜನಪ್ರಿಯತೆ ಯನ್ನು ನೀವೇ ಕಲ್ಪಿಸಬಹುದು. ನನಗೆ ಅನ್ನಿಸೋಮಟ್ಟಿಗೆ ಎಸ್‌.ಎಲ್‌. ಭೈರಪ್ಪನವರ ಅನಂತರ ದೊಡ್ಡ ಓದುಗ ವರ್ಗವನ್ನು ಸಂಪಾದಿಸಿರುವುದು ಆಚಾರ್ಯರೇ ಇದ್ದಿರಬಹುದು. ಸರಳ ಹಾಗೂ ವಿಶೇಷ ನಿರೂಪಣೆ ಶೈಲಿ ಮೂಲಕ ಲಕ್ಷಾಂತರ ಓದುಗರ ಮನದೊಳಗೆ ಅವರು ಜೀವಂತ. ಧರ್ಮ, ಅಧ್ಯಾತ್ಮ ಕುರಿತು ಅವರು ಮೂಡಿಸಿದ ಜಾಗೃತಿ ನಾಡಿಗೆ ಅಪರೂಪದ ಕಾಣಿಕೆ.ಬರವಣಿಗೆ, ಪ್ರವಚನದ ಮೂಲಕ ಆಚಾರ್ಯರ ಅಭಿಮಾನಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದರು. ಅವರ ಎಲ್ಲ ಪುಸ್ತಕಗಳ ಒಟ್ಟು ಮುಖಬೆಲೆ ಸುಮಾರು 20,000 ರೂ. ಮೀರುತ್ತದೆ. ಈ ಎಲ್ಲ ಪುಸ್ತಕಗಳನ್ನು ಕೊಂಡವರಿಗೆ ಪುಸ್ತಕ ಇಡಲು ಒಂದು ಕಪಾಟನ್ನೂ ಕೊಡುತ್ತಿದ್ದೆವು. ಇದುವರೆಗೆ ಇಂಥ 200ಕ್ಕೂ ಅಧಿಕ ಕಪಾಟುಗಳನ್ನು ನಾವು ನೀಡಿದ್ದೇವೆ. ಇನ್ನೂ ಸಾಕಷ್ಟು ಬೇಡಿಕೆ ಬರುತ್ತಲೇ ಇದೆ. ಒಬ್ಬ ಲೇಖಕನ ಎಲ್ಲ ಪುಸ್ತಕಗಳನ್ನು ಒಂದೇ ಕಪಾಟಿನಲ್ಲಿಡುವ ಅವಕಾಶ ಕನ್ನಡದ ಮತ್ತೆ ಯಾವ ಲೇಖಕನಿಗೂ ಸಿಗಲಿಲ್ಲ. ಆದರೆ ಇದು ಆಚಾರ್ಯರಿಗೆ ಲಭಿಸಿದೆ. ಸಾಕಷ್ಟು ಪ್ರಶಸ್ತಿಗಳನ್ನು ಗಳಿಸುವ ಹತ್ತಾರು ಲೇಖಕರು ಜನಿಸಿರಬಹುದು. ಆದರೆ ಒಬ್ಬ ಕೆ.ಎಸ್‌. ನಾರಾಯಣಾಚಾರ್ಯರು ಮಾತ್ರ ಮತ್ತೆ ಸಿಗಲಾರರು.
* * *
ಆಚಾರ್ಯರ ನೂರು ಪುಸ್ತಕ ಪ್ರಕಟಿಸಿದ ನಮ್ಮ ಪ್ರಕಾಶನಕ್ಕೆ ಅವರ ಕೃತಿಗಳಿಂದಲೇ ವಿಶೇಷ ಘನತೆ ಬಂದಿದೆ. ಹತ್ತು ವರ್ಷಗಳಿಂದ ದಿನಕ್ಕೆ ಎರಡು ಸಲ ತಪ್ಪದೆ ಅವರಿಂದ ಫೋನ್‌ ಬರುತ್ತಿತ್ತು. ಅವರ ಕೊನೆಯ ಕರೆ ಬಂದಿದ್ದು ಮೊನ್ನೆ ಬುಧವಾರ. “ಹಿಂದಿ ಚಿತ್ರನಟಿ ಲೀಲಾ ಚಂದಾವರ್ಕರ್‌, ಅವರ ಆತ್ಮಕಥೆ ಓದಬೇಕು. ತುರ್ತಾಗಿ ಕಳುಹಿಸಿಕೊಡಿ. ಇದರೊಟ್ಟಿಗೆ ದಿವಾಕರ್‌ ಹೆಗಡೆ ಅವರ ಪುಸ್ತಕವನ್ನೂ ಕಳುಹಿಸಿ’ ಎಂದಿದ್ದರು. ಆದರೆ ಹೀಗೆ ಹೇಳಿದ ಆ ದಿನ ಸಂಜೆಯೇ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಕ್ಷಣದವರೆಗೂ ಅವರಿಗಿದ್ದ ಜ್ಞಾನದಾಹ ಪರಮಾದ್ಭುತ.

