ವಿಶಾಖಪಟ್ಟಣ: ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಜಯ ಗಳಿಸಿದ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಇಂದು ಮತ್ತೆ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಸಿದ್ದವಾಗಿದೆ. ವಿಶಾಖಪಟ್ಟಣದಲ್ಲಿ ಟಾಸ್ ಗೆದ್ದ ಸ್ಟೀವ್ ಸ್ಮಿತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ನಾಯಕ ರೋಹಿತ್ ಶರ್ಮ ಮರಳಿರುವುದು ಭಾರತಕ್ಕೆ ಹೆಚ್ಚಿನ ಬಲ ಮೂಡಿಸಿದೆ. ಇವರಿಗಾಗಿ ಇಶಾನ್ ಕಿಶನ್ ಜಾಗ ಬಿಡಬೇಕಾಗುತ್ತದೆ. ರೋಹಿತ್ – ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅಲ್ಲದೆ ಶಾರ್ದೂಲ್ ಠಾಕೂರ್ ಬದಲಿಗೆ ಅಕ್ಷರ್ ಪಟೇಲ್ ತಂಡಕ್ಕೆ ಮರಳಿದ್ದಾರೆ.
ಆಸ್ಟ್ರೇಲಿಯಾ ತಂಡದಲ್ಲಿ ಇಂದು ಎರಡು ಬದಲಾವಣೆ ಮಾಡಲಾಗಿದೆ. ಮೊದಲ ಪಂದ್ಯದಲ್ಲಿ ಹೊರಗುಳಿದಿದ್ದ ನಥನ್ ಎಲ್ಲಿಸ್ ಮತ್ತು ಅಲೆಕ್ಸ್ ಕ್ಯಾರಿ ಇಂದು ಆಡುವ ಅವಕಾಶ ಪಡೆದಿದ್ದಾರೆ. ಅವರಿಗಾಗಿ ಜೋಶ್ ಇಂಗ್ಲಿಶ್ ಮತ್ತು ಗ್ಲೆನ್ ಮ್ಯಾಕ್ಸವೆಲ್ ಜಾಗ ತೆರವು ಮಾಡಿದ್ದಾರೆ.
ಇದನ್ನೂ ಓದಿ:ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದ ಬಸ್: ಕನಿಷ್ಠ 16 ಮಂದಿ ಮೃತ್ಯು
Related Articles
ವಿಶಾಖಪಟ್ಟಣದ್ದು ಬ್ಯಾಟಿಂಗ್ ಟ್ರ್ಯಾಕ್ ಆಗಿರುವ ಸಾಧ್ಯತೆ ಇದೆ. ಇಲ್ಲಿ ಭಾರತ-ವೆಸ್ಟ್ ಇಂಡೀಸ್ 2019ರಲ್ಲಿ ಕೊನೆಯ ಸಲ ಮುಖಾಮುಖೀಯಾಗಿದ್ದವು. ಭಾರತ 5 ವಿಕೆಟಿಗೆ 387 ರನ್ ರಾಶಿ ಹಾಕಿತ್ತು. ರೋಹಿತ್ (159)-ರಾಹುಲ್ (102) ಮೊದಲ ವಿಕೆಟಿಗೆ 227 ರನ್ ಪೇರಿಸಿದ್ದರು. ಭಾರತ ಈ ಪಂದ್ಯವನ್ನು 107 ರನ್ನುಗಳಿಂದ ಜಯಿಸಿತ್ತು.
ಭಾರತ-ಆಸ್ಟ್ರೇಲಿಯ ವಿಶಾಖ ಪಟ್ಟಣದಲ್ಲಿ ಎದುರಾಗುತ್ತಿರುವುದು ಇದು 2ನೇ ಸಲ. ಮೊದಲ ಪಂದ್ಯ ನಡೆದದ್ದು 2010ರಷ್ಟು ಹಿಂದೆ. ಆಗ ಧೋನಿ ಮತ್ತು ಮೈಕಲ್ ಕ್ಲಾರ್ಕ್ ನಾಯಕರಾಗಿದ್ದರು. ಭಾರತ 5 ವಿಕೆಟ್ಗಳ ಜಯ ಸಾಧಿಸಿತ್ತು. 290 ರನ್ ಚೇಸಿಂಗ್ ವೇಳೆ ಕೊಹ್ಲಿ 118 ರನ್ ಬಾರಿಸಿದ್ದರು.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾ), ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ (ವಿ.ಕೀ), ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