Advertisement

Crime: ಸೆಕ್ಯೂರಿಟಿ ಗಾರ್ಡ್‌ ಕೊಲೆ; ಆಕಸ್ಮಿಕ ಸಾವು ಎಂದು ಭಾವಿಸಿದ್ದ ಪೊಲೀಸರು

12:38 PM Jan 12, 2024 | Team Udayavani |

ಬೆಂಗಳೂರು:  ಎಚ್‌ಎಸ್‌ಆರ್‌ ಲೇಔಟ್‌ನ ಎರಡನೇ ಸೆಕ್ಟರ್‌ನಲ್ಲಿ ಮನೆಯೊಂದರ ಸೆಕ್ಯೂರಿಟಿ ಗಾರ್ಡ್‌ ಕೊಲೆಯಾಗಿದ್ದು, ಈ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಆಂಧ್ರಪ್ರದೇಶ ಮೂಲದ ವೆಂಕಟರಮಣ ನಾಯಕ್‌ (35) ಕೊಲೆಯಾದವರು.

ಆಂಧ್ರಪ್ರದೇಶ ಮೂಲದ ವೆಂಕಟರಮಣ ನಾಯಕ್‌ ಮತ್ತು ಪತ್ನಿ ನಂದಿನಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ದಂಪತಿ ಎಚ್‌ಎಸ್‌ಆರ್‌ ಲೇಔಟ್‌ನ ಸೆಕ್ಟರ್‌ 2ರಲ್ಲಿರುವ ಮನೆಯೊಂದರಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅದೇ ಮನೆ ಮಾಲೀಕರು, ಕಟ್ಟಡದ ಕೆಳಭಾಗದಲ್ಲಿರುವ ಮನೆಯನ್ನು ದಂಪತಿ ಮತ್ತು ಇಬ್ಬರು ಮಕ್ಕಳ ವಾಸಕ್ಕೆ ಬಿಟ್ಟುಕೊಟ್ಟಿದ್ದಾರೆ. ವೆಂಕಟರಮಣ ನಾಯಕ್‌ ಬೆಳಗ್ಗೆ ಗೃಹೋಪಯೋಗಿ ಶೋ ರೂಮ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ತಾವು ವಾಸವಾಗಿರುವ ಮನೆಯ ಸೆಕ್ಯೂರಿಟಿ ಗಾರ್ಡ್‌ ಆಗಿಯೂ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಬಾತ್‌ ರೂಮ್‌ ಬಾಗಿಲು ಬಳಿ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಮರು ದಿನ ಬೆಳಗ್ಗೆ ಅದನ್ನು ಗಮನಿಸಿದ ಪತ್ನಿ ನಂದಿನಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರಿಗೆ ಮೇಲ್ನೋಟಕ್ಕೆ ಆಕಸ್ಮಿಕ ಘಟನೆ ಎಂದು ಕಂಡರೂ, ಬಳಿಕ ಪ್ರಾಥಮಿಕ ತನಿಖೆ ನಡೆಸಿದಾಗ ಕೊಲೆ ಎಂಬುದು ಗೊತ್ತಾಗಿದೆ. ಹೀಗಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮತ್ತೂಂದೆಡೆ ವೆಂಕಟರಮಣ ನಾಯಕ್‌ ಪತ್ನಿ ನಂದಿನಿ ಮೊಬೈಲ್‌ಗೆ ಒಂದೇ ನಂಬರ್‌ನಿಂದ ಹಲವು ಬಾರಿ ಕರೆ ಬಂದಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next