Advertisement

ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಉಗರಗೋಳ ಪೈಲ್ವಾನರು

08:30 PM Sep 25, 2021 | Team Udayavani |

ಸವದತ್ತಿ: ಗ್ರಾಮೀಣ ಪ್ರದೇಶದ ಯುವಕರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿ ಸಾಧನೆ ಮಾಡಬಲ್ಲರೆಂಬುದಕ್ಕೆ ತಾಲೂಕಿನ ಉಗರಗೋಳ ಗ್ರಾಮದ ಯುವ ಕುಸ್ತಿಪಟುಗಳೇ ಸಾಕ್ಷಿ.

Advertisement

ನೇಪಾಳದಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ಮಟ್ಟದ ಇಂಡೋ-ನೇಪಾಳ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ತಾಲೂಕಿನ ಒಟ್ಟು ಆರು ಕ್ರೀಡಾಪಟುಗಳು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಉಗರಗೋಳ ಗ್ರಾಮದ ಮೀರಾಸಾಬ ರಾಜೇಸಾಬ ಬೇವಿನಗಿಡದ ಹಿರಿಯರ 92 ಕೆ.ಜಿ, ಮುಷ್ಪಿಕ್ ಬೇವಿನಗಿಡದ ಕಿರಿಯರ 92 ಕೆ.ಜಿ, ಮಕ್ತುಮ್ ಹುಸೇನ್ ಮತ್ತು ಮಾರುತಿ ಕುಂಟೋಜಿ 61 ಕೆ.ಜಿ, ಗಣೇಶಗೌಡ ಚನ್ನಪ್ಪಗೌಡರ 57 ಕೆ.ಜಿ. ಹಾಗೂ ಕೆಂಚಪ್ಪ ಗೌಡಪ್ಪನವರ 55 ಕೆ.ಜಿ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ:ಬಿಜೆಪಿ ಸೇರಲು ಕಾಂಗ್ರೆಸ್ಸಿಗರು ತುದಿಗಾಲಿನಲ್ಲಿ ನಿಂತಿದ್ದಾರೆ : ಶಾಸಕ ರೇಣುಕಾಚಾರ್ಯ

ಜೊತೆಗೆ ಅದೇ ಕ್ರೀಡಾ ಕೂಟದಲ್ಲಿ ಸ್ಥಳೀಯ ಪೋಲಿಸ್ ಠಾಣೆಯ ಪೇದೆ ಪ್ರಕಾಶ ಅಣ್ಣಪ್ಪ ಗಾಡಿವಡ್ಡರ ಹಿರಿಯರ 70 ಕೆ.ಜಿ ಮಿಶ್ರ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಂಗಾರದ ಪದಕವನ್ನು ಬಾಚಿಕೊಂಡಿದ್ದಾರೆ.

Advertisement

ಇತ್ತಿಚೇಗೆ ಗೋವಾದ ಮಡಗಾವ್‌ನಲ್ಲಿ ರಾಷ್ಟ್ರೀಯ ಯುವ ಕ್ರೀಡಾ ಮತ್ತು ಶಿಕ್ಷಣ ಫೆಡರೇಷನ್ ವತಿಯಿಂದ ಜರುಗಿದ 3ನೇ ರಾಷ್ಟ್ರೀಯ ಯುಥ್ ಗೇಮ್ಸ್ ಚಾಂಪಿಯನ್ಸ್ಶಿಫ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನದೊಂದಿಗೆ ಅಂತರಾಷ್ಟ್ರೀಯ ಮಟ್ಟದ ಇಂಡೋ-ನೇಪಾಳ ಕ್ರೀಡಾಕೂಟಕ್ಕೆ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು. ಇದೀಗ ಆ ಕ್ರೀಡಾಕೂಟದಲ್ಲಿಯೂ ಸಹ ಚಿನ್ನದ ಪದಕದೊಂಗಿದೆ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಗ್ರಾಮೀಣ ಕ್ರೀಡೆ ಎನಿಸಿಕೊಂಡಿರುವ ಕುಸ್ತಿ ಸ್ಪರ್ಧೆಗೆ ಕಡು ಬಡತನದ ನಡುವೆಯೂ ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡು ಸ್ವಂತ ಪ್ರತಿಭೆಯ ಮೇಲೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸುವರ್ಣ ಪದಕ ತಮ್ಮದಾಗಿಸಿಕೊಂಡಿದ್ದು, ಗ್ರಾಮ ಸೇರಿದಂತೆ ಇಡೀ ದೇಶದ ಗೌರವವನ್ನು ಇಮ್ಮಡಿಗೊಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next