ಬೀದರ: ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ವ್ಯಕ್ತಿ ಸಾರ್ಥಕ ಬದುಕಿಗಾಗಿ ನಿಸ್ವಾರ್ಥ ಸೇವೆ ಮಾಡುವುದು ಅಗತ್ಯವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘ ಮತ್ತು ಉಪನ್ಯಾಸಕರ ಸಂಘ ಹಮ್ಮಿಕೊಂಡಿದ್ದ ನೂತನ ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಅವರಿಗೆ ಸನ್ಮಾನ ಸಮಾರಂಭ ಮತ್ತು ನಿವೃತ್ತ ಡಿಡಿಪಿಯು ಎಂ. ಆಂಜನೇಯ, ನಿವೃತ್ತ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಹಣಮಂತರಾವ ಮೈಲಾರೆ ಅವರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟು-ಸಾವುಗಳ ಮಧ್ಯೆ ಪವಿತ್ರವಾದ ಬದುಕು ರೂಪಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ನೊಂದು-ಬೆಂದವರ, ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಛಲ ನಮ್ಮದಾಗಬೇಕು. ಜ್ಯೋತಿ, ಸಂಜೀವಿನಿ ಸೇರಿದಂತೆ ಸರ್ಕಾರದಿಂದ ಕಾಲಕಾಲಕ್ಕೆ ಸಿಗುವ ಎಲ್ಲ ಸೌಲಭ್ಯಗಳು ಪ್ರತಿಯೊಬ್ಬ ನೌಕರಸ್ಥನಿಗೆ ಮುಟ್ಟಿಸಬೇಕಾಗಿದೆ. ಹಳೇ ಪಿಂಚಣಿ ವ್ಯವಸ್ಥೆ ಮುಂದುವರೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಯಾರೂ ದೃತಿಗೆಡುವ ಅಗತ್ಯವಿಲ್ಲ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ. ಆಂಜನೇಯ, ಬೀದರ ಜಿಲ್ಲೆಯ ನೆಲ, ಜಲ, ಭಾಷೆ ನನ್ನ ಮನಸೂರೆಗೊಂಡಿದೆ. 10 ತಿಂಗಳ ಅವಧಿಯಲ್ಲಿ ಪಪೂ ಇಲಾಖೆಯಲ್ಲಿ ಉಪನಿರ್ದೇಶಕನಾಗಿ ತೃಪ್ತಿದಾಯಕ ಸೇವೆ ಮಾಡಿದ್ದೇನೆಂಬ ಸಂತೃಪ್ತಿ ನನಗಿದೆ. ಜಿಲ್ಲೆಯ ಮಕ್ಕಳಿಗೆ ಮಾರ್ಗದರ್ಶನದ ಕೊರತೆಯಿದೆ, ವಿನಃ ಪ್ರತಿಭೆಯಲ್ಲ ಎಂದು ಹೇಳಿದರು.
Related Articles
ನೂತನ ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಬಿಲ್ ಮತ್ತು ಬೆಲ್ಗಾಗಿ ಕಾಯದೇ, ಮಕ್ಕಳ ಸರ್ವತೋಮುಖ ವಿಕಾಸದ ಕಡೆ ಚಿತ್ತ ಹರಿಸಬೇಕು ಎಂದು ತಿಳಿಸಿದರು.
ಹಣಮಂತರಾವ ಮೈಲಾರೆ ಮಾತನಾಡಿ, ಎರಡು ಅವಧಿಗೆ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷನಾಗಿ ತ್ರೆçಮಾಸಿಕ, ಅರ್ಧವಾರ್ಷಿಕ ಪರೀಕ್ಷೆಗಳು ಸೇರಿದಂತೆ ಶಿಕ್ಷಕರ ದಿನಾಚರಣೆ ಯಶಸ್ವಿಯಾಗಿ ನಡೆಸಲಾಗಿದೆ. ಪ್ರಾಂಶುಪಾಲರ, ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಲಾಗಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಓಂಕಾಂತ ಸೂರ್ಯವಂಶಿ, ರಾಜಶೇಖರ ಮಂಗಲಗಿ, ಅಮೃತಾ, ಡಾ| ಅರ್ಪಿತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಓಂಪ್ರಕಾಶ ದಡ್ಡೆ ಅವರ “ಆರಾಧ್ಯ ಕಾಯಕ’ ಕೃತಿ ಬಿಡುಗಡೆ ಮಾಡಲಾಯಿತು. ವಿಶ್ರಾಂತ ಡಿಡಿಪಿಯುಗಳಾದ ಶಿವರಾಜ ಪಾಟೀಲ, ಎಂ.ಕೆ ಗಾದಗೆ, ಕಚೇರಿ ಅಧಿಧೀಕ್ಷಕ ಸಂಗನಬಸವ ಪ್ರಮುಖರಾದ ಬಸವರಾಜ ಸ್ವಾಮಿ, ಶ್ರೀಕಾಂತ ಸ್ವಾಮಿ, ಪ್ರಭು ಚಂದ್ರಕಾಂತ ಗಂಗಶೆಟ್ಟಿ, ಸಂಗಪ್ಪ ಕೋರೆ, ಪ್ರಭು ಬುಳ್ಳಾ, ಶಿವರಾಜ ಬೆಲ್ಲಾಪುರೆ, ಭಗವಾನ ಬಿರಾದಾರ, ಬಾಲಾಜಿ ವಾಡೆಕರ್ ಇನ್ನಿತರರಿದ್ದರು. ಸುರೇಶ ಅಕ್ಕಣ್ಣ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯರಾದ ಡಾ| ಮನ್ಮತ ಡೋಳೆ ಸ್ವಾಗತಿಸಿದರು. ಅಶೋಕ ರಾಜೋಳೆ ಮತ್ತು ವಿಜಯಕುಮಾರ ನಿರೂಪಿಸಿದರು. ಶಿವರಾಜ ಪಾಟೀಲ ವಂದಿಸಿದರು.