ಬೆಂಗಳೂರು: ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ ಹಣಕಾಸು ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಜು.18 ರಂದು ರಾಜ್ಯಾದ್ಯಂತ 875 ಗ್ರಾಮೀಣ ಹಾಗೂ ಅರೆ ನಗರ ಶಾಖೆಗಳಲ್ಲಿ ಕಿಸಾನ್ ಮೇಳವನ್ನು ಆಯೋಜಿಸಿದೆ.
ರೈತ ಗ್ರಾಹಕರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಎಸ್ಬಿಐ ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮ ಇದಾಗಿದೆ. ರೈತರ ದೂರು ದುಮ್ಮಾನಗಳನ್ನು ಬಗೆಹರಿಸುವುದು ಮತ್ತು ಅವರ ಹಕ್ಕುಗಳ ಬಗ್ಗೆ ವಿವರಿಸುವುದು ಇದರ ಉದ್ದೇಶ. ಕಿಸಾನ್ ಮೇಳದ ಅಂಗವಾಗಿ ಬ್ಯಾಂಕು ತನ್ನ ಕೆಸಿಸಿ ಹೊಂದಿದ ಗ್ರಾಹಕರು ತಮ್ಮ ಖಾತೆಯನ್ನು ನವೀಕರಿಸಿದರೆ ಸಾಲ ಮಿತಿಯನ್ನು ಶೇ.10 ರಷ್ಟು ವಿಸ್ತರಿಸಲು ಮುಂದಾಗಿದೆ.
ಕೆಸಿಸಿ ಖಾತೆಗಳ ನವೀಕರಣ ಮೂಲಕ ಬ್ಯಾಂಕ್ನಿಂದ ಸಿಗುವ ಬಡ್ಡಿ ವಿನಾಯ್ತಿ ಸೌಲಭ್ಯದ ಲಾಭವನ್ನು ಗರಿಷ್ಠವಾಗಿ ಪಡೆದುಕೊಳ್ಳುವಂತೆ ಮತ್ತು ಪ್ರಧಾನ ಮಂತ್ರಿ ಫಸಲು ವಿಮೆ ಯೋಜನೆಯ ಸುರಕ್ಷಾ ಸೌಲಭ್ಯ ಪಡೆಯುವ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ. ಅಲ್ಲದೆ, ಬ್ಯಾಂಕು ಈ ಸಂದರ್ಭದಲ್ಲಿ ಆಸ್ತಿ ಅಡಮಾನ ಕೃಷಿ ಸಾಲ, ಮುದ್ರಾ ಸಾಲ, ಕೃಷಿ ಸಂಬಂಧಿತ ಇತರ ಚಟುವಟಿಕೆಗಳಿಗೆ ಸಾಲ ಹಾಗೂ ಬ್ಯಾಂಕಿನ ಕೃಷಿ-ಉತ್ಪನ್ನಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಿದೆ. ರೈತರು ರುಪೇ ಕಾರ್ಡ್ಗಳನ್ನು ಬಳಸಿಕೊಳ್ಳುವುದರಿಂದ ಆಗುವ ಪ್ರಯೋಜನದ ಅರಿವು ಮೂಡಿಸುವ ಕೆಲಸವೂ ಆಗಲಿದೆ. ಬ್ಯಾಂಕಿನ ವಿವಿಧ
ಯೋಜನೆಗಳ ಬಗ್ಗೆಯೂ ಪರಿಚಯಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.