ಮಂಗಳೂರು : ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅವರು ಶನಿವಾರ(ಅ18) ತುಳುನಾಡಿನ ಪ್ರವಾಸದಲ್ಲಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಸಂಜಯ್ ದತ್ ನೋಡಲು ಮುಗಿಬಿದ್ದ ಅಭಿಮಾನಿಗಳು
ಮಂಗಳೂರಿನ ಬಿರುವೆರ್ ಕುಡ್ಲ ದ 10ನೇ ವರ್ಷದ ಹುಲಿ ವೇಷ ಹಾಕುವ ಊದು ಕಾರ್ಯಕ್ರಮದಲ್ಲಿಸಂಜಯ್ ದತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಂಜು ಬಾಯ್ ನೋಡಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಮಧ್ಯಾಹ್ನ 2 ಗಂಟೆಗೆ ಬರುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದರೆ ಬರುವಾಗ ಸುಮಾತು 5.30 ಆಗಿತ್ತು. ವೇದಿಕೆ ಕಡೆ ಬರುತ್ತಿದ್ದಂತೆ ಖಳ್ ನಾಯಕ್ ಸಂಗೀತಕ್ಕೆ ಅಭಿಮಾನಿಗಳೂ ಧ್ವನಿಗೂಡಿಸಿದರು.
ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮೊಬೈಲ್ ಮೂಲಕ ಚಿತ್ರ ತೆಗೆಯಲು ಮುಗಿ ಬಿದ್ದರು. ಬಳಿಕ ಹುಲಿ ವೇಷ ಕುಣಿತ ವೀಕ್ಷಿಸಿದರು.ಹುಲಿ ಮುಖವರ್ಣಿಕೆಯ ಬೃಹತ್ ಉಡುಗೋರೆಯನ್ನು ನೀಡಲಾಯಿತು. ಮೈಕ್ ನಲ್ಲಿ ಹಲೋ ಮಂಗಳೂರು ಎಂದು ಸಂಜು ಹೇಳಿದೊಡನೆ ಭಾರೀ ಕರತಾಡನ ಕೇಳಿಬಂತು. ಸಂಜಯ್ ದತ್ ಅವರು, ಈ ಹುಲಿಗಳಿಗಿಂತ ಉದಯಣ್ಣ ದೊಡ್ಡ ಹುಲಿ ಎಂದುಕೊಂಡಿದ್ದೇನೆ ಎಂದಾಗ ಬಿರುವೆರ್ ಕುಡ್ಲದ ಸದಸ್ಯರು ಭಾರೀ ಚಪ್ಪಾಳೆ ,ಶಿಳ್ಳೆ ಮೂಲಕ ಸಂಭ್ರಮಿಸಿದರು. ಮಂಗಳೂರಿನ ಸಂಸ್ಕೃತಿ ಬಗ್ಗೆ ಅಭಿಮಾನದಿಂದ ಮಾತನಾಡಿದರು.
ಕಾರ್ಯ ಕ್ರಮದಲ್ಲಿ ಉದಯ್ ಪೂಜಾರಿ ಬಳ್ಳಾಲ್ ಬಾಗ್, ವೆಂಕಟೇಶ್ ಭಂಡಾರಿ,ಮಹೇಶ್ ಶೆಟ್ಟಿ,ನಳಿನ್ ಕುಮಾರ್ ಕಟೀಲ್ ಸಹಿತ ಗಣ್ಯರು ಭಾಗವಹಿಸಿದ್ದರು.