Advertisement

ಬಿಜೆಪಿಗೆ ಜನರೇ ಪಾಠ ಕಲಿಸುತ್ತಾರೆ : ಸತೀಶ ಜಾರಕಿಹೊಳಿ

01:42 PM Aug 31, 2021 | Team Udayavani |

ಬೆಳಗಾವಿ:ಕಳೆದೆರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾಗ ಸಂತ್ರಸ್ತರ ಸಮಸ್ಯೆ ಕೇಳಲು ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳು ಬರಲಿಲ್ಲ. ಆದರೆ, ಈಗ ಚುನಾವಣಾ ಪ್ರಚಾರಕ್ಕೆ ಎಲ್ಲರೂ ಓಡಿ ಬಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರವಾಹ ಬಂದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಾಲ್ಕು ಜನ ಸಚಿವರಿದ್ದರು. ಆದರೆ ಒಬ್ಬರೂ ಕೋವಿಡ್‌ ನಿರ್ವಹಣೆ ಹಾಗೂ ಪ್ರವಾಹದ ಕುರಿತು ಒಂದೂ ಸಭೆ ನಡೆಸಿರಲಿಲ್ಲ. ಜನರಿಗೆ ಸಾಂತ್ವನ ಹೇಳಲು ಮತ್ತು ಪರಿಹಾರ ಕೊಡಿಸಲು ಪ್ರಯತ್ನಿಸಲಿಲ್ಲ. ಇದೆಲ್ಲವನ್ನು ಜನರು ಗಮನಿಸುತ್ತಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಬೆಳಗಾವಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇವೆ. ನಾನು ಉಸ್ತುವಾರಿ ಸಚಿವನಾಗಿದ್ದಾಗ ಆಗಿನ ಶಾಸಕ ಫಿರೋಜ್‌ ಸೇಠ ಅವರೊಂದಿಗೆ ಅನೇಕ ಅಭಿವೃದ್ಧಿಕಾರ್ಯಗಳನ್ನು ಮಾಡಿದ್ದೇವೆ. ಬಾಕೈಟ್‌ ರಸ್ತೆ, ಕಣಬರ್ಗಿ ರಸ್ತೆ, ಉದ್ಯಾನವನ, ಜಿಮ್‌, ಕ್ರೀಡಾಂಗಣಗಳನ್ನು ನಿರ್ಮಿಸಿದ್ದೇವೆ. ಆದರೆ, ರಾಜಕೀಯ ಕಾರಣದಿಂದ ಇದುವರೆಗೂ ಅವುಗಳ ಉದ್ಘಾಟನೆಗೆ ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿರುವ ಯಡಿಯೂರಪ್ಪ ಮಾರ್ಗದ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಅದನ್ನು ಪೂರ್ಣಗೊಳಿಸಿದ್ದೇ ನಾವು. ನಂತರ ಬಿಜೆಪಿಯವರು ಅಲ್ಲಿ ಯಡಿಯೂರಪ್ಪ ಮಾರ್ಗ ಎಂದು ಕೈಯಿಂದ ಬರೆದು ಬೋರ್ಡ್‌ ಹಾಕಿದರು ಎಂದು ಟೀಕಿಸಿದರು.

ಮಾಜಿ ಸಚಿವ ಎಂ.ಬಿ ಪಾಟೀಲ ಮಾತನಾಡಿ, ಬಿಜೆಪಿ ಪ್ರಣಾಳಿಕೆಯಲ್ಲಿ ಪಕ್ಷದ ವತಿಯಿಂದ ಉಚಿತ ಶವಸಂಸ್ಕಾರ ಎಂದು ಭರವಸೆ ನೀಡಿದ್ದಾರೆ. ಉಚಿತ ಶವಸಂಸ್ಕಾರ ಎಂದರೆ ಏನರ್ಥ. ಹಾಗಾದರೆ ಬಿಜೆಪಿಯವರು ಜನರ ಸಾವನ್ನೇ ಬಯಸುತ್ತಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕಾರಜೋಳ ಅವರಿಗೆ ತಡವಾಗಿ ಜ್ಞಾನೋದಯವಾಗಿದೆ. ಉಚಿತ ಶವಸಂಸ್ಕಾರ ವಿಷಯದಿಂದ ಜನರಿಗೆ ನೋವಾಗಿದ್ದರೆ ವಾಪಸ್‌ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇದೇ ವೇಳೆ ಉದ್ಯೋಗ ನಷ್ಟ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ, ಬೆಲೆ ಏರಿಕೆಯ ಕುರಿತು ಸಹ ಕಾರಜೋಳ ಹಾಗೂ ಬಿಜೆಪಿಗರು ಉತ್ತರಿಸಬೇಕು ಎಂದು ಪಾಟೀಲ ಸವಾಲು ಹಾಕಿದರು.

Advertisement

ಕೋವಿಡ್‌ ಸಂದರ್ಭದಲ್ಲಿ ತಾವು ನೀಡಿರುವ ಆಕ್ಸಿಜನ್‌ ಸಿಲಿಂಡರ್‌, ಬೆಡ್‌, ಔಷಧಿಗಳ ಬಗ್ಗೆ ಬಿಜೆಪಿಯವರು ಹೇಳಬೇಕಾಗಿತ್ತು. ಆದರೆ ಅದರ ಬದಲು ಶವಸಂಸ್ಕಾರದಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಏನು ಮಾಡಿದೆ ಎಂದು ಬಿಜೆಪಿಯವರು ಕೇಳುತ್ತಾರೆ. ದೇಶದಲ್ಲಿರುವ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣ, ದೊಡ್ಡ ದೊಡ್ಡ ಆಣೆಕಟ್ಟುಗಳನ್ನು ಯಾರು ನಿರ್ಮಿಸಿದ್ದು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next