ಕಳೆದ 23 ವರುಷಗಳಿಂದ ನಾನು ಆಚಾರ್ಯರನ್ನು ಬಲ್ಲೆ. ಅವರು ಧಾರವಾಡದಲ್ಲಿ ಇದ್ದಾಗಿನಿಂದ ನನಗೆ ಪರಿಚಿತರು. ಸಾಹಿತಿ ಎನಕ್ಕೆ ನನಗೆ ಇವರನ್ನು ಪರಿಚಯಿಸಿದ್ದರು. ಎನಕ್ಕೆ ಅವರು ಆಚಾರ್ಯರ ನೆರೆಹೊರೆ ಯವರು. ಆಚಾರ್ಯರು ಬರೆಯುತ್ತಿದ್ದ ಎಲ್ಲ ಬರಹಗಳ ಮೊದಲು ಓದುಗರು ಕೂಡ ಅವರೇ ಆಗಿದ್ದರು. ಆಚಾರ್ಯರ ಪ್ರತಿಯೊಂದು ಪುಟದ ಬರವಣಿಗೆಗೆ ಧಾರ ವಾಡದ ಶೈಲಿಯಲ್ಲಿ “ವಾಹ್‌ ವಾಹ್‌’ ಎಂದು ಹೊಗಳು ತ್ತಿದ್ದರು. ಅಷ್ಟೇ ಅಲ್ಲ, ಎನಕ್ಕೆ ತಮ್ಮ ಜೀವಿತದ ಕೊನೆಯ ವರೆಗೂ ಆಚಾರ್ಯರ ಗ್ರಂಥ ಗಳಿಗೆ ಮುನ್ನುಡಿ ಬರೆದಿದ್ದರು. ಎನಕ್ಕೆ ತೀರಿಹೋದ ಮೇಲೆ ಆಚಾರ್ಯರು ಯಾರ ಬಳಿಯೂ ಮುನ್ನುಡಿ ಬರೆಸುತ್ತಿರಲಿಲ್ಲ!
* * *
ಧಾರ್ಮಿಕ ಕಥಾವಸ್ತು ಮಾಡಿಕೊಳ್ಳುವ ಕೆಲವು ಲೇಖಕರು, ಕಾದಂಬರಿ ಕಾರರ ಬಗೆಗೆ ಆಚಾರ್ಯರ ಒಳಗೊಂದು ಬೇಸರವೂ ಇತ್ತು. “ನಮ್ಮಲ್ಲಿ ವ್ಯಾಸ, ವಾಲ್ಮೀಕಿಯರ ದರ್ಶನ ಗ್ರಂಥಗಳಿವೆ. ಅದನ್ನು ಸರಿಯಾಗಿ ಅರ್ಥಮಾಡಿ ಕೊಳ್ಳದೇ ನೀವು ಬರೆಯುವ ಸಾಹ ಸಕ್ಕೆ ಕೈಹಾಕಬೇಡಿ’ ಎಂದು ತಿಳಿ ಹೇಳುತ್ತಿದ್ದರು. “ಕೇವಲ ಮಹಾ ಭಾರತ, ರಾಮಾಯಣದ ಕಥೆ ಗಳನ್ನು ತಿಳಿದರೆ ಸಾಲದು. ವೇದ ಗಳನ್ನು ಕಲಿಯಬೇಕು. ವೇದ ಜ್ಞಾನವಿಲ್ಲದೇ ಕಥೆಗಳ ಮೂಲಕ ತಪ್ಪು ತಿಳಿವಳಿಕೆ ಮೂಡಿ ಸಬೇಡಿ’ ಎನ್ನುತ್ತಿದ್ದರು. ಎಷ್ಟೇ ದೊಡ್ಡ ಸಾಹಿತಿಗಳಾಗಿರಲಿ, ಅವರ ಬರವಣಿಗೆಯನ್ನು ನಿಷ್ಠುರವಾಗಿ ವಿಮರ್ಶೆಗೆ ಒಳಪಡಿಸುತ್ತಿದ್ದರು. ಕುಮಾರ ವ್ಯಾಸರು ಕೃಷ್ಣನಿಗೆ ಕುತಂತ್ರಿ ಎಂದು ಕರೆದಿದ್ದು ಸರಿಯಲ್ಲ. ಕೃಷ್ಣ ಅವರಿಗೆ ಅರ್ಥವಾಗಿದ್ದರೂ ಯಾಕೆ ಆ ರೀತಿ ಬರೆದರು. ಆ ಕಾಲಘಟ್ಟದಲ್ಲಿ ಕುಮಾರವ್ಯಾಸರ ಮೇಲೆ ಬೀರಿದ
ಪ್ರಭಾವ ಯಾವುದು ಎಂಬುದರ ಕುರಿತು ಭಾರೀ ಯೋಚನೆ ಮಾಡುತ್ತಿದ್ದರು.
* * *
ಹಿಂದಿ ಕಿರುತೆರೆಯಲ್ಲಿ ಇತ್ತೀಚೆಗೆ ಮೂಡಿಬರುತ್ತಿದ್ದ ಧಾರಾವಾಹಿ ರಚನೆ ಮತ್ತು ಅದರ ಸಂಭಾಷಣೆಗಳ ಕುರಿತು ಆಚಾರ್ಯರು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅದರಲ್ಲೂ ಒಬ್ಬ ಮುಸ್ಲಿಂ ಸ್ಕ್ರಿಪ್ಟ್ ರೈಟರ್‌ ಬಗ್ಗೆ ಮತ್ತೆ ಮತ್ತೆ ಹೊಗಳುತ್ತಿದ್ದರು. ಯಾವುದೇ ಪುರಾಣ ಪಾತ್ರದ ಆಳ- ಅಗಲವನ್ನು ಸಶಕ್ತವಾಗಿ ಕಟ್ಟಿಕೊಡುತ್ತಿದ್ದ ಅವರ ಸಾಮರ್ಥ್ಯ ಇಂದಿಗೂ ನನಗೆ ಬೆರಗು ಹುಟ್ಟಿಸುತ್ತಿದೆ. ಸರ್ಪ ಯಾಗದ ಕುರಿತು ಬರೆದು, ಮೂಲ ವ್ಯಾಸ ಹೇಳಿದ್ದನ್ನೇ ವಿಶೇಷವಾಗಿ ನಿರೂಪಿಸಿದರು. ಅನಂತರ ಊರ್ವಶಿ- ಪುರೂರವನನ್ನು ಚಿತ್ರಿಸಿದರು. ಅಗ್ನಿಹೋತ್ರನೇ ಪುರೂರವ ಎನ್ನುವುದನ್ನು ಬರೆ ದರು. ವೇದದ ಮೂಲ ಆಧ ರಿಸಿ, ನಹುಶ, ಯಯಾತಿ ಯನ್ನು ಓದುಗರ ಮುಂದಿ ಟ್ಟರು. ಭರತನಿಂದ ಭಾರತ ಹೇಗೆ ಆಯಿತು ಎಂಬ ಪ್ರಶ್ನೆ ಬಿಡಿಸುತ್ತಲೇ, ಭರತ ವಂಶಾವಳಿಯನ್ನು ರಚಿಸಿದರು.
* * *
ಆಚಾರ್ಯರ ಪಾಂಡಿತ್ಯ ಎಷ್ಟಿ ತ್ತೆಂದರೆ, ಜಗತ್ತಿನ ಯಾವುದಾದರೂ ಇತಿಹಾಸ, ನಾಗರಿ ಕತೆ, ಲೇಖಕರು, ಸಂಸ್ಕೃತಿ, ಪರಂ ಪರೆ, ಧರ್ಮದ ಕುರಿ ತಾಗಿ ಕೇಳಿದರೆ ಕೇವಲ ಮಾಹಿತಿಯನ್ನು ಕೊಡುವುದಷ್ಟೇ ಅಲ್ಲ, ಅವುಗಳ ಕುರಿತ ಆಳ ಜ್ಞಾನವನ್ನು ಹರವಿಡುತ್ತಿದ್ದರು. ಗ್ರೀಕ್‌, ಲ್ಯಾಟಿನ್‌ ಸಂಸ್ಕೃತಿಯ ಬಗ್ಗೆ ಸಂಪೂರ್ಣ ಮಾಹಿತಿ ಯನ್ನು ನೀಡುತ್ತಿ ದ್ದರು. ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ, ವೇದ, ಉಪನಿಷತ್‌ಗಳ ಒಂದೊಂದು ಎಳೆಯ ಬಗ್ಗೆಯೂ ಗಂಟೆಗಟ್ಟಲೇ ಮಾತನಾಡುವಷ್ಟು ವಿದ್ವತ್ತು ಅವರೊಳಗಿತ್ತು. ಇಂಥ ಅಪೂರ್ವ ಜ್ಞಾನ ಭಂಡಾರ ನಮ್ಮನ್ನು ಅಗಲಿ ಹೋಗಿರುವುದು ನಿಜಕ್ಕೂ ಬೇಸರದ ಸಂಗತಿ. ಅಂಥ ರತ್ನವನ್ನು ಸಾಕಷ್ಟು ಜನ ಗುರುತಿಸಲೇ ಇಲ್ಲ ಎಂಬ ಬೇಸರವೂ ಇದೆ.
* * *
ಆಚಾರ್ಯರ ಬುದ್ಧಿಸಾಮರ್ಥ್ಯ ಬಹಳ ಶಾರ್ಪ್‌. ಇಳಿವಯಸ್ಸಿನಲ್ಲೂ ನೆನ ಪಿನ ಶಕ್ತಿ ನಿಜಕ್ಕೂ ಅಚ್ಚರಿ. ಆದರೆ ವಯಸ್ಸಿನ ಕಾರಣ ಬರೆಯುವುದಕ್ಕೆ ಕುಳಿತರೆ ಕೈ ಸಹಕರಿಸು ತ್ತಿರಲಿಲ್ಲ. ಒಮ್ಮೆ ನನ್ನ ಮನೆಗೆ ಬಂದಾಗ, ಒಂದು ಮರದ ಪೆಟ್ಟಿಗೆಯಲ್ಲಿದ್ದ ಉಂಗುರವನ್ನು ನನ್ನ ಮಗಳಿಗೆ ಕೊಟ್ಟರು. ಈಕೆ ಎಷ್ಟು ಬೇಡವೆಂದರೂ ಅದನ್ನು ಪ್ರೀತಿಯಿಂದಲೇ ನೀಡಿದ್ದರು. ಆ ಘಟನೆ ಈಗ ನನ್ನ ಕಣ್ಮುಂದೆ ಬೇರೆಯದ್ದೇ ಅರ್ಥ ಮೂಡಿಸುತ್ತಿದೆ. ದೊಡ್ಡವರ ಪರಂ ಪರೆಯೇ ಹೀಗೆ. ಹೋಗುವಾಗ ಏನನ್ನೂ ಅವರು ಕೊಂಡೊಯ್ಯುವುದಿಲ್ಲ. ಎಲ್ಲರಿಗೂ ಧಾರೆಯೆರೆದೇ ಹೋಗುತ್ತಾರೆ. ಅದು ಉಂಗುರವೇ ಇರಲಿ, ಜ್ಞಾನವೇ ಆಗಿರಲಿ…

