Advertisement

ಯುವಕರಿಗೆ ಸ್ಪೂರ್ತಿ, ಅಭಿವೃದ್ಧಿಯ ಶಕ್ತಿ ;ಸವಣೂರು ಕೆ. ಸೀತಾರಾಮ ರೈ

11:19 PM Jun 08, 2022 | Team Udayavani |

ಸವಣೂರು ಎಂಬ ಗ್ರಾಮೀಣ ಪ್ರದೇಶವನ್ನು ಶೈಕ್ಷಣಿಕ ಅಡಿಪಾಯವನ್ನಾಗಿಸಿ ಸಂಪನ್ನತೆಯ ಹಾದಿಯಲ್ಲಿ ಮುನ್ನಡೆಸಿ, ಸಾಮಾಜಿಕ ಸಹಕಾರಿ ರಂಗದ ಮೂಲಕ ಕ್ರಾಂತಿ ಮೂಡಿಸಿ ನಾಡು ಕಂಡ ಅಪರೂಪದ ಹಾಗೂ ಅಸಾಮಾನ್ಯ ಸಾಧಕರಾಗಿ ಸವಣೂರ ಶಿಲ್ಪಿ ಎಂಬ ವಿಶೇಷಣತೆಯಿಂದ ಗುರುತಿಸಿಕೊಂಡು ಅಪಾರ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿ ತನ್ನ ಜೀವಮಾನದ ಸಾಧನೆಯಿಂದ ಅಮೃತ ಸದೃಶ ಬದುಕ ರೂಪಿಸಿದ ಆದರ್ಶರಾಗಿರುವ ಕಲ್ಕಾರು ಸೀತಾರಾಮ ರೈಗೆ 2022, ಜೂನ್‌ 9ನೇ ಗುರುವಾರದಂದು ಜನ್ಮ ದಿನದ ಅಮೃತೋತ್ಸವ ಆಚರಣೆಯ ಸಂಭ್ರಮ.

Advertisement

ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಹಕಾರ ಮತ್ತು ಕೃಷಿ ಕ್ಷೇತ್ರಗಳೆಂಬ ಪಂಚಮುಖ ಸಾಧನೆಯ ಸರದಾರ, ಈ ಎಲ್ಲಾ ರಂಗದ ಸಾಧನೆಗಳೇ ಅವರ ವ್ಯಕ್ತಿತ್ವದ ಕಲಶಗಳು. ಅವರೊಬ್ಬ ವ್ಯಕ್ತಿಯಾಗಿ ಅಲ್ಲ ನಾಡಿನ ಶಕ್ತಿಯಾಗಿ ಅಭಿಮಾನ ಭಾಜನರು.

ಶೀಂಟೂರು ನಾರಾಯಣ ರೈ ಯಮುನಾ ದಂಪತಿಯ ಏಳು ಮಂದಿ ಮಕ್ಕಳಲ್ಲಿ ಮೂರನೆಯವರಾದ ಸೀತಾರಾಮ ರೈಗಳು 1948ರಲ್ಲಿ ಜನಿಸಿದರು. ಸೈನಿಕ ಹಾಗೂ ಶಿಕ್ಷಕರಾಗಿದ್ದ ತಂದೆಯ ಶಿಸ್ತು, ಕರ್ತವ್ಯ, ಸಮಯ ಪ್ರಜ್ಞೆಯ ಗುಣಗಳು ರೈಗಳಿಗೆ ರಕ್ತಗತವಾಗಿ ಬಂದ ಬಳುವಳಿ. ದಿನವೂ ತಂದೆಯ ಸಮ್ಮುಖದಲ್ಲಿ ಮನೆಯವರೆಲ್ಲ ಸೇರಿ ನಡೆಸುತ್ತಿದ್ದ ಭಜನೆ,ತಂದೆ ಮಕ್ಕಳಿಗೆ ಬೋಧಿಸುವ ಬದುಕಿನ ಪಾಠಗಳೇ ಸೀತಾರಾಮ ರೈಗಳ ಹೃದಯದಲ್ಲಿ ಪಡಿಯೊತ್ತುತ್ತಲೇ ಬಂದಿತ್ತು.

