Advertisement

ದಲಿತ ದೌರ್ಜನ್ಯ ಪ್ರಕರಣದಲ್ಲಿ ರಾಜಿಗೆ ಸೂಚಿಸದಿರಿ

03:36 PM Jun 03, 2023 | Team Udayavani |

ಮಹಾನಗರ: ದಲಿತ ದೌರ್ಜನ್ಯದ ಬಗ್ಗೆ ದೂರು ನೀಡಲು ಬಂದರೆ ಅಂತಹ ಸಂದರ್ಭದಲ್ಲಿ ಪೊಲೀಸರೇ ದೂರುದಾರರನ್ನು ರಾಜಿ ಪಂಚಾಯತಿಕೆಗೆ ಬರುವಂತೆ ಸೂಚಿಸುವುದು ಸರಿಯಲ್ಲ. ಈ ಬಗ್ಗೆ ಎಲ್ಲ ಪೊಲೀಸ್‌ ಅಧಿಕಾರಿಗಳಿಗೂ ಸೂಚನೆ ನೀಡಲಾಗುವುದು ಎಂದು ದ.ಕ. ಜಿಲ್ಲಾ ಪ್ರಭಾರ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಹೇಳಿದ್ದಾರೆ.

Advertisement

ಎಸ್‌ಪಿ ಕಚೇರಿಯಲ್ಲಿ ಶುಕ್ರವಾರ ಜರಗಿದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಹವಾಲು ಆಲಿಕೆ ಸಭೆಯಲ್ಲಿ ಅವರು ಅಹವಾಲಿಗೆ ಸ್ಪಂದಿಸುತ್ತಾ ಮಾತನಾಡಿದರು.

ದಲಿತ ದೌರ್ಜನ್ಯದ ಬಗ್ಗೆ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಎಫ್ಐಆರ್‌ ಬೇಡ. ರಾಜಿ ಪಂಚಾಯಿತಿಕೆ ಮಾಡೋಣ. ನಿಮ್ಮ ದೂರಿನಂತೆಯೇ ಎದುರಿನವರು ಕೂಡ ದೂರು ನೀಡುತ್ತಾರೆ ಎನ್ನುತ್ತಾರೆ. ಅನೇಕ ಕಡೆ ದಲಿತ ದೌರ್ಜನ್ಯ ದೂರುಗಳು ದಾಖಲಾದ ಮರುದಿನ ಪ್ರತಿದೂರು ಕೂಡ ದಾಖಲಾಗುತ್ತಿವೆ. ಇಂತಹ ವಿದ್ಯಮಾನ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಇದರಿಂದ ಸಮರ್ಪಕ ತನಿಖೆಯಾಗಿ ನ್ಯಾಯ ಸಿಗುವುದಿಲ್ಲ’ ಎಂದು ದಲಿತ ಮುಂದಾಳು ಶೇಖರ್‌ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಎಸ್‌ಪಿ ರಿಷ್ಯಂತ್‌ ಅವರು, ಯಾವುದೇ ಘಟನೆಗಳ ಸಂದರ್ಭದಲ್ಲಿ ದೂರು ದಾಖಲಾದರೆ ಅದಕ್ಕೆ ಪ್ರತಿದೂರು ಕೂಡ ನೀಡಬಹುದು. ಇದು ಪ್ರತಿಯೋರ್ವರ ಹಕ್ಕು ಕೂಡ ಆಗಿದೆ. ಆದರೆ ಪೊಲೀಸರೇ ಯಾವುದೇ ಕಾರಣಕ್ಕೂ ತೊಂದರೆಗೊಳಗಾದವರು ದೂರು ನೀಡದಂತೆ ತಡೆಯುವುದು, ರಾಜಿ ಪಂಚಾಯತಿಕೆಗೆ ಪೊಲೀಸರೇ ಆಸಕ್ತಿ ವಹಿಸುವುದು ತಪ್ಪು ಎಂದರು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ನಿಷ್ಕ್ರಿಯ ಈ ಹಿಂದೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ದಲಿತರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನಿಗಾ ವಹಿಸಿ ಕ್ರಮ ಕೈಗೊಳ್ಳುತ್ತಿತ್ತು. ಯಾವುದೇ ಇಲಾಖೆಗೆ ಸಂಬಂಧಿಸಿದ ದೂರುಗಳಿದ್ದರೂ ಅವುಗಳ ಬಗ್ಗೆ ಪರಿಶೀಲನೆ ನಡೆಸುತ್ತಿತ್ತು. ಆದರೆ ಈಗ ಸಂಪೂರ್ಣ ನಿಷಿ¢ಯವಾಗಿದೆ ಎಂದು ಶೇಷಪ್ಪ ದೂರಿದರು. ಇದಕ್ಕೆ ದನಿಗೂಡಿಸಿದ ಶೇಖರ್‌, ಗ್ರಾ.ಪಂ. ಸದಸ್ಯರೋರ್ವರು ನಕಲಿ ಜಾತಿ ಪ್ರಮಾಣಪತ್ರ ಪಡೆದ ಬಗ್ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿ ಎರಡೂವರೆ ವರ್ಷಗಳಾದರೂ ಹಿಂಬರಹ ಕೂಡ ನೀಡಿಲ್ಲ ಎಂದು ಆರೋಪಿಸಿದರು. ಈ ಸಂದರ್ಭ ಮಾತನಾಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಈ ಬಗ್ಗೆ ತನಿಖೆ ನಡೆದಿದ್ದು, ವರದಿಯನ್ನು ಎಡಿಜಿಪಿಯವರಿಗೆ ಸಲ್ಲಿಸಲಾಗಿದೆ ಎಂದರು. ತನಿಖೆ ಭಾರೀ ವಿಳಂಬವಾಗಿ ನಡೆದಿದೆ ಎಂದು ದಲಿತ ಮುಂದಾಳುಗಳು ಅಸಮಾಧಾನ ವ್ಯಕ್ತಪಡಿಸಿದರು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಠಾಣಾ ಸಭೆಗಳ ಮಾಹಿತಿ ನೀಡಿ
ಈಶ್ವರಿ ಶಂಕರ್‌ ಮಾತನಾಡಿ, ಬೆಳ್ತಂಗಡಿ ಪೊಲೀಸರು ತೊಂದರೆಗೊಳಗಾದವರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್‌ ಠಾಣೆಗಳಲ್ಲಿ ನಡೆಯುವ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯ ಮಾಹಿತಿ ದೊರೆಯುತ್ತಿಲ್ಲ ಎಂದರು. ಈ ಬಗ್ಗೆ ಗಮನ ಹರಿಸಲಾಗುವುದು. ಪ್ರತಿ ತಿಂಗಳ ಮೂರನೇ ರವಿವಾರ ಠಾಣಾ ಮಟ್ಟದ ಸಭೆ ನಡೆಸಲಾಗುತ್ತಿದೆ. ಒಂದು ವೇಳೆ ಬೇರೆ ದಿನಾಂಕಗಳಲ್ಲಿ ಸಭೆಗಳು ನಡೆಯುತ್ತಿದ್ದರೆ ಸಂಬಂಧಿಸಿದವರೆಲ್ಲರಿಗೂ ಮಾಹಿತಿ ನೀಡಬೇಕು. ಇದರ ಜವಾಬ್ದಾರಿಯನ್ನು ಬೀಟ್‌ ಪೊಲೀಸರಿಗೆ ವಹಿಸಬೇಕು ಎಂದು ಎಸ್‌ಪಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನೈಜ ಆರೋಪಿಗಳನ್ನು ಬಂಧಿಸಿ
ಶಿಬಾಜೆಯ ಶ್ರೀಧರ ಅವರ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಇದರಲ್ಲಿ ಹಲವರ ಕೈವಾಡವಿದೆ ಎಂದು ದಲಿತ ಮುಂದಾಳು ಎಸ್‌.ಪಿ. ಆನಂದ ಅವರು ಆರೋಪಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಎಸ್‌ಪಿ ಭರವಸೆ ನೀಡಿದರು.

ಪುತ್ತೂರಿನ ಪ್ರಭಾರ ಡಿವೈಎಸ್‌ಪಿ ಗಾನಾ, ಬಂಟ್ವಾಳದ ಪ್ರಭಾರ ಡಿವೈಎಸ್‌ಪಿ ವೇಣುಗೋಪಾಲ್‌ ಉಪಸ್ಥಿತರಿದ್ದರು.

ಸಾಮಾಜಿಕ ಜಾಲ ತಾಣ ಬಳಕೆ ನಿಯಂತ್ರಣದಲ್ಲಿರಲಿ
ವಾಟ್ಸ್‌ಆ್ಯಪ್‌ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಕಳುಹಿಸುವ ಸಂದೇಶಗಳು, ನಡೆಯುವ ಚರ್ಚೆಗಳು ಹಲವಾರು ಘಟನೆಗಳಿಗೆ ಕಾರಣವಾಗುತ್ತಿವೆ. ಇತ್ತೀಚೆಗೆ ನಡೆಯುತ್ತಿರುವ ಪ್ರಕರಣಗಳಲ್ಲಿ ಹೆಚ್ಚಿನವು ಇದೇ ರೀತಿಯ ಕಾರಣದಿಂದ ಉಂಟಾಗಿವೆ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕು. ಪೊಲೀಸ್‌ ಇಲಾಖೆ ಈಗಾಗಲೇ ಸಾಮಾಜಿಕ ಜಾಲತಾಣ ನಿಯಂತ್ರಣ ಘಟಕದ ಮೂಲಕವೂ ನಿಗಾ ವಹಿಸುತ್ತಿದೆ. ಸಾರ್ವಜನಿಕರು ಯಾವುದೇ ರೀತಿಯ ಅನಗತ್ಯವಾದ ಸಂದೇಶಗಳನ್ನು ಕಳುಹಿಸುವುದು, ಫಾರ್ವರ್ಡ್‌ ಮಾಡುವುದು, ಈ ಬಗ್ಗೆ ಪ್ರಚೋದನಾತ್ಮಕವಾಗಿ ಪ್ರತಿಕ್ರಿಯಿಸುವುದು ಮಾಡಬಾರದು ಎಂದು ರಿಷ್ಯಂತ್‌ ಮನವಿ ಮಾಡಿದರು.

ಇತರ ದೂರುಗಳು
ಲೇಡಿಗೋಶನ್‌ ಪರಿಸರದಲ್ಲಿ ಮಕ್ಕಳನ್ನು ದುಡಿಸಿಕೊಂಡು ದೌರ್ಜನ್ಯವೆಸಗಲಾಗುತ್ತಿದೆ ಎಂದು ಶೇಷಪ್ಪ ದೂರಿದರು. ಸಭೆಯಲ್ಲಿ ಪ್ರಸ್ತಾವವಾಗುವ ಬೇರೆ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳ ಬಗ್ಗೆಯೂ ಪೊಲೀಸರು ಗಮನಹರಿಸಿ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಬೇಕು ಎಂದು ವಿಶ್ವನಾಥ್‌ ಮತ್ತಿತರು ಮನವಿ ಮಾಡಿದರು. ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜದಲ್ಲಿ ಹೊಳೆ ಬದಿ ಮನೆಯವರು ಅಳವಡಿಸಿರುವ ಸಿಸಿ ಕೆಮರಾದಿಂದಾಗಿ ಸ್ನಾನ ಮಾಡುವವರಿಗೆ ತೊಂದರೆಯಾಗುತ್ತಿದೆ ಎಂದು ವಿಶ್ವನಾಥ ಅಲೆಕ್ಕಾಡಿ ದೂರಿದರು. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಎಸ್‌ಪಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next