ಕೆ.ಎಸ್‌. ನಾರಾಯಣಾಚಾರ್ಯರ ಅಗಲಿಕೆ ಕೇವಲ ಸಾಹಿತ್ಯ ಲೋಕಕ್ಕೆ ನಷ್ಟವಲ್ಲ. ಒಂದು ವಿದ್ವತ್‌ ಪರಂಪರೆ, ಋಷಿ ಪರಂಪರೆಗೆ ಆದಂಥ ಬಹುದೊಡ್ಡ ನಷ್ಟ. ಇವರ ಜ್ಞಾನ ಭಂಡಾರ ಎಲ್ಲದಕ್ಕೂ ಮೀರಿದ್ದು. ಆಚಾರ್ಯರಂತೆ ಸವಿಸ್ತಾರವಾಗಿ, ಅರ್ಥಪೂರ್ಣವಾಗಿ ಬರೆಯಲು ಯಾರಿಂದಲೂ ಸಾಧ್ಯವಿಲ್ಲ.

ಅರ್ಧಕ್ಕೆ ನಿಂತ “‌ರತನ ವಂಶಾವಳಿ’
ಕೆ.ಎಸ್‌. ನಾರಾಯಣಾ ಚಾರ್ಯರು ಭರತನಿಂದ ಹೇಗೆ ಭಾರತವಾಯಿತು ಎಂಬುದರ ಕುರಿತು ವಿಸ್ತಾರವಾಗಿ ಬರೆಯುವ ಯೋಜನೆ ಹಾಕಿಕೊಂಡಿದ್ದರು. 60 ಅಧ್ಯಾಯದ ಭರತನ ವಂಶಾವಳಿಯನ್ನು ಬರೆಯುವ ಮಹದಾಸೆ ಅವರದ್ದಾಗಿತ್ತು. ವಯಸ್ಸಿನ ಅಡೆತಡೆಗಳನ್ನು ಮೀರಿ ಈವರೆಗೆ 17 ಅಧ್ಯಾಯಗಳನ್ನೂ ರಚಿಸಿದ್ದರು. ಆದರೆ ಅವರ ಬದುಕಿನ ಅಂತ್ಯ ಆ ಕೃತಿಯ ಅಂತ್ಯಕ್ಕೂ ಕಾರಣವಾಗಿದೆ.

