Advertisement

ಸೀವೇವ್‌ ಬ್ರೇಕರ್‌ ತಂತ್ರಜ್ಞಾನ: ಅನುಷ್ಠಾನಕ್ಕೆ ಮೊದಲು ಅಧ್ಯಯನ

01:00 AM Sep 25, 2022 | Team Udayavani |

ಮಂಗಳೂರು: ಉಳ್ಳಾಲದಲ್ಲಿ ಕಡಲ್ಕೊರೆತ ತಡೆಗೆ ಯೋಜಿಸಿರುವ “ಸೀವೇವ್‌ ಬ್ರೇಕರ್‌’ ತಂತ್ರಜ್ಞಾನ ಪರಿಣಾಮಕಾರಿಯೇ? ಅಲ್ಲವೇ?

Advertisement

ಏಕಾಏಕಿ ಹೊಸ ಯೋಜನೆ ಜಾರಿಗೆ ರಾಜ್ಯದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಸೂಕ್ತ ಎಂಬ ಬಗ್ಗೆ ಕರ್ನಾಟಕ ಎಂಜಿನಿಯರಿಂಗ್‌ ರಿಸರ್ಚ್‌ ಸ್ಟೇಷನ್‌(ಕೆಇಆರ್‌ಎಸ್‌)ನಿಂದ ಮಾಡೆಲ್‌ನ ಅಧ್ಯಯನ ಮಾಡಿಸಲು ನಿರ್ಧರಿಸಲಾಗಿದೆ.

ಉಳ್ಳಾಲದ ಬಟ್ಟಪ್ಪಾಡಿ ಕಡಲ ತೀರದಲ್ಲಿ ಕಡಲ್ಕೊರೆತ ಜೋರಾದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದು ವೀಕ್ಷಿಸಿ 25 ಕೋಟಿ ರೂ. ವೆಚ್ಚದಲ್ಲಿ ಸೀವೇವ್‌ ಬ್ರೇಕರ್‌ ತಂತ್ರಜ್ಞಾನದ ಮೂಲಕ ಪರಿಹಾರ ಹುಡುಕುವುದಾಗಿ ಹೇಳಿದ್ದರು. ಇದಕ್ಕೂ ಮೊದಲು ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್‌. ಅಂಗಾರ ಸ್ವತಃ ಕಾಸರಗೋಡು ಬಳಿಯ ನೆಲ್ಲಿಕುನ್ನುವಿಗೆ ತೆರಳಿ ಅಲ್ಲಿ ಜಾರಿಗೊಳಿಸಿದ ಇದೇ ಯೋಜನೆಯನ್ನು ವೀಕ್ಷಿಸಿದ್ದರು. ಅಲ್ಲಿ ಉದ್ಯಮಿ ಯು.ಕೆ. ಯೂಸುಫ್‌ ತಮ್ಮದೇ ಪೇಟೆಂಟ್‌ನ ಸೀವೇವ್‌ ಬ್ರೇಕರ್‌ನ್ನು ಐದು ತಿಂಗಳ ಹಿಂದೆಯಷ್ಟೇ ನಿರ್ಮಿಸಿದ್ದರು.

ಮಾದರಿ ಅಧ್ಯಯನ
ಮಂಡ್ಯದಲ್ಲಿರುವ ಕೆಇಆರ್‌ಎಸ್‌ ಮಾಡೆಲ್‌ ಸ್ಟಡಿ ಮಾಡುವುದರಲ್ಲಿ ಪರಿಣತಿ ಹೊಂದಿದೆ. ಈಗಾ ಗಲೇ ಅದರ ತಜ್ಞರು ಬಟ್ಟಪ್ಪಾಡಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೆಲ್ಲಿಕುನ್ನುವಿನಲ್ಲಿರುವ ಸಮುದ್ರದ ಅಲೆಗಳ ತೀವ್ರತೆ ಹಾಗೂ ಬಟ್ಟಪ್ಪಾಡಿಯ ಅಲೆಗಳ ತೀವ್ರತೆಯಲ್ಲಿ ವ್ಯತ್ಯಾಸಗಳಿರಬಹುದಾಗಿದ್ದು, ಇಲ್ಲಿಗೆ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂದು ತಿಳಿಯುವುದು ಈ ಅಧ್ಯಯನದ ಉದ್ದೇಶ. ಅಧ್ಯಯನ ಆರಂಭಿಸಲು ನಿರ್ದಿಷ್ಟ ಮೊತ್ತವನ್ನು ಒದಗಿಸಲು ಕೆಇಆರ್‌ಎಸ್‌ನವರು ಕೋರಿದ್ದಾರೆ. ತಮ್ಮ ವಿಶಾಲ ಕ್ಯಾಂಪಸ್‌ನಲ್ಲಿ ಬಟ್ಟಪ್ಪಾಡಿಯ ಕಡಲತೀರದ ಮಾದರಿ ಯನ್ನು ಸೃಷ್ಟಿಸಿ ಅದರಲ್ಲಿ ಇದೇ ರೀತಿಯ ಕಡಲ್ಕೊರೆತ, ಸೀವೇವ್‌ ಬ್ರೇಕರ್‌ನ ಪರಿಣಾಮಕಾರಿತನದ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ.

ಯಾಕಾಗಿ ಮಾಡೆಲ್‌ ಸ್ಟಡಿ
ಲಭ್ಯ ಮಾಹಿತಿಯಂತೆ ಸೀವೇವ್‌ ಬ್ರೇಕರ್‌ ಬಗ್ಗೆ ಉನ್ನತ ಅಧಿಕಾರಿಗಳು ಚರ್ಚಿಸಿದ್ದು ಏಕಾಏಕಿ ಇದನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತ ವಾಗಿತ್ತು. ಕಡಲಿಗೆ ಕಲ್ಲು ಹಾಕುವ ಬದಲು ಕಾಂಕ್ರೀಟ್‌ನ 50 ಅಡಿ ಉದ್ದ, 20 ಅಡಿ ಅಗಲ, 15ರಿಂದ 20 ಅಡಿ ಎತ್ತರದ ಫ್ರೇಮ್‌ ನಿರ್ಮಿಸಿ ಅದರಲ್ಲಿ ಮರಳು ತುಂಬಿಸುವ ಸೀವೇವ್‌ ಬ್ರೇಕರ್‌ ನಿರ್ಮಿ ಸುವುದು ನೆಲ್ಲಿಕುನ್ನು ಮಾದರಿ. ಇದು ಹೊಸ ತಂತ್ರಜ್ಞಾನ, ಅಲ್ಲದೆ ಇನ್ನೂ ವರ್ಷ ಕೂಡ ಆಗಿಲ್ಲ. 25 ಕೋಟಿ ರೂ. ವ್ಯಯಿಸಿ ಮತ್ತೆ ಕಡಲ್ಕೊರೆತ ಮುಂದುವರಿದರೆ ಏನು ಮಾಡುವುದು ಎಂಬ ಕಾರಣಕ್ಕೆ ಈ ಮಾಡೆಲ್‌ ಅಧ್ಯಯನ ಮಾಡಲು ಚಿಂತಿಸಲಾಗುತ್ತಿದೆ.

Advertisement

ಸೀ ಬ್ರೇಕರ್‌ ಕುರಿತು ತಾಂತ್ರಿಕ ವರದಿಯನ್ನು ಶೀಘ್ರ ಪಡೆ ಯುತ್ತೇವೆ. ಆ ಬಳಿಕ ಕಡಲ್ಕೊ ರೆತ ತಡೆಯುವ ಯೋಜನೆ ಯನ್ನು ಕೈಗೊಳ್ಳಲಿದ್ದೇವೆ.
– ಎಸ್‌.ಅಂಗಾರ,
ಬಂದರು, ಮೀನುಗಾರಿಕೆ ಸಚಿವರು


-ವೇಣುವಿನೋದ್‌ ಕೆ.ಎಸ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next