Advertisement

ಚೆನ್ನಮ್ಮನ ಕುಡಿಗಳ ಚದುರಿದ ಚಿತ್ರಗಳು

10:29 AM Oct 20, 2019 | Lakshmi GovindaRaju |

ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ ಮೊದಲ ಭಾರತೀಯ ನಾರಿ ಚೆನ್ನಮ್ಮ. ಈ ಸಂಗತಿ, ಕರುನಾಡಿನ ರೋಮಾಂಚಕ ಪುಳಕ ಕೂಡ. ಆ ಹೆಮ್ಮೆಯಲ್ಲೇ ಬದುಕುತ್ತಿರುವ ಆಕೆಯ ವಂಶಸ್ಥರ ಇಂದಿನ ಚಿತ್ರ, ಲೋಕದ ಕಣ್ತೆರೆಸುತ್ತಿಲ್ಲ. ಚೆನ್ನಮ್ಮನ ವಂಶದ ಕುಡಿಗಳು ಈಗ ಎಲ್ಲಿದ್ದಾರೆ?

Advertisement

ಹಿಂದೂ ಯಾರೂ ಇಲ್ಲ… ಮುಂದೂ ಯಾರೂ ಇಲ್ಲ..
ಚೆನ್ನಮ್ಮಳಂಥವರು ಯಾರಿಲ್ಲ… //ಸೋಬಾನವ//
ಚೆನ್ನಮ್ಮನಂಥವರು ಯಾರಿಲ್ಲ ಭಾರತದಾಗ
ಫಿರಂಗ್ಯಾರ ಮೂಗ ಕೊಯ್ದಾಳ //ಸೋಬಾನವ //

ಹೌದು… ಕಿತ್ತೂರು ಚೆನ್ನಮ್ಮ ಹೇಗೋ, ಆಕೆಯ ವಂಶಸ್ಥರೂ ಹಾಗೇ. ಎಂಟು ತಲೆಮಾರು ಉರುಳಿದರೂ, ಅದೇ ಸ್ವಾಭಿಮಾನದ ಕಿಚ್ಚು ಅವರೊಳಗಿದೆ. ಇನ್ನೊಬ್ಬರ ಮುಂದೆ ಕೈಯೊಡ್ಡಿ ನಿಲ್ಲುವ ಜಾಯಮಾನದವರಲ್ಲ. ಒಂದು ಕಾಲಕ್ಕೆ ಐದು ಲಕ್ಷ ಎಕರೆಗೂ ಅಧಿಕ ಭೂ ಒಡೆತನ ಹೊಂದಿದ ದೊಡ್ಡ ದೇಸಗತಿ ಸಂಸ್ಥಾನದ ಒಡೆಯರು, ಈಗ ಬರೀ 2-3 ಎಕರೆ ಭೂಮಿಯ ಮಾಲೀಕರು! ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ ಮೊದಲ ಭಾರತೀಯ ನಾರಿ ಚೆನ್ನಮ್ಮ. ಈ ಸಂಗತಿ ಕರುನಾಡಿನ ರೋಮಾಂಚಕ ಪುಳಕ ಕೂಡ.

ಆ ಹೆಮ್ಮೆಯಲ್ಲೇ ಬದುಕುತ್ತಿರುವ ಆಕೆಯ ವಂಶಸ್ಥರ ಇಂದಿನ ಚಿತ್ರ, ಲೋಕದ ಕಣ್ತೆರೆಸುತ್ತಿಲ್ಲ. ತೋಳಲ್ಲಿನ ಶಕ್ತಿ ಕುಗ್ಗುವಂತೆ, ತಮ್ಮ ಹೊಲದಲ್ಲಿ ಉತ್ತಿಬಿತ್ತಿ ಬೆಳೆಯುತ್ತ, ಕೂಲಿ ಮಾಡಿಯಾದರೂ, ಬದುಕು ಕಂಡುಕೊಳ್ಳುವ ಇವರಿಗೆ ತಲೆ ಎತ್ತಿಕೊಂಡು ಬದುಕುವ ಆ ಸ್ವಾಭಿಮಾನ ಇವತ್ತಿಗೂ ಇದೆ. ನೂರಿನ್ನೂರು ಹಳ್ಳಿಗಳು, ಲಕ್ಷಾಂತರ ಎಕರೆ ಭೂಮಿ, ಕೋಟ್ಯಂತರ ರೂ. ಮೌಲ್ಯದ ಚಿನ್ನದ ನಾಣ್ಯಗಳು, ಕ್ವಿಂಟಲ್‌ಗ‌ಟ್ಟಲೇ ಬಂಗಾರ, ಲಕ್ಷಗಟ್ಟಲೇ ಕತ್ತಿ, ಗುರಾಣಿ, ಸಾವಿರಾರು ಕುದುರೆ- ಒಂಟೆಗಳು, ದೊಡ್ಡ ಗಜಪಡೆ… ಅಂದು ಸಂಪತ್ಬರಿತವಾಗಿದ್ದ ಕಿತ್ತೂರಿನ ಒಡೆತನದಲ್ಲಿ ಸ್ವಾಭಿಮಾನವೂ ಅಮೂಲ್ಯ ಸಂಪತ್ತು.