Advertisement

ವೃತ್ತಿ ಜೀವನ
-1961ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕ
-1967ರಲ್ಲಿ ಪ್ರವಾಚಕ
-1973ರಲ್ಲಿ ಪ್ರಾಧ್ಯಾಪಕ
-1991ರಲ್ಲಿ ಪ್ರಾಚಾರ್ಯ
-1993ರಲ್ಲಿ ನಿವೃತ್ತಿ

ಮುಖ್ಯ ಪುಸ್ತಕಗಳು
-ಸರ್ಪಯಾಗ
-ಊರ್ವಶಿ ಪುರೂರವ
-ರಾಜಸೂಯದ ರಾಜಕೀಯ
-ಕುಂತೀ ಸ್ತುತಿ
-ಆ ಹದಿನೆಂಟು ದಿನಗಳು
-ವನವಾಸಾಂತ್ಯ
-ಶ್ರೀ ರಾಮಾಯಣದ ಮಹಾಪ್ರಸಂಗಗಳು
-ವನದಲ್ಲಿ ಪಾಂಡವರು
-ನಳದಮಯಂತೀ
-ಭಾರತೀಯ ಇತಿಹಾಸ ಪುರಾಣಗಳು
-ವಾಲ್ಮೀಕಿ ಯಾರು?
-ರಾಜಸೂಯ ತಂದ ಅನರ್ಥ
-ದಶಾವತಾರ

ಬಿರುದು
-ವೇದಭೂಷಣ
-ವಾಲ್ಮೀಕಿ ಹೃದಯಜ್ಞ
-ರಾಮಾಯಣಾಚಾರ್ಯ
-ಮಹಾಭಾರತಾಚಾರ್ಯ
-ವಿದ್ವನ್ಮಣಿ

ಗೌರವ
-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
-ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ವೇದ ಸಂಸ್ಕೃತಿ ಮಾಲೆ)
-ಗೌರವ ಡಾಕ್ಟರೆಟ್‌- ಕರ್ನಾಟಕ
-ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು
-ಕರ್ನಾಟಕ ಕಲಾಶ್ರೀ,ಸಂಗೀತ ನೃತ್ಯ ಅಕಾಡೆಮಿ
-ಗಮಕರತ್ನಾಕರ,ಕರ್ನಾಟಕ ಸರಕಾರ

-ಎಂ.ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ

Advertisement

Udayavani is now on Telegram. Click here to join our channel and stay updated with the latest news.

Next