ಮಳವಳ್ಳಿ: ಮನುಷ್ಯನ ಸ್ವಾರ್ಥದ ಬದುಕು ಸಮಾಜಕ್ಕೆ ಕಂಟಕ ಪ್ರಾಯವಾಗಲಿದೆ ಎಂದು ಮರಳೇಗವಿ ಮಠದ ಪಟ್ಟಾಧ್ಯಕ್ಷ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು.
ಚನ್ನಪಟ್ಟಣ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಮುಡುಕುತೊರೆ ತೋಪಿನ ಮಠದ ಪಟ್ಟಾಧ್ಯಕ್ಷ ಶ್ರೀ ಮಹಾಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ ಗುರುವಂದನೆ ಸಲ್ಲಿಸಿ ಅವರು ಮಾತನಾಡಿದರು.
ವಿಶಾಲ ಮನೋಭಾವನೆ: ಮನುಷ್ಯ ಭೂಮಿ ಮೇಲಿನ ಅತಿ ಶ್ರೇಷ್ಠ ಜೀವಿ. ಆತನಿಗೆ ಸರಿ-ತಪ್ಪುಗಳ ವಿವೇಚನಾ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಪ್ರತಿಯೊಬ್ಬ ಮನುಷ್ಯನ ಹುಟ್ಟಿಗೆ ಒಂದು ವಿಶೇಷತೆಯಿದೆ. ಹುಟ್ಟು ಸಾವು ಖಚಿತ, ಇವೆರಡರ ನಡುವಿನ ಜೀವನದಲ್ಲಿ ಸಾಮಾಜಿಕ ಕಳಕಳಿ, ತ್ಯಾಗ ಪರಂಪರೆಯ ವಿಶಾಲ ಮನೋಭಾವನೆ ಇರಬೇಕು. ಸ್ವಾರ್ಥದ ಬದುಕು ಸಮಾಜಕ್ಕೆ ಕಂಟಕ ಪ್ರಾಯ, ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸಮಾಜ ಸೇವೆ ಮಾಡುವಂತಹ ಮನೋಭಾವನೆಯನ್ನು ತಾಯಂದಿರು ಬೆಳೆಸಬೇಕು ಎಂದು ತಿಳಿಸಿದರು.
ಧರ್ಮ ಕಾರ್ಯ ಶಾಶ್ವತ: ಮನುಷ್ಯ ಜೀವನದಲ್ಲಿ ನೆಮ್ಮದಿ, ಶಾಂತಿಯ ಬದುಕಿಗಾಗಿ ಸಮಾಜಸೇವೆ ಮುಖ್ಯ. ಸೇವಾ ಮನೋಭಾವನೆಯ ಸಾವಿರಾರು ಮನಸ್ಸುಗಳು ಸಮಾಜದಲ್ಲಿದ್ದರೆ ಸಮಾಜ ಸಮೃದ್ಧಿ ಯಾಗುತ್ತದೆ. ಮನುಷ್ಯ ಮಾಡಿದ ಸತ್ಕಾರ್ಯದ ಫಲ, ಧರ್ಮ ಕಾರ್ಯಗಳು ಶಾಶ್ವತವಾಗಿ ಉಳಿ ಯುತ್ತವೆ. ದುಡ್ಡು, ಆಸ್ತಿ, ಅಂತಸ್ತು ಯಾವುದೂ ಶಾಶ್ವತವಲ್ಲ ಎಂದು ಕಿವಿಮಾತು ಹೇಳಿದರು.
ಹಲಗೂರಿನ ಬೃಹನ್ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧನಗೂರು ಮಠದ ಶ್ರೀ ಮುಮ್ಮಡಿ ಷಡಕ್ಷರ ದೇಶಿ ಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಚನ್ನ ಬಸವ ಸ್ವಾಮೀಜಿ, ಬಿಜೆಪಿ ಮುಖಂಡ ಮುನಿರಾಜು, ರಾಮನಗರ ಬಿಜೆಪಿ ಜಿಲ್ಲಾ ಅಧ್ಯಕ್ಷ ರುದ್ರೇಶ್, ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಾಲಾಕ್ಷಪ್ಪ ಮಾತನಾಡಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 7 ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಬಡತನ ರೇಖೆಯಲ್ಲಿರುವ 5 ಜನರಿಗೆ ಧನ ಸಹಾಯ ನೀಡಲಾಯಿತು. ಇದೇ ವೇಳೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಎಚ್.ಎಂ.ಶಿವಸ್ವಾಮಿ, ಮೂರ್ತಿ, ಬಸವರಾಜು, ಎಂ.ರೇವಣ್ಣ, ನಾಗೇಶ್, ನಾಗೇಂದ್ರ ಶೆಟ್ರಾ ಸರ್ಪೇಶ್ ಮತ್ತು ವೀರಶೈವ ಸಮಾಜದ ಮುಖಂಡರು ಉಪಸ್ಥಿತರಿದ್ದರು.