Advertisement

ತಲೆದಂಡ : ಪರಿಸರದ ಮೌನವೂ ಚಿತ್ರದೊಳಗೆ ಇದ್ದಿದ್ದರೆ ಇನ್ನಷ್ಟು ಹಸಿರಾಗಿರುತ್ತಿತ್ತು !

12:23 PM Nov 27, 2021 | Team Udayavani |

ಅರವಿಂದ ನಾವಡ

Advertisement

ಪಣಜಿ: ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಪ್ರಕೃತಿಯನ್ನು ಕಾಣುವಂತೆ, ನಿಸ್ವಾರ್ಥದಿಂದ ಪ್ರೀತಿಸುವಂತೆ ಉಳಿದವರಿಗೆ ಅಂದರೆ ನಮಗೆ ಏಕೆ ಸಾಧ್ಯವಾಗುವುದಿಲ್ಲ? ನಾವೇಕೆ ಅಷ್ಟೊಂದು ಸ್ವಾರ್ಥಿಗಳಾಗುತ್ತೇವೆ?

ಇಂಥದೊಂದು ಪ್ರಶ್ನೆಯನ್ನು ಹಿನ್ನೆಲೆಯಾಗಿಟ್ಟುಕೊಂಡೇ ರೂಪುಗೊಂಡದ್ದು ಕನ್ನಡ ಸಿನಿಮಾ ‘ತಲೆದಂಡ’. ಈ ಚಿತ್ರವು 52 ನೇ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ವಿಶ್ವ ಪ್ರೀಮಿಯರ್ ಕಂಡಿತು.

ತಲೆದಂಡ ಸಿನಿಮಾ ಪ್ರಕೃತಿ ಸಂರಕ್ಷಣೆಯ ಕುರಿತಾದದ್ದು. ಭವಿಷ್ಯದ ಜನಾಂಗಕ್ಕೆ ಪ್ರಕೃತಿ ಬೇಡವೇ? ಅವರೆಲ್ಲ ಸ್ವಾರ್ಥಿ ಮನುಷ್ಯರಿಂದ ಸೃಷ್ಟಿಯಾದ ನರಕದಲ್ಲಿ ಸಾಯಬೇಕೇ? ಇಂಥವೆಲ್ಲ ನಿಷ್ಠುರ ಪ್ರಶ್ನೆಗಳನ್ನು ಹುಟ್ಟಿಸುವಂಥ ಚಲನಚಿತ್ರ. ಸಂಚಾರಿ ವಿಜಯ್ ಅವರ ಕೊನೆಯ ಚಲನಚಿತ್ರವಿದು. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಕುನ್ನ ಎನ್ನುವ ಪಾತ್ರದಲ್ಲಿ ಒಬ್ಬ ಬುಡಕಟ್ಟು