ಬೆಂಗಳೂರು: ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸತೀಸ್ ಜಾರಕಿಹೊಳಿಗೆ ಮತ್ತೆ ಸಚಿವ ಸ್ಥಾನ ನೀಡುವಂತೆ ಎಸ್ಸಿ ಎಸ್ಟಿ ಘಟಕದ ಪದಾಧಿಕಾರಿಗಳು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ಗೆ ಮನವಿ ಮಾಡಿದ್ದಾರೆ.
ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿದರೆ, ಎಸ್ಸಿ ಎಸ್ಟಿ ಸಮುದಾಯವನ್ನು ಕಾಂಗ್ರೆಸ್ನತ್ತ ಸೆಳೆದುಕೊಳ್ಳಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.ಆದರೆ, ಈ ಬಗ್ಗೆ ವೇಣುಗೋಪಾಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ದಲಿತರಿಗೆ ಹೆಚ್ಚಿನ ಸ್ಥಾನ ನೀಡಬೇಕು. ಈಗ ದಲಿತರಿಗೆ ಕೇವಲ ಶೇಕಡಾ 7 ರಷ್ಟು ಮಾತ್ರ ಸ್ಥಾನ ನೀಡಲಾಗುತ್ತಿದೆ. ಅದನ್ನು ಹೆಚ್ಚಿಸಬೇಕು ಎಂದು ದಲಿತ ಪದಾಧಿಕಾರಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ವೇಣುಗೋಪಾಲ್ ಜೊತೆಗಿನ ಸಭೆಗೂ ಮುನ್ನ ಕೆಪಿಸಿಸಿ ಎಸ್ಸಿ ಎಸ್ಟಿ ಘಟಕದ ಪದಾಧಿಕಾರಿಗಳು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ, ತಮ್ಮ ಬೇಡಿಕೆಗಳ ಕುರಿತು ಸಮಾಲೋಚನೆ ನಡೆಸಿದರು.
ಸಭೆ ನಂತರ ಮಾತನಾಡಿದ ಸತೀಶ್ ಜಾರಕಿಹೊಳಿ, ಆಹಾರ ಪದ್ದತಿ ಅವರವರ ಹಕ್ಕು, ನಮ್ಮ ಸಂವಿಧಾನದಲ್ಲಿ ಯಾರು ಆಹಾರ ಸೇವನೆಗೆ ನಿರ್ಭಂಧ ಹೇರಿಲ್ಲ. ಆಹಾರ ಸಂಸ್ಕೃತಿ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ದಲಿತರ ಮನೆಯಲ್ಲಿ ಊಟ ಮಾಡಿದ ಮಾತ್ರಕ್ಕೆ ದಲಿತರು ಬಿಜೆಪಿಗೆ ಹೋಗಲ್ಲ. ದಲಿತರು ಯಾವಾಗಲೂ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ಹೇಳಿದರು.