ಸವಣೂರಿನ ಜನರಲ್ಲಿ ಸಾಮರಸ್ಯ ಮೂಡಿಸುವಲ್ಲಿ ರೈಗಳು ವಹಿಸಿದ ಕಾಳಜಿ ಮಹಣ್ತೀಪೂರ್ಣವಾದುದು. ಎರಡು ಸಲ ಸಾಹಿತ್ಯ ಸಮ್ಮೇಳನಗಳು, ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಮ್ಮೇಳನದಲ್ಲಿ ಜಾತಿ, ಮತ, ಬೇದವಿಲ್ಲದೆ ಜನ ಭಿನ್ನಾಭಿಪ್ರಾಯ ಮರೆತು ಒಂದಾಗಿ ಕಲೆತರು. ಕುಟ್ಟಿ ದೊಣ್ಣೆಯಂತಹ ಜನಪದೀಯ ಕ್ರೀಡೆಗಳಿಗೆ ಮರುಹುಟ್ಟು ನೀಡುವ ಮೂಲಕವೂ ಜನಮನವನ್ನು ಬೆಸೆಯುವ ಮಹತ್ಕಾರ್ಯ ಅವರಿಂದಾಗುತ್ತಿದೆ. ಪುತ್ತೂರಿನ ಬಂಟರ ಸಂಘದ ಅಧ್ಯಕ್ಷರಾಗಿ ಅವರು ಸಮಾಜದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದ್ದಾರೆ. ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಹೊಸ ವನ ನಿರ್ಮಾಣದಲ್ಲಿಯೂ ಅವರ ದುಡಿಮೆ ಸಂದಿದೆ.

ಯಶಸ್ವಿ ಕೃಷಿ ಮೇಳ :
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸೀತಾರಾಮ ರೈ ಅವರು ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಕೃಷಿ ಮೇಳ ಆಯೋಜಿಸಿ ಅಭೂತಪೂರ್ವ ಯಶಸ್ವಿಗೆ ಕಾರಣಕರ್ತರಾಗಿದವರು. ದಿನಂಪ್ರತಿ ಸಾವಿರಾರು ಜನರು ಆಗಮಿಸಿ ಕೃಷಿ ಮೇಳಕ್ಕೆ ಪಾಲ್ಗೊಳ್ಳುವ ಮೂಲಕ ಇತಿಹಾಸ ನಿರ್ಮಾಣಗೊಂಡಿತು. ರೈಗಳ ಯಶಸ್ವಿ ಸಂಘಟನೆಗೆ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಉಲ್ಲೇಖನೀಯ. ಕೃಷಿ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಇರುವ ರೈಗಳು ತಾನು ಓರ್ವ ಕೃಷಿಕನಾಗಿ ಆಧುನಿಕ ಕೃಷಿಕ ಪೂರಕ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡಿರುವುದಕ್ಕೆ ಇಂತಹ ಹತ್ತಾರು ಕಾರ್ಯಕ್ರಮಗಳು ಉದಾಹರಣೆ.

Advertisement

ಧಾರ್ಮಿಕ ಸೇವಕ :
ಹಲವು ದೇವಾಲಯಗಳ ಜೀರ್ಣೋದ್ಧಾರ ಮಾಡಿ ಬ್ರಹ್ಮಕಲಶೋತ್ಸವ ನಡೆಸಿರುವ ರೈಗಳು ಧಾರ್ಮಿಕ ಕ್ಷೇತ್ರದ ಸಂವರ್ಧನೆಗೆ ನೀಡಿರುವ ಕೊಡುಗೆಯೂ ದೊಡ್ಡದೇ. ಸವಣೂರಿನ ಶ್ರೀ ಮಹಾವಿಷ್ಣುಮೂರ್ತಿದೇವಸ್ಥಾನ, ಮುಗೇರಿನ ಶ್ರೀ ಮಹಾವಿಷ್ಣುಮೂರ್ತಿದೇವಸ್ಥಾನ, ಶಾಂತಿಮೊಗರಿನ ಶ್ರೀ ಸುಬ್ರಹ್ಮಣ್ಯೇಶ್ವರದೇವಸ್ಥಾನ, ದೇವರಕಾನದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಮತ್ತು ನಾವೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳು. ಜೊತೆಗೆ ಪ್ರತಿ ವರುಷವೂ ಸುತ್ತಲಿನ ದೇವಳಗಳಲ್ಲಿ ಅನ್ನದಾನ ಸೇವೆ. ಸ್ಥಳೀಯ ದೈವ-ದೇವರುಗಳ ಸ್ಥಾನಗಳ ಉದ್ಧಾರದ ನಾಯಕತ್ವವಹಿಸಿದ್ದಾರೆ.

