Advertisement

ಸುಪ್ರೀಂ ಅಂಗಳಕ್ಕೆ ಸಂಸತ್‌ ಭವನ ಹೋರಾಟ

10:21 PM May 25, 2023 | Team Udayavani |

ನವದೆಹಲಿ/ಚೆನ್ನೈ: ಹೊಸ ಸಂಸತ್‌ ಭವನ ಉದ್ಘಾಟನೆ ಮೇ 28ರಂದು ನಿಗದಿಯಾಗಿರುವಂತೆಯೇ, ಅದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದಲೇ ಹೊಸ ಕಟ್ಟಡ ಉದ್ಘಾಟಿಸಬೇಕು. ಈ ಹಿನ್ನೆಲೆಯಲ್ಲಿ ಅವರನ್ನೇ ಆಹ್ವಾನಿಸಲು ಲೋಕಸಭೆ ಕಾರ್ಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ. ನ್ಯಾಯವಾದಿ ಜಯ ಸುಕಿನ್‌ ಎಂಬುವರು ಈ ಬಗ್ಗೆ ದಾವೆ ಹೂಡಿದ್ದಾರೆ. ಮೇ 18ರಂದು ಲೋಕಸಭೆಯ ಸೆಕ್ರೆಟರಿ ಜನರಲ್‌ ಬಿಡುಗಡೆ ಮಾಡಿರುವ ಆಹ್ವಾನ ಪತ್ರಿಕೆ ದೇಶದ ಸಂವಿಧಾನವನ್ನು ಉಲ್ಲಂ ಸುತ್ತಿದೆ. ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆ ಮತ್ತು ಅವರು ಸಂಸತ್‌ನ ಮುಖ್ಯಸ್ಥರು. ದೇಶಕ್ಕೆ ಸಂಬಂಧಿಸಿದಂತೆ ಎಲ್ಲಾ ನಿರ್ಧಾರಗಳನ್ನು ರಾಷ್ಟ್ರಪತಿಗಳ ಹೆಸರಿನಲ್ಲಿಯೇ ಕೈಗೊಳ್ಳಲಾಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