ಕಿತ್ತೂರು ದೇಸಗತಿಯ ಮನೆತನ ಮನಸ್ಸು ಮಾಡಿದ್ದರೆ, ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡು, ಆರಾಮವಾಗಿ ಕಾಲ ಕಳೆಯಬಹುದಿತ್ತು. ಬ್ರಿಟಿಷರ ಕಾಲ ಬಿಡಿ, ಸ್ವಾತಂತ್ರ್ಯ ಸಿಕ್ಕ ಮೇಲಾದರೂ, ಬಂದ ಸರ್ಕಾರಗಳು ಕಿತ್ತೂರು ಮನೆತನಕ್ಕೆ ಕಿಮ್ಮತ್ತು ಕೊಡಲಿಲ್ಲ. ಸರ್ಕಾರಗಳು ಅವರನ್ನು ನಡೆಸಿಕೊಂಡ ರೀತಿಯೇ ಬೇಸರ ಮೂಡಿಸುವಂಥದ್ದು. ಲಕ್ಷಾಂತರ ಎಕರೆ ಭೂಮಿ ಹೊಂದಿದ್ದ ದೊಡ್ಡ ಸಂಸ್ಥಾನದ ಮಂದಿಯನ್ನು ಗುರುತಿಸುವ ಕೆಲಸವನ್ನು ಯಾರೂ ಮಾಡಲಿಲ್ಲ.

Advertisement

ಚದುರಿ ಹೋದ ಕುಡಿಗಳು…: ಕಿತ್ತೂರು ಚೆನ್ನಮ್ಮ 1824ರ ಯುದ್ಧದ ನಂತರ ಬೈಲಹೊಂಗಲ ಸೆರೆಮನೆ ಸೇರುತ್ತಾಳೆ. ಸಂಗೊಳ್ಳಿ ರಾಯಣ್ಣ ಸೇರಿ ಅನೇಕರು ಮತ್ತೂಂದು ಸುತ್ತು ಹೋರಾಟ ಮಾಡುತ್ತಾರೆ. ಆಗ ಶಿವಲಿಂಗ ರುದ್ರಸರ್ಜನನ್ನು ದೊರೆಯಾಗಿ ನೇಮಿಸುತ್ತಾರೆ. ಆದರೆ, ರಾಯಣ್ಣನ ಕ್ರಾಂತಿಯೂ ವಿಫಲವಾದಾಗ, ಸತತ 3 ತಿಂಗಳ ಕಾಲ ಇಡೀ ಕಿತ್ತೂರು ಅರಮನೆಯನ್ನು ತುಪಾಕಿ ಇಟ್ಟು ಸಿಡಿಸಿ ಧ್ವಂಸ ಮಾಡಿದ ಬ್ರಿಟಿಷರು, ಚೆನ್ನಮ್ಮನ ವಂಶಸ್ಥರೆಲ್ಲರನ್ನೂ ಹಣ್ಣುಗಾಯಿ, ನೀರುಗಾಯಿ ಮಾಡುತ್ತಾರೆ. ಕಿತ್ತೂರಿನ ಕೋಟೆಯನ್ನು ಅಬ್ಬೇಪಾರಿಗಳ ಹೆಸರಿಗೆ ಬರೆದು, ಆ ಕುಟುಂಬಸ್ಥರೆಲ್ಲರನ್ನೂ ದಿಕ್ಕಾಪಾಲು ಮಾಡುತ್ತಾರೆ.

