Advertisement

ಮರಳುಗಾರಿಕೆ: 1 ಲಕ್ಷ ಚ.ಮೀ. ವ್ಯಾಪ್ತಿಯಲ್ಲಿ ಬೇಥಮೆಟ್ರಿ ಸರ್ವೆ

07:25 AM Jul 31, 2018 | Karthik A |

ಮಂಗಳೂರು: ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಬೇಥಮೆಟ್ರಿ ಸರ್ವೆ ನಡೆಸಿದೆ. ನದಿಯ ತಳಭಾಗದ ಅಧ್ಯಯನವನ್ನು ಕೈಗೊಂಡು ಸೂಕ್ತ ಸ್ಥಳದಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡುವುದು ಇದರ ಉದ್ದೇಶ. ಈ ವರದಿ ಹಾಗೂ ಎನ್‌.ಐ.ಟಿ.ಕೆ.ಯ ತಾಂತ್ರಿಕ ವರದಿ ಪರಿಗಣಿಸಿ ಅರ್ಹ ಮರಳುಗಾರಿಕೆ ನಡೆಸುವವರಿಗೆ ಜಿಲ್ಲಾಡಳಿತ ಅನುಮತಿ ನೀಡಲಿದೆ. ಆ. 2ರಂದು ದ.ಕ. ಜಿಲ್ಲಾ ಮರಳು ನಿಗಾ ಸಮಿತಿ ಈ ಕುರಿತು ಅಂತಿಮ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

Advertisement

ಸಿ.ಆರ್‌.ಝಡ್‌. ವ್ಯಾಪ್ತಿಯಲ್ಲಿನ ನದಿಗಳಲ್ಲಿ ಮರಳೆತ್ತುವ ಪ್ರದೇಶಗಳ ಅಧ್ಯಯನವನ್ನು ಜಿಯೊಮೆರೈನ್ಸ್‌ ಸಂಸ್ಥೆ ಕೈಗೊಂಡಿದ್ದು, ಇದರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆ, ಮೀನುಗಾರಿಕಾ ಇಲಾಖೆ ಸಿಬಂದಿ ಭಾಗವಹಿಸಿದ್ದಾರೆ. ಕರಾವಳಿ ನದಿ ಪಾತ್ರದ ಸುಮಾರು 1 ಲಕ್ಷ ಚ. ಮೀಟರ್‌ ಪ್ರದೇಶದಲ್ಲಿ ಎರಡು ದಿನಗಳ ಕಾಲ ಸರ್ವೆ ನಡೆಸಲಾಗಿದೆ. ಇದುವರೆಗೆ ಎನ್‌.ಐ.ಟಿ.ಕೆ. ನೀಡುವ ಉಪಗ್ರಹ ಆಧಾರಿತ ಅಧ್ಯಯನ ಹಾಗೂ ತಾಂತ್ರಿಕ ವರದಿ ಆಧಾರದಲ್ಲಿ ಸಿಆರ್‌ಝಡ್‌ ಮರಳು ತೆಗೆಯುವ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ದೋಣಿಯಲ್ಲಿ ತೆರಳಿ ಜಿ.ಪಿ.ಎಸ್‌. ಇಕೋ ಸೌಂಡರ್‌ ಮತ್ತಿತರ ಉಪಕರಣಗಳ ಸಹಾಯದಲ್ಲಿ ನದಿಯ ಆಳದಲ್ಲಿರುವ ಮರಳು, ಹೂಳು ಹಾಗೂ ಕಲ್ಲಿನ ಪ್ರಮಾಣವನ್ನು ಸರ್ವೆ ಮಾಡಲಾಗಿದೆ. ಯಾವ ಮರಳು ಯೋಗ್ಯವಾಗಿದೆ ಹಾಗೂ ಯಾವುದು ಅಲ್ಲ ಎಂಬುದನ್ನು ಸರ್ವೆ ಮೂಲಕ ಕಂಡುಕೊಳ್ಳಲಾಗಿದೆ. 

ಈ ಮಧ್ಯೆ ಸಿ.ಆರ್‌.ಝಡ್‌. ಪ್ರದೇಶದಲ್ಲಿ ಸರ್ವೆ ಪ್ರಕ್ರಿಯೆ ಪೂರ್ಣಗೊಂಡು ರಾಜ್ಯಮಟ್ಟದ ಅನುಮೋದನಾ ಸಮಿತಿಯಿಂದ ಅನುಮತಿ ಸಿಗುವುದಕ್ಕೆ ಕೆಲವು ದಿನ ಕಾಯಬೇಕಾಗಬಹುದು ಎಂದು ಕೂಡ ಹೇಳಲಾಗುತ್ತಿದೆ. ಆದರೆ ನದಿಗಳ ಸಮೀಕ್ಷಾ ಪ್ರಕ್ರಿಯೆ ಪೂರ್ಣಗೊಂಡು ವರದಿ ಸಿಕ್ಕಿದ ಬಳಿಕ ಅಗತ್ಯವಿರುವ ಕಡೆಗಳಲ್ಲಿ ಮಾತ್ರ ಮರಳುಗಾರಿಕೆ ನಡೆಸಲು ಈ ಬಾರಿ ಅವಕಾಶ ನೀಡಲಾಗುವುದು ಎಂದು ದ.ಕ. ಜಿಲ್ಲಾಡಳಿತ ಈಗಾಗಲೇ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಏನಿದು ಬೇಥಮೆಟ್ರಿ ಸರ್ವೆ?
ಜಲಸಂಪನ್ಮೂಲಗಳಲ್ಲಿ ನೀರಿನ ತಳದ ನೆಲದ ಸಮೀಕ್ಷೆಯನ್ನು ಬೇಥಮೆಟ್ರಿ ಸರ್ವೆ ಎನ್ನುತ್ತಾರೆ. ಸಾಮಾನ್ಯವಾಗಿ ಸೋನಾರ್‌ ಉಪಕರಣದ ಮೂಲಕ ಇದನ್ನು ನಡೆಸುತ್ತಾರೆ. ಸೋನಾರ್‌ ಉಪಕರಣದ ಮೂಲಕ ಧ್ವನಿ ಅಥವಾ ಬೆಳಕನ್ನು ಹಾಯಿಸಿ, ಅದು ತಳದಿಂದ ಪ್ರತಿಫ‌ಲಿಸಿ ಹಿಂದಿರುಗಿ ಬರುವ ಸಮಯವನ್ನು ಆಧರಿಸಿ ಆಳ, ಅಲ್ಲಿರುವ ವಸ್ತುಗಳು ಇತ್ಯಾದಿ ಮಾಹಿತಿ ಪಡೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next