Advertisement

ಸಂವಿಧಾನದ 79ನೇ ವಿಧಿಯ ಅನ್ವಯ ರಾಷ್ಟ್ರಪತಿಗಳು ಸಂಸತ್‌ನ ಅವಿಭಾಜ್ಯ ಅಂಗ. ಹೀಗಾಗಿ ಉದ್ಘಾಟನಾ ಕಾರ್ಯಕ್ರಮದಿಂದ ಅವರನ್ನು ದೂರ ಇರಿಸುವಂತೆ ಇಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭೆಯ ಕಾರ್ಯಾಲಯಕ್ಕೆ ಹೊಸ ಸಂಸತ್‌ ಭವನವನ್ನು ರಾಷ್ಟ್ರಪತಿಗಳಿಂದ ನಡೆಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. 20 ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧಾರ ಮಾಡಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಪ್ರತಿಪಕ್ಷಗಳ ವಿರುದ್ಧ ಮೋದಿ ಪರೋಕ್ಷ ವಾಗ್ಧಾಳಿ
ಸಂಸತ್‌ ಭವನ ಲೋಕಾರ್ಪಣೆ ಕಾರ್ಯಕ್ರಮ ಬಹಿಷ್ಕಾರ ನಿರ್ಧಾರ ಕೈಗೊಂಡಿರುವ 20 ಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಟೀಕಿಸಿದ್ದಾರೆ. ಮೂರು ರಾಷ್ಟ್ರಗಳ ಪ್ರವಾಸ ಮುಕ್ತಾಯಗೊಳಿಸಿ ನವದೆಹಲಿಗೆ ಗುರುವಾರ ಆಗಮಿಸಿದ ಬಳಿಕ ಮಾತನಾಡಿದ ಅವರು, ಸಿಡ್ನಿಯಲ್ಲಿ ತಮ್ಮ ಗೌರವಾರ್ಥ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಡಳಿತ ಪಕ್ಷ ಮಾತ್ರವಲ್ಲ, ಪ್ರತಿಪಕ್ಷಗಳ ಸದಸ್ಯರೂ, ಮಾಜಿ ಪ್ರಧಾನಿಗಳೂ ಉಪಸ್ಥಿತರಿದ್ದರು ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವದ ನಿಜವಾದ ವಾತಾವರಣ ಅಲ್ಲಿ ಕಂಡುಬಂದಿತ್ತು ಎಂದು ಹೇಳಿದ್ದಾರೆ. ಆ ದೇಶಕ್ಕೆ ತೆರಳಿದ್ದ ನನಗೆ ಪ್ರತಿ ಭಾರತೀಯನ ಪ್ರತಿನಿಧಿ ಎಂಬ ನೆಲೆಯಲ್ಲಿ ಗೌರವಾದರಗಳನ್ನು ನೀಡಿದರು ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಕೊರೊನಾ ಲಸಿಕೆಯನ್ನು ಇತರ ದೇಶಗಳಿಗೆ ರಫ್ತು ಮಾಡುವುದನ್ನು ಪ್ರಶ್ನಿಸಿದ ಪ್ರತಿಪಕ್ಷಗಳ ನಿಲುವನ್ನು ಟೀಕೆ ಮಾಡಿದ ಪ್ರಧಾನಿ ಮೋದಿ, “ಇದು ಗಾಂಧಿ, ಬುದ್ಧ ಜನಿಸಿದ ನಾಡು. ನಾವು ನಮ್ಮ ವೈರಿಗಳ ಕ್ಷೇಮದ ಬಗ್ಗೆ ಕೂಡ ಕಾಳಜಿ ವಹಿಸುತ್ತೇವೆ. ನಾವೆಲ್ಲರೂ ಸಹಾನುಭೂತಿಯಿಂದ ಸ್ಫೂರ್ತಿ ಪಡೆದವರು’ ಎಂದು ಟೀಕಿಸಿದ್ದಾರೆ.

ಹೊಸ ಸಂಸತ್‌ ಕಟ್ಟಡಕ್ಕೆ ಹೊಸ ಹೆಸರು?
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಹೊಸ ಕಟ್ಟಡಕ್ಕೆ “ಸಂಸತ್‌ ಭವನ” ಎಂಬ ಹೆಸರು ಇರಿಸದೇ ಇರುವ ಸಾಧ್ಯತೆ ಇದೆ. ಈಗಿನ ಕೇಂದ್ರ ಸರ್ಕಾರ ನವದೆಹಲಿಯಲ್ಲಿ ಇರುವ ರಸ್ತೆಗಳ ಹೆಸರುಗಳಲ್ಲಿ ಬದಲಾವಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡಕ್ಕೆ ಬೇರೆಯೇ ಹೆಸರಿನಿಂದ ಕರೆಯಲು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು “ದ ಟೈಮ್ಸ್‌ ಆಫ್ ಇಂಡಿಯಾ” ವರದಿ ಮಾಡಿದೆ.