ಚೆನ್ನಮ್ಮನ ಕುಡಿಗಳು ಎಲ್ಲಿದ್ದಾರೆ?: ಪ್ರಸ್ತುಷಿಕ್ಷಿ, ಕಿತ್ತೂರು ಚೆನ್ನಮ್ಮಳ ದೇಸಾಯಿ ಮನೆತನದ ಒಟ್ಟು 11 ಕುಟುಂಬಗಳಿವೆ. ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು- ಹೀಗೆ 110 ಜನ ಬೆಳಗಾವಿ ಮತ್ತು ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. 4 ಮನೆತನಗಳು ಮಹಾರಾಷ್ಟ್ರದ ಗಡಹಿಂಗ್ಲಜ್‌ನಲ್ಲಿ ವಾಸವಿದ್ದರೆ, ಇನ್ನುಳಿದವರು ಬೆಳಗಾವಿ, ಖಾನಾಪೂರದಲ್ಲಿ ಕಾಣಸಿಗುತ್ತಾರೆ. ಬಹಳ ಬೇಡಿಕೊಂಡಿದ್ದರಿಂದ, 1968ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌.ಆರ್‌. ಕಂಠಿ ಅವರು ಕಿತ್ತೂರು ದೇಸಗತಿ ಕುಟುಂಬಗಳಿಗೆ 108 ಎಕರೆ ಭೂಮಿಯನ್ನು ಬೆಳಗಾವಿ ಖಾನಾಪೂರ ರಸ್ತೆಯಲ್ಲಿ ನೀಡಿದ್ದರು.

ಪ್ರತಿ ಕುಟುಂಬಕ್ಕೂ 10 ಎಕರೆ ಭೂಮಿ ಮಾತ್ರ ಇದೆ. ಹಾಗಿದ್ದೂ, ತಮ್ಮ ಮಕ್ಕಳನ್ನು ಓದಿಸಲು, ಬದುಕು ಕಟ್ಟಿಕೊಳ್ಳಲು ಆಗದವರು ತಮ್ಮ ಜಮೀನುಗಳನ್ನು ಮಾರಿಕೊಂಡು ಜೀವಿಸುತ್ತಿದ್ದಾರೆ. ಕಿತ್ತೂರಿನಲ್ಲಿನ ಕೋಟೆಯ 24 ಎಕರೆ ಭೂಮಿಯಲ್ಲಿ ಅತಿಕ್ರಮಣ ನಡೆದಿದೆ. ಇದರ ವಿರುದ್ಧ ಚೆನ್ನಮ್ಮನ ವಂಶಸ್ಥರು ಧ್ವನಿ ಎತ್ತಿದ್ದಾರೆ. “ನಮ್ಮ ವಂಶಸ್ಥರು ಕೋಟೆ ಸೇರಿ ಲಕ್ಷಾಂತರ ಎಕರೆ ಭೂಮಿಯನ್ನು ಸರ್ಕಾರಕ್ಕೆ, ಬಡವರಿಗೆ ಹಾಗೆಯೇ ಬಿಟ್ಟು ಕೊಟ್ಟ ಉದಾರತೆಗಾದರೂ ಮರ್ಯಾದೆ ಕೊಟ್ಟು, ಕೋಟೆಯನ್ನು ರಕ್ಷಿಸಿ. ಅದನ್ನು ಅಭಿವೃದ್ಧಿ ಮಾಡಿ, ಮುಂದಿನ ಪೀಳಿಗೆಗೆ ಚೆನ್ನಮ್ಮಳ ಆದರ್ಶಗಳನ್ನು ತಲುಪಿಸಬೇಕಿತ್ತು’ ಎನ್ನುವುದು, ಶಂಕರಸರ್ಜ ದೇಸಾಯಿ ಅವರ ಕಾಳಜಿ.

