Advertisement

Saudi Arabia: ಭೀಕರ ಅಪಘಾತದಲ್ಲಿ ಕರಾವಳಿಯ ನಾಲ್ವರು ಮೃತ್ಯು

12:22 AM Mar 22, 2024 | Team Udayavani |

ಮಂಗಳೂರು: ಸೌದಿ ಅರೇಬಿಯಾದ ರಿಯಾದ್‌ನ ಹೊರವಲಯದ ಝಲ್ಫಾ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂರು ತಿಂಗಳ ಹಸುಗೂಸು ಸಹಿತ ಕರ್ನಾಟಕ ಕರಾವಳಿ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

Advertisement

ಮಂಗಳೂರು ಹೊರವಲಯದ ಹಳೆಯಂಗಡಿ ತೋಕೂರು ಮೂಲದ ಶಮೀಮ್‌ ಮತ್ತು ಝರೀನಾ ದಂಪತಿ ಪುತ್ರಿ ಹಿಬಾ (29), ಆಕೆಯ ಪತಿ ಮುಹಮ್ಮದ್‌ ರಮೀಝ್ (34) ಮಕ್ಕಳಾದ ಆರೂಶ್‌ (3) ಮತ್ತು ರಾಹ (3 ತಿಂಗಳು) ಮೃತಪಟ್ಟವರು.

ಕಾರಿನಲ್ಲಿದ್ದ ಹಿಬಾ ಅವರ ಚಿಕ್ಕಪ್ಪ ಲತೀಫ್‌ ಅವರ ಮಗಳು ಫಾತಿಮಾ (19) ಗಂಭೀರ ಗಾಯಗೊಂಡಿದ್ದು, ರಿಯಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಇನ್ನೋರ್ವ ಸಹೋದರಿ ಲುಬಾ° ಅವರ ಮಗ ಇಸ (4) ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಹಿಬಾ ಅವರ ತಂದೆ ಶಮೀಮ್‌ ಮತ್ತು ತಾಯಿ ಝರೀನಾ ಮತ್ತು ಮೊಮ್ಮಕ್ಕಳು ಇನ್ನೊಂದು ಕಾರಿನಲ್ಲಿದ್ದರು. ಕತಾರ್‌ನಿಂದ ಮದೀನಕ್ಕೆ ಮಂಗಳವಾರ ಉಮ್ರಾ ಯಾತ್ರೆ ಆರಂಭಿಸಿದ್ದರು. ಮಂಗಳವಾರ ರಾತ್ರಿ ರಿಯಾದ್‌ ತಲುಪಿದ್ದ ಅವರು ಅಲ್ಲಿ ಕುಟುಂಬಸ್ಥರ ಮನೆಯಲ್ಲಿ ಉಳಿದುಕೊಂಡಿದ್ದರು. ಬುಧವಾರ ಬೆಳಗ್ಗೆ ಅಲ್ಲಿಂದ ತಾಯೀಫ್‌ನತ್ತ ಯಾತ್ರೆ ಆರಂಭಿಸಿದ್ದರು.

ರಿಯಾದ್‌ನಿಂದ 250 ಕಿ.ಮೀ. ದೂರದ ಝುಲ್ಫಾ ಎಂಬಲ್ಲಿ ಅವಘಡ ಸಂಭವಿಸಿದ್ದು, ರಮೀಝ್ ಅವರು ಕಾರು ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಒಂದು ಮಗು ಮತ್ತು ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡಿದ್ದ ಇನ್ನೊಂದು ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಘಟನೆಯ ಹಿನ್ನೆಲೆಯಲ್ಲಿ ತೋಕೂರು ಸರಕಾರಿ ಶಾಲೆಯ ಬಳಿಯ ಅವರ ಕುಟುಂಬದ ಮನೆಯಲ್ಲಿ ನೀರವ ಮೌನ ನೆಲೆಸಿದೆ. ಮೃತರ ಅಂತಿಮ ವಿಧಿವಿಧಾನಗಳು ಕತಾರ್‌ನಲ್ಲಿಯೇ ನಡೆಯಲಿವೆ ಎಂದು ತಿಳಿದು ಬಂದಿದೆ.

Advertisement

ಕತಾರ್‌ನಲ್ಲಿ ನೆಲೆಸಿದ್ದರು
ಮೃತ ಹಿಬಾ ಅವರ ಕುಟುಂಬ ಮತ್ತು ಅವರ ಹೆತ್ತವರು ಹಲವು ವರ್ಷಗಳಿಂದ ಕತಾರ್‌ನಲ್ಲಿ ನೆಲೆಸಿದ್ದರು. ಹಿಬಾ ಅವರ ಪತಿ ಮುಹಮ್ಮದ್‌ ರಮೀಝ್ ಮುಂಬಯಿ ಮೂಲದವರು. ತಂದೆ ಮತ್ತು ಪತಿ ಇಬ್ಬರೂ ಕತಾರ್‌ನಲ್ಲಿ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದರು ಎಂದು ತಿಳಿದು ಬಂದಿದೆ. ಅಪಘಾತವಾದ ರಭಸಕ್ಕೆ ಕಾರು ರಸ್ತೆಯಿಂದ ಹಲವು ಮೀಟರ್‌ಗಳಷ್ಟು ಹೊರ ಪ್ರದೇಶಕ್ಕೆ ಹೋಗಿ ಬಿದ್ದಿದೆ. ಇದರಿಂದಾಗಿ ಶಮೀಮ್‌ ಹಾಗೂ ಮನೆಯ ಇತರರು ಹಿಂದಿನಿಂದ ಇನ್ನೊಂದು ಕಾರಿನಲ್ಲಿ ತೆರಳುತ್ತಿದ್ದರೂ ಅಪಘಾತ ಸಂಭವಿಸಿರುವುದು ಅವರ ಅರಿವಿಗೆ ಬಂದಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next