Advertisement

ಹೊಸ ಸಂಸತ್‌ ಭವನದಲ್ಲಿ ಮಹಾತ್ಮಾ ಗಾಂಧಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಸರ್ದಾರ್‌ ಪಟೇಲ್‌, ಚಾಣಕ್ಯನ ಪ್ರತಿಮೆಗಳನ್ನು ಇಡುವ ಸಾಧ್ಯತೆ ಇದೆ. ಅದಕ್ಕಾಗಿ ಗ್ರಾನೈಟ್‌ ಅನ್ನು ಬಳಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೇಪರ್‌ ಎಸೆದರೂ…:
ಹೊಸ ಸಂಸತ್‌ ಭವನದಲ್ಲಿ ಲೋಕಸಭೆ, ರಾಜ್ಯಸಭೆಯ ಮುಂಭಾಗದಲ್ಲಿ ಬಾರೀ ಬದಲಾವಣೆ ಮಾಡಲಾಗಿದೆ. ಎರಡೂ ಸದನಗಳ ಮುಂಗಟ್ಟೆ (ಸದನ ಬಾವಿ)ಯ ಆಳ ಹೆಚ್ಚಿಸಲಾಗಿದೆ. ಇದರಿಂದಾಗಿ ಪ್ರತಿಭಟನೆ ನಡೆಸಿದರೂ, ಟಿವಿ ಕ್ಯಾಮೆರಾಗಳಿಗೆ ಕಾಣಿಸದಿರುವಂತೆ ಮಾಡಲಾಗಿದೆ. ಜತೆಗೆ ಪ್ರಿಸೈಡಿಂಗ್‌ ಆಫೀಸರ್‌, ಲೋಕಸಭೆ ಸ್ಪೀಕರ್‌, ರಾಜ್ಯಸಭೆ ಸಭಾಪತಿಯ ಆಸನಗಳ ಎತ್ತರ ಹೆಚ್ಚಿಸಲಾಗಿದೆ. ಹೀಗಾಗಿ, ಸದನದ ಮುಂಗಟ್ಟೆಗೆ ನುಗ್ಗಿ ಪ್ರತಿಭಟನೆ ನಡೆಸಿ, ಪೇಪರ್‌ಗಳನ್ನು ಎಸೆದರೂ, ಸ್ಪೀಕರ್‌ ಅಥವಾ ಸಭಾಪತಿ ಆಸನದತ್ತ ತಲುಪದಂತೆ ವ್ಯವಸ್ಥೆ ಮಾಡಲಾಗಿದೆ.

ತಮಿಳುನಾಡಿನ ಇಪ್ಪತ್ತು ಶ್ರೀಗಳ ಉಪಸ್ಥಿತಿ
ಹೊಸ ಸಂಸತ್‌ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮಿಳುನಾಡಿನ 20 ಮಠಗಳ (ಆದೀನಂ)ಗಳ ಸ್ವಾಮೀಜಿಗಳು ಮತ್ತು ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಈ ಬಗ್ಗೆ ಚೆನ್ನೈನಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಉದ್ಘಾಟನಾ ಕಾರ್ಯಕ್ರಮದ ವೇಳೆ, ವಿದ್ವಾಂಸರು ಮಂತ್ರಘೋಷ ಮಾಡಲಿದ್ದಾರೆ. 1947ರಲ್ಲಿ ಕೂಡ ರಾಜದಂಡವನ್ನು ಜವಾಹರ್‌ಲಾಲ್‌ ನೆಹರೂ ಅವರಿಗೆ ಹಸ್ತಾಂತರಿಸುವ ವೇಳೆ, ಇದೇ ಕ್ರಮ ಅನುಸರಿಸಲಾಗಿತ್ತು ಎಂದರು. ತಮಿಳುನಾಡಿನ ರಾಜದಂಡ ಪ್ರತಿಷ್ಠಾಪಿಸುವ ಕ್ರಮದ ಹಿಂದೆ ತಮಿಳು ಮತಗಳನ್ನು ಸೆಳೆಯುವ ಉದ್ದೇಶವಿದೆ ಎಂದೂ ವಿಶ್ಲೇಷಿಸಲಾಗಿದೆ.

