Advertisement

ಸ್ಯಾಂಟ್ರೋ ರವಿ ಪ್ರಕರಣ: ಇನ್ನೂ ಕೆಲವರ ಬಂಧನ ಸಾಧ್ಯತೆ: ಗೃಹ ಸಚಿವ ಆರಗ

12:59 AM Jan 14, 2023 | Team Udayavani |

ಉಡುಪಿ: ಸ್ಯಾಂಟ್ರೋ ರವಿ ಪ್ರಕರಣದಲ್ಲಿ ರಾಜ್ಯ ಪೊಲೀಸರಿಗೆ ಯಾವುದೇ ನಿರ್ಬಂಧ ಹೇರಿಲ್ಲ. ನಿರಂತರ ಪ್ರಯತ್ನದಿಂದ ರಾಜ್ಯ ಪೊಲೀಸರು ಸ್ಯಾಂಟ್ರೋ ರವಿಯನ್ನು ಶುಕ್ರವಾರ ಗುಜರಾತ್‌ನಲ್ಲಿ ಬಂಧಿಸಿದ್ದಾರೆ.

Advertisement

ಒಂದೆರೆಡು ದಿನಗಳಲ್ಲಿ ರಾಜ್ಯಕ್ಕೆ ಕರೆತರಲಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಉಡುಪಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, 11 ದಿನ ಗಳ ಅನಂತರ ಸ್ಯಾಂಟ್ರೋ ರವಿ ಬಂಧನ ವಾಗಿದೆ. ನಾಲ್ಕೈದು ತಂಡ ರಚಿಸಿ ಮೈಸೂರು, ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಎಲ್ಲ ಪ್ರಕ್ರಿಯೆ ಮುಗಿಸಿಕೊಂಡು ಆತನನ್ನು ಬೆಂಗಳೂರಿಗೆ ಕರೆತರಲಿದ್ದಾರೆ. ಈ ವಿಚಾರದಲ್ಲಿ ಸರಕಾರ ಯಾವುದೇ ಮೀನಾ ಮೇಷವೂ ಎಣಿಸಿಲ್ಲ. ಒತ್ತಡಕ್ಕೂ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಎಲ್ಲೇ ಇದ್ದರೂ, ಹೇಗೆ ಇದ್ದರೂ ಕರೆತಂದು ವಿಚಾರಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಆತ ನಡೆಸಿದ ಕೃತ್ಯಕ್ಕೆ ಸರಿಯಾದ ಶಿಕ್ಷೆಯಾಗ ಬೇಕು. 3-4 ಕಡೆ ಅಂತಿಮ ಕ್ಷಣದಲ್ಲಿ ಆತ ತಪ್ಪಿಸಿಕೊಂಡಿದ್ದ. ಎಲ್ಲ ಆಯಾಮದಲ್ಲೂ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಅಧಿಕಾರಿ, ರಾಜಕಾರಣಿ ಇದ್ದರೂ ಕೂಡ ತನಿಖೆಯಿಂದ ಹೊರಗೆಳೆಯುತ್ತೇವೆ ಎಂದು ಸಚಿವರು ಹೇಳಿದರು.

ಆರೋಪದಲ್ಲಿ ಹುರುಳಿಲ್ಲ
ಕಿಮ್ಮನೆ ರತ್ನಾಕರರು ಇ.ಡಿ. ದಾಳಿ ಮಾಡಿದ್ದನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಕಚೇರಿ ಬಹಳ ವರ್ಷಗಳಿಂದ ಶಾರೀಕ್‌ ಕುಟುಂಬದ ಕಟ್ಟಡದಲ್ಲಿತ್ತು. ಶಾರಿಕ್‌ ಹೇಳಿಕೆ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದೆ. ನನ್ನ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಅವರ ಮೇಲೆ ಇ.ಡಿ. ದಾಳಿ ಮಾಡಿಸುವಂತಹ ರಾಜಕೀಯ ದಾರಿದ್ರé ನನಗೆ ಬಂದಿಲ್ಲ ಎಂದರು.

Advertisement

ಕ್ಷೇತ್ರ ಹುಡುಕಾಟವೇ ಮುಗಿದಿಲ್ಲ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ, ಮಾಜಿ ಮುಖ್ಯಮಂತ್ರಿ, ವಿಪಕ್ಷದ ನಾಯಕರಿಗೆ ಕ್ಷೇತ್ರ ಹುಡುವುದೇ ಕೆಲಸ ಆಗಬಾರದು. ಹುಡುಕಾಟ ನಡೆಸುತ್ತಿದ್ದಾರೆ, ಸ್ಪರ್ಧೆ ಮಾಡಲು ಭಯಪಡುತ್ತಿದ್ದಾರೆ. ಶೋಚನೀಯ ಪರಿಸ್ಥಿತಿ ಇದ್ದು ಜನರ ಮೇಲೆ ನಂಬಿಕೆ ಕಳೆದುಕೊಂಡು ಕ್ಷೇತ್ರದಿಂದ ಕ್ಷೇತ್ರಕ್ಕೆ ಓಡಾಡುತ್ತಿರುತ್ತಾರೆ. ಅವರು ಹಿಂದೆ ಬೇರೆಯವರನ್ನು ಸೋಲಿಸಿರಬಹುದು. ಹೀಗಾಗಿ ಈಗ ಅವರನ್ನು ಕಾರ್ಯಕರ್ತರು ಸೋಲಿಸುತ್ತಾರೆ ಎನ್ನುವ ಭಯ ಕಾಡುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next