ಕಾಸರಗೋಡು: ಸರ್ವಶಿಕ್ಷಾ ಅಭಿಯಾನ್ ಕಾಸರಗೋಡು ಜಿಲ್ಲೆಗೆ ಪ್ರಸ್ತುತ ವರ್ಷ 32 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಯೋಜನೆಗಳಿಗೆ ಜಿಲ್ಲಾ ಮೋನಿಟರಿಂಗ್ ಆ್ಯಂಡ್ ಇಂಪ್ಲಿಮೆಂಟೇಶನ್ ಸಮಿತಿ ಅಂಗೀಕಾರ ನೀಡಿದೆ. ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟವನ್ನು ಉತ್ತಮ ಪಡಿಸುವ ಗುರಿಯೊಂದಿಗೆ ವಿವಿಧ ಮಟ್ಟದ ಕಾರ್ಯಕ್ರಮಗಳಿಗೆ ಈ ಮೊತ್ತವನ್ನು ವ್ಯಯಿಸಲಾಗುವುದು.
ಜಿಲ್ಲೆಯ ಸರಕಾರಿ ಶಾಲೆಗಳ ಒಂದರಿಂದ ಎಂಟನೇ ತರಗತಿಗಳಲ್ಲಿನ ಬಡತನ ರೇಖೆಗಿಂತ ಮೇಲಿರುವ ಗಂಡು ಮಕ್ಕಳನ್ನು ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಎರಡು ಜೋಡಿ ಉಚಿತ ಸಮವಸ್ತ್ರ ನೀಡಲು 2.19 ಕೋಟಿ ರೂ. ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಲು 2 ಕೋಟಿ ರೂ. ಮಂಜೂರು ಮಾಡಿದೆ. ರಜಾಕಾಲ ಅಧ್ಯಾಪಕ ತರಬೇತಿಗೆ ಮತ್ತು ಕ್ಲಸ್ಟರ್ ತರಬೇತಿಗಗಿ 89 ಲಕ್ಷ ರೂ. ಕಾದಿರಿಸಲಾಗಿದೆ. ಬಿಆರ್ಸಿ ಮತ್ತು ಸಿಆರ್ಸಿಯ ಅಕಾಡೆಮಿಕ್ ಚಟುವಟಿಕೆಗಳಿಗೆ 6.46 ಕೋಟಿ ರೂ. ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಶಿಕ್ಷಣ ಹಕ್ಕು ಕಾನೂನು ಪ್ರಕಾರ 150 ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಎಲ್.ಪಿ. ಶಾಲೆಯಲ್ಲೂ, 100 ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಯು.ಪಿ. ಶಾಲೆಯಲ್ಲಿ ತಲಾ ಒಂದರಂತೆ ಅಧ್ಯಾಪಕರನ್ನು ನೇಮಿಸಲಾಗುವುದು.
ಯು.ಪಿ. ಶಾಲೆಗಳಲ್ಲಿ ಕಲಾ ಕ್ರೀಡಾ ಅಧ್ಯಾಪಕರನ್ನು ನೇಮಿಸಲು ವೇತನವಾಗಿ 12.88 ಕೋಟಿ ರೂ. ಮಂಜೂರು ಮಾಡಿದೆ. ಒಳನಾಡು ಪ್ರದೇಶಗಳಲ್ಲಿ ಯಾತ್ರಾ ಸೌಕರ್ಯಗಳ ಕೊರತೆಯಿಂದ ಶಾಲೆಗೆ ತಲುಪಲು ಸಾಧ್ಯವಾಗದ ಮಕ್ಕಳ ಶಿಕ್ಷಣ ಖಾತರಿ ಪಡಿಸಲು ಅವರಿಗೆ ಯಾತ್ರಾ ವೆಚ್ಚವನ್ನು ಭರಿಸಲು 13 ಲಕ್ಷ ರೂ.ಯನ್ನು ಈ ವರ್ಷ ಮಂಜೂರು ಮಾಡಿದೆ.
ಶಾಲೆಗಳ ದುರಸ್ತಿ ಕಾರ್ಯಗಳಿಗೆ ಮತ್ತು ಅಧ್ಯಾಪಕರಿಗೆ ಕಲಿಕಾ ಸಾಮಗ್ರಿಗಳನ್ನು ತಯಾರಿಸಲು ಎಸ್ಎಸ್ಎ ಗ್ರಾಂಟ್ ನೀಡಲಿದೆ. ಒಂದರಿಂದ ಎಂಟರ ವರೆಗಿನ ತರಗತಿಗಳಲ್ಲಿರುವ ಅಧ್ಯಾಪಕರಿಗೆ ಒಬ್ಬರಿಗೆ 500 ರೂ.ಯಂತೆ 28 ಲಕ್ಷ ರೂ. ಯನ್ನು ಯೋಜನೆಯಲ್ಲಿ ಇರಿಸಲಾಗಿದೆ. ಶಾಲೆಗಳ ನಿರ್ವಹಣೆಗಾಗಿ 32 ಲಕ್ಷ ರೂ. ಕಾದಿರಿಸಲಾಗಿದೆ. ಶಾಲಾ ಗ್ರಾಂಟ್ ಎಂಬ ನೆಲೆಯಲ್ಲಿ 40 ಲಕ್ಷ ರೂ. ನೀಡಲಾಗುವುದು. ಕಂಪ್ಯೂಟರ್ ಶಿಕ್ಷಣಕ್ಕೆ 50 ಲಕ್ಷ ರೂ. ಮಂಜೂರು ಮಾಡಿದೆ.
ಚೆಯರ್ಮನ್ ಸಂಸದ ಪಿ. ಕರುಣಾಕರನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್, ಜಿಲ್ಲಾ ಪಂಚಾಯತ್ ಸದಸ್ಯರು, ಡಿಡಿಇ ಕೆ.ಸುರೇಶ್ ಕುಮಾರ್, ಡಯಟ್ ಪ್ರಾಂಶುಪಾಲ ರಾಮನಾಥನ್, ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಕೆ.ವಿನೋದ್ ಕುಮಾರ್ ಮೊದಲಾದವರು ಭಾಗವಹಿಸಿದರು. ಎಸ್ಎಸ್ಎ ಪಿ.ಪಿ. ವೇಣುಗೋ ಪಾಲನ್, ಯೋಜನಾ ಧಿಕಾರಿಗಳಾದ ಡಾ| ಎಂ.ವಿ. ಗಂಗಾಧರನ್, ಬಿ.ಗಂಗಾಧರನ್, ಎಂ.ಐ.ಎಸ್. ಕೋ- ಆರ್ಡಿನೇಟರ್ ಎ.ವಿ. ರಜನೀಶ್ ಮೊದಲಾದವರು ಮಾತನಾಡಿದರು.