ಆದರೆ, ವರ್ಷದಿಂದ ವರ್ಷಕ್ಕೆ ಕೋಟೆ ಶಿಥಿಲಗೊಳ್ಳುತ್ತಿದೆ. ಅಂದು ಕತ್ತೆ ಮೇಲೆ ಹೊತ್ತೂಯ್ದ ಚಿನ್ನದ ಸಂಪತ್ತುಗಳೆಲ್ಲ ಯಾರ್ಯಾರ ಪಾಲಾಗಿವೆಯೋ ಗೊತ್ತಿಲ್ಲ. ಚೆನ್ನಮ್ಮಳ ಕತ್ತಿ, ಕಿರೀಟ, ಕವಚ, ಮತ್ತು ಅವಳ ಸೈನ್ಯದಲ್ಲಿದ್ದವರ ಅನೇಕ ವಸ್ತುಗಳು ಲಂಡನ್‌ ವಸ್ತುಸಂಗ್ರಹಾಲಯ ಸೇರಿವೆ. ಅವುಗಳನ್ನು ಅಲ್ಲಿಂದ ತರುವ ಕೆಲಸವನ್ನಾದರೂ ಸರ್ಕಾರಗಳು ಮಾಡಬೇಕಿತ್ತು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ದೇಸಾಯಿ ಕುಟುಂಬದ ಸದಸ್ಯರನ್ನು ಕಾಯಂ ಸದಸ್ಯರನ್ನಾಗಿಸುವಂತೆ ಮಾಡಿಕೊಂಡ ಮನವಿಗೆ ಬೆಲೆ ಸಿಕ್ಕಿಲ್ಲ. ಚೆನ್ನಮ್ಮ ಹುಟ್ಟಿದ ಕಾಕತಿಯಲ್ಲೂ ಅವಳ ಅರಮನೆ, ಅವಳು ಹುಟ್ಟಿದ ಮನೆ ಪಾಳುಬಿದ್ದಿವೆ. ಲಾವಣಿ, ಸೋಬಾನೆ ಪದ, ಚರಿತ್ರೆಯ ಪುಟಗಳಲ್ಲಿ ಮಾತ್ರವೇ ಚೆನ್ನಮ್ಮನ ಸ್ಮರಣೆ ಕಾಣುತ್ತಿದೆ.

ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ್ದೇ ತಪ್ಪಾ?: ಬ್ರಿಟಿಷರ ಜೊತೆ ಕೈ ಜೋಡಿಸಿದವರ ಅರಮನೆ, ಅರಸೊತ್ತಿಗೆಗಳು ಇಂದಿಗೂ ಥಳಥಳ ಹೊಳೆಯುತ್ತಿವೆ. ಆದರೆ, ಯಾರು ಸ್ವಾತಂತ್ರ್ಯಕ್ಕಾಗಿ ದನಿ ಎತ್ತಿದರೋ ಅವರ ಅರಮನೆ, ಅರಸೊತ್ತಿಗೆ ಇಂದು ಪಾಳುಬಿದ್ದಿವೆ ಎನ್ನುವುದು ಚೆನ್ನಮ್ಮನ ವಂಶಸ್ಥರ ಧ್ವನಿ.

ಕಿತ್ತೂರು ರಾಜ್ಯದ ಕಥೆ: ಕಿತ್ತೂರು ಸಂಸ್ಥಾನ ಆರಂಭಗೊಂಡಿದ್ದು, 1585ನೇ ಶತಮಾನದಲ್ಲಿ. ಇದನ್ನು ಕಟ್ಟಿದ್ದು ಚಿಕ್ಕಮಲ್ಲಪ್ಪ ಶೆಟ್ಟಿ ಮತ್ತು ಹಿರೇಮಲ್ಲಪ್ಪ ಶೆಟ್ಟಿ. ಇವರ ನಂತರ 8 ರಾಜರು ಕಿತ್ತೂರನ್ನು ಆಳಿದರು. ಮಲ್ಲಸರ್ಜ ದೇಸಾಯಿಗೆ ಕಿತ್ತೂರು ರಾಣಿ ಚೆನ್ನಮ್ಮ ಎರಡನೇ ಪತ್ನಿಯಾಗಿ ಬಂದಾಗ, ಅವರಿಗೆ ಮಕ್ಕಳಾಗಲಿಲ್ಲ. ಆಗ ಅವರದೇ ವಂಶಸ್ಥರಾದ ಶಿವಲಿಂಗರುದ್ರ ಸರ್ಜ ದೇಸಾಯಿಯನ್ನು ದತ್ತು ಪಡೆದು, ಕಿತ್ತೂರಿನ ರಾಜನನ್ನಾಗಿ ಮಾಡಲಾಯಿತು. ಇಲ್ಲಿಯೇ ಶುರುವಾಗಿದ್ದು ಬ್ರಿಟಿಷರಿಗೂ ಮತ್ತು ಚೆನ್ನಮ್ಮನಿಗೂ ಯುದ್ಧ. ಮೊದಲ ಕಿತ್ತೂರು ಯುದ್ಧದಲ್ಲಿ ಥ್ಯಾಕರೆ ಸಾವನ್ನಪ್ಪಿ, ಬ್ರಿಟಿಷರು ಸೋಲುತ್ತಾರೆ.

ನಂತರ ನಡೆದ ಯುದ್ಧದಲ್ಲಿ ಬ್ರಿಟಿಷರು ಕುತಂತ್ರದಿಂದ ಕಿತ್ತೂರನ್ನು ಸೋಲಿಸಿ, ಚೆನ್ನಮ್ಮಳನ್ನ ಸೆರೆಹಿಡಿಯುತ್ತಾರೆ. ಈ ವೇಳೆಗೆ ಅವರ ವಂಶಸ್ಥರೆಲ್ಲರೂ ಚೆಲ್ಲಾಪಿಲ್ಲಿಯಾಗುತ್ತಾರೆ. ಮಹಾರಾಷ್ಟ್ರ ಭಾಗದಲ್ಲಿ ಹೋಗಿ, ಹೊಸ ಬದುಕು ಕಟ್ಟಿಕೊಂಡರು. ಸ್ವಾತಂತ್ರÂದ ನಂತರ ಅವರೆಲ್ಲ ಮತ್ತೆ ಕಿತ್ತೂರಿಗೆ ಬಂದು ತಮ್ಮ ದಾಖಲೆಗಳನ್ನು ಪರಿಶೀಲಿಸಿದಾಗಲೇ ಗೊತ್ತಾಗಿದ್ದು, ಅವರ ವಂಶಸ್ಥರ ಹೆಸರಲ್ಲಿ ಯಾವುದೇ ಭೂಮಿ, ಆಸ್ತಿಗಳು ಇರಲೇ ಇಲ್ಲ ಅಂತ!

ಚೆನ್ನಮ್ಮ ವಂಶವೃಕ್ಷ
ರಾಣಿ ಚೆನ್ನಮ್ಮ
ಶಿವಲಿಂಗ ರುದ್ರ ಸರ್ಜ (ಚೆನ್ನಮ್ಮಳ ದತ್ತಕ ಪುತ್ರ, ಮೊಮ್ಮಗ )
ಶಿವಲಿಂಗಪ್ಪ ಸರ್ಜ ದೇಸಾಯಿ
ಅಪ್ಪಾ ಸಾಹೇಬ ಸರ್ಜ ದೇಸಾಯಿ
ಮಲ್ಲಪ್ಪ ಸರ್ಜ ದೇಸಾಯಿ
ಶಂಕರ ಸರ್ಜ ದೇಸಾಯಿ
ಬಾಳಾಸಾಹೇಬ ಸರ್ಜ ದೇಸಾಯಿ
ಉದಯ ಸರ್ಜ ದೇಸಾಯಿ

ಮೈಸೂರು ದಸರಾ ನಡೆದ ಮಾದರಿಯಲ್ಲಿ ಕಿತ್ತೂರು ಉತ್ಸವ ಕೂಡ ನಡೆಯಬೇಕು. ಅಲ್ಲಿ ಕಿತ್ತೂರು ವಂಶಸ್ಥರಿಗೆ ಸರ್ಕಾರದಿಂದ ಗೌರವ ಸಿಕ್ಕುವಂಥ ವ್ಯವಸ್ಥೆ ಮಾಡಬೇಕು. ಈ ದೇಶಕ್ಕೆ ಪ್ರಾಣ ಕೊಟ್ಟವರ ಹೊಟ್ಟೆಯಲ್ಲಿ ಹುಟ್ಟಿದವರನ್ನು ಕನಿಷ್ಠವಾಗಿ ನೋಡುವುದು ಶೋಭೆಯಲ್ಲ.
-ಉದಯಸರ್ಜ ದೇಸಾಯಿ, ರಾಣಿ ಚೆನ್ನಮ್ಮಳ ಮೊಮ್ಮಗ, 7ನೇ ತಲೆಮಾರು

* ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next