Advertisement

ಬಿಜೆಪಿ ಹಿರಿಯ ಮುಖಂಡ ಸತೀಶ್‌ ಪ್ರಭು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ

05:09 PM May 08, 2023 | Team Udayavani |

ಮಂಗಳೂರು: ಬಿಜೆಪಿಯ ಹಿರಿಯ ಮುಖಂಡ ಸತೀಶ್‌ ಪ್ರಭು ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ವಿಧಾನಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

Advertisement

ಬಿಜೆಪಿ ಮುಳುಗುತ್ತಿದೆ:ಈ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್‌ ಅವರು, ಬಿಜೆಪಿ ಮುಳುಗುತ್ತಿರುವ ಹಡಗು. ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಸುನಾಮಿ ರೀತಿಯಲ್ಲಿ ಬರುತ್ತಿದ್ದಾರೆ. 47 ಮಂದಿ ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್‌, ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ 6 ಮಂದಿ ವಿಧಾನಪರಿಷತ್‌ ಸದಸ್ಯರಿದ್ದಾರೆ. ಬಿಜೆಪಿ ಮುಳುಗತ್ತಿದ್ದು ಸದ್ಯ ಪೂರ್ಣ ಮುಳುಗುವುದರಲ್ಲಿ ಸಂಶಯವಿಲ್ಲ. ಈ ಬಾರಿ ಎಲ್ಲೆಡೆಯೂ ಜನರಿಂದ ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಕಾಂಗ್ರೆಸ್‌ ಸರಕಾರ ರಚಿಸುವುದರಲ್ಲಿ ಯಾರಿಗೂ ಸಂಶಯ ಬೇಡ ಎಂದು ಹೇಳಿದರು.

ಶಾಸಕ ರೋಜಿ ಜಾನ್‌ ಅವರು ಮಾತನಾಡಿ, ಸತೀಶ್‌ ಪ್ರಭು ಅವರ ಸೇರ್ಪಡೆಯಿಂದ ಜಿಲ್ಲಾ ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ಬರಲಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಎಲ್ಲ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಸತೀಶ್‌ ಪ್ರಭು ಜೊತೆಯಲ್ಲಿ ಬಿಜೆಪಿ ಕಾರ್ಯಕರ್ತರಾದ ರಜತ್‌ ಆರ್‌.ಕಾಮತ್‌, ದೀಕ್ಷಾ ಕಾಮತ್‌, ಸಂತೋಷ್‌ ಶೆಟ್ಟಿ, ರಾಜೇಶ್‌ ಕಾಮತ್‌ ಅವರೂ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಪಕ್ಷದ ಅಭ್ಯರ್ಥಿ ಜೆ.ಆರ್‌.ಲೋಬೋ, ಪಕ್ಷದ ಪ್ರಮುಖರಾದ ಶಶಿಧರ ಹೆಗ್ಡೆ, ಪಿ.ವಿ.ಮೋಹನ್‌, ನವೀನ್‌ ಡಿ’ಸೋಜಾ, ಲುಕಾ¾ನ್‌ ಬಂಟ್ವಾಳ, ಲಾವಣ್ಯ ಬಲ್ಲಾಳ್‌, ಪ್ರಕಾಶ್‌ ಸಾಲ್ಯಾನ್‌ ಉಪಸ್ಥಿತರಿದ್ದರು.

Advertisement

ಸತೀಶ್‌ ಪ್ರಭು ಅವರು 1988ರಿಂದ ಬಿಜೆಪಿ ಯುವಮೋರ್ಚಾದಲ್ಲಿ, ವಿ.ಸಭಾ ಕ್ಷೇತ್ರದ ಅಧ್ಯಕ್ಷರಾಗಿ, ಜಿಲ್ಲಾ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. ಸಂಘನಿಕೇತನ ಗಣೇಶೋತ್ಸವದ ಅಧ್ಯಕ್ಷರಾಗಿದ್ದರು. ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿದ್ದಾರೆ.

ಬಿಜೆಪಿಯಲ್ಲಿ ಜನಹಿತ ಸಾಧನೆ ಅಸಾಧ್ಯ: ಸತೀಶ್‌ ಪ್ರಭು
ಸುಮಾರು ಮೂರೂವರೆ ದಶಕದಿಂದ ಬಿಜೆಪಿಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಯಾವುದೇ ಅಧಿಕಾರ, ಹುದ್ದೆಗಾಗಿ ನಾನು ರಾಜಕೀಯಕ್ಕೆ ಸೇರಿಲ್ಲ. ಜನಹಿತ ಸಾಧನೆ ನನ್ನ ಉದ್ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿಯಲ್ಲಿ ಇದು ಅಸಾಧ್ಯ ಎಂಬುದಾಗಿ ಮನಗಂಡು ಜನಹಿತ ಸಾಧನೆಯನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದೇನೆ. ಈ ಜಿಲ್ಲೆಯಲ್ಲಿ ಈ ಹಿಂದೆಯೂ ಜಿಎಸ್‌ಬಿ ಸಮಾಜಕ್ಕೆ ಸೇರಿದ ಪ್ರತಿನಿಧಿಗಳು ಸಾಧನೆ ಮಾಡಿ ಕಾಂಗ್ರೆಸ್‌ ಪಕ್ಷದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಅಂತಹ ಗತವೈಭವವನ್ನು ಮರಳಿ ತರಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಉದ್ದೇಶ ನನ್ನದಾಗಿದೆ ಎಂದು ಸತೀಶ್‌ ಪ್ರಭು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next