ನೆಹರೂ ವಾಕಿಂಗ್‌ ಸ್ಟಿಕ್‌ ಅಲ್ಲ, ರಾಜದಂಡ!
1947ರಲ್ಲಿ ಅಧಿಕಾರ ಹಸ್ತಾಂತರದ ದ್ಯೋತಕವಾಗಿ ನೀಡಲಾಗಿದ್ದ ರಾಜದಂಡವನ್ನು ಅಲಹಾಬಾದ್‌ನ ನೆಹರೂ ಗ್ಯಾಲರಿಯಲ್ಲಿ ಇರಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಸದ್ಯ ಅದನ್ನು ಹೊಸ ಸಂಸತ್‌ನಲ್ಲಿ ಇರಿಸುವ ನಿಟ್ಟಿನಲ್ಲಿ ನವದೆಹಲಿಗೆ ರವಾನಿಸಲಾಗಿದೆ. ಅದನ್ನು ಜವಾಹರ್‌ಲಾಲ್‌ ನೆಹರೂ ಅವರ “ಗೋಲ್ಡನ್‌ ವಾಕಿಂಗ್‌ ಸ್ಟಿಕ್‌’ ಎಂದು ತಪ್ಪಾಗಿ ಭಾವಿಸಲಾಗಿತ್ತು. ಅಧಿಕಾರ ಹಸ್ತಾಂತರವಾದ ಬಳಿಕ ರಾಜದಂಡದ ಮಹತ್ವ ನಿರ್ಲಕ್ಷಿಸಿ ಅದನ್ನು ಮ್ಯೂಸಿಯಂಗೆ ನೀಡಲಾಗಿತ್ತು. 1978ರಲ್ಲಿ ಕಂಚಿ ಮಠದ ಹಿರಿಯ ಅಧಿಕಾರಿಯೊಬ್ಬರು ನೆಹರೂ ರಾಜದಂಡ ವಿಚಾರವಾಗಿ ನಡೆದುಕೊಂಡ ರೀತಿಯನ್ನು ವಿವರಿಸಿದ್ದರು. ಈ ವಿಚಾರ ಅಮೃತ ಮಹೋತ್ಸವದ ವೇಳೆ ಖ್ಯಾತ ನೃತ್ಯಗಾತಿ ಪದ್ಮಾ ಸುಬ್ರಹ್ಮಣ್ಯಂ ಅವರು ತಮಿಳು ಭಾಷೆಯಲ್ಲಿ ಬರೆದಿದ್ದ ಲೇಖನದ ಮೂಲಕ ಬಹಿರಂಗವಾಗಿತ್ತು.
ಭಾಗವಹಿಸಲಿದ್ದಾರೆ: ಮತ್ತೂಂದು ಮಹತ್ವದ ವಿಚಾರವೆಂದರೆ, ರಾಜದಂಡ ಸಿದ್ಧಪಡಿಸುವಲ್ಲಿ ಕೆಲಸ ಮಾಡಿದ ವೆನ್ಮುಡಿ ಎತಿರಾಜುಲು (96) ಮತ್ತು ವೆನ್ಮುಡಿ ಸುಧಾಕರ (88) ಹೊಸ ಸಂಸತ್‌ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲಹಾಬಾದ್‌ನಲ್ಲಿ ಇರುವ ಮ್ಯೂಸಿಯಂನಲ್ಲಿ ಒಟ್ಟು 16 ಗ್ಯಾಲರಿಗಳು ಇವೆ.

ಪ್ರತಿಪಕ್ಷಗಳ ನಿರ್ಧಾರ ನಿಜಕ್ಕೂ ಅಸಮರ್ಥನೀಯ ಮತ್ತು ಖಂಡನೀಯ. ಹೊಸ ಸಂಸತ್‌ ಭವನದ ಉದ್ಘಾಟನೆ ನಿಜಕ್ಕೂ ಸಂತೋಷ ತರುವ ವಿಚಾರ. ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರ ಇರಲಿ, ದೇಶದ ವಿಚಾರಕ್ಕೆ ಬಂದಾಗ ನಾವು ಬೆಂಬಲ ನೀಡಿದ್ದೇವೆ.
-ಮಾಯಾವತಿ, ಬಿಎಸ್‌ಪಿ ನಾಯಕಿ

ರಾಷ್ಟ್ರಪತಿಗಳಿಂದ ಹೊಸ ಸಂಸತ್‌ ಭವನವನ್ನು ಏಕೆ ಉದ್ಘಾಟನೆ ಮಾಡಿಸುತ್ತಿಲ್ಲ? ಈ ಹಿನ್ನೆಲೆಯಲ್ಲಿ ನಾವು ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ.
-ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next