ಸವಣೂರಿನ ಯುವಕ ಮಂಡಲದ ಮಾಜಿ ಅಧ್ಯಕರಾಗಿ, ಸವಣೂರಿನಯುವಕ, ಯುವತಿ ಮಂಡಲಗಳು ಮತ್ತುಅಂಬೇಡ್ಕರ್‌ ಸಂಘಗಳಿಗೆ ಸ್ವಂತ ಸೂರುಗಳ ಕೊಡುಗೆ ನೀಡಿದ್ದಾರೆ. ಪುತ್ತೂರಿನ ಬಾಲವನದ ಈಜುಕೊಳದ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸಿದ ರೈಗಳು ಸತತ 8 ವರ್ಷಗಳ ಕಾಲ ಪುತ್ತೂರಿನ ಬಂಟರ ಸಂಘದ ಅಧ್ಯಕ್ಷರಾಗಿ, ರೂ. 2.30 ಕೋಟಿ ವೆಚ್ಚದಲ್ಲಿ ಸಂಘಕ್ಕೆ ಸುಸಜ್ಜಿತ ಸಭಾಭವನ ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ನೂತನ ಕಟ್ಟಡಗಳ ಕೊಡುಗೆ ನೀಡಿದ್ದಾರೆ. ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿ ಸ್ವಂತ ನಿವೇಶನ ಮತ್ತು ಕಟ್ಟಡಗಳ ಕೊಡುಗೆ ನೀಡಿದ್ದಾರೆ.ರಾಜ್ಯ ಮತ್ತುಜಿಲ್ಲಾ ಮಟ್ಟಗಳ ತುಳು, ಕೃಷಿ, ಸಾಹಿತ್ಯ, ಜನಪದ ಕಲೆಗಳ ಸಮ್ಮೇಳನಗಳು ಮತ್ತು ಯುವಜನ ಮೇಳಗಳ ಆಯೋಜನೆಯಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಶ್ರೇಷ್ಠ ಸಹಕಾರಿ, ಗಡಿನಾಡ ಪ್ರಶಸ್ತಿ, ಕಳೆದ 54 ವರ್ಷಗಳಿಂದ ಸಂಪೂರ್ಣವಾಗಿ ತೊಡಗಿಸಿಕೊಂಡು ಸಹಕಾರ ಕ್ಷೇತ್ರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿರುವ ಹಿರಿಯ ಸಹಕಾರಿ ಧುರೀಣ ಸವಣೂರು ಕೆ. ಸೀತಾರಾಮ ರೈ. ಸಹಕಾರಿ ಕ್ಷೇತ್ರದಲ್ಲಿ ರೈ ಅವರ ದಣಿವರಿಯದ ಉತ್ಸಾಹದ ಸೇವೆಗೆ ಅರ್ಹವೆಂಬಂತೆ ಕರ್ನಾಟಕ ಸರಕಾರವು ಈ ವರ್ಷ ಪ್ರತಿಷ್ಠಿತ ”ಸಹಕಾರ ರತ್ನ ಪ್ರಶಸ್ತಿ” ನೀಡಿದೆ.

ಹೀಗೆ ಸನ್ಮಾನ, ಗೌರವಗಳ ಸರಮಾಲೆಯೇ ಅವರಿಗೆ ಅರ್ಹವಾಗಿ ಸಂದಿರುವುದು ರೈಗಳ ಜೀವಮಾನದ ಸಾಧನೆ ತೊಡಿಸಿದ ಕೀರ್ತಿ ಕೀರಿಟವಾಗಿದೆ.

ಬಾಂಧವ್ಯಗಳು ಹಳಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಜಾತಿ, ಮತಗಳ ಎಲ್ಲೆಯನ್ನು ದಾಟಿದ ಸಾಮರಸ್ಯದ ಬದುಕು ನಮ್ಮೆಲ್ಲರದಾಗಲಿ. ರಾಜಕೀಯ ಮುಕ್ತವಾದ ಸಮಾಜ ನಿರ್ಮಾಣ ಇಂದಿನ ಅಗತ್ಯಗಳಲ್ಲಿ ಒಂದು. ಸಮಗ್ರ ಶಿಕ್ಷಣ ಮತ್ತು ಸಹಕಾರ ವ್ಯವಸ್ಥೆಯ ಅನುಸರಣೆ ಅಂತಹ ಆದರ್ಶ ಗ್ರಾಮದ ಕನಸನ್ನು ನನಸುಗೊಳಿಸುವ ಪ್ರಯತನಕ್ಕೆ, ಅನುಭವಿ ಸಂದೇಶ ನೀಡುವ ರೈಗಳ ಬದುಕಿನ ಅಮೃತೋತ್ಸವ ಆಚರಣೆ ಸರ್ವರಿಗೂ ಆದರ್ಶಪ್ರಾಯವಾಗಿದ್ದು ನಾಡು ಕಂಡ ನಾಯಕತ್ವದ ಈ ಸಾಧಕನ ಬದುಕು ಸದಾ ಹಸಿರಾಗಿರಲಿ ಎಂಬ ಶುಭ ಹಾರೈಕೆಗಳು.

Advertisement

Udayavani is now on Telegram. Click here to join our channel and stay updated with the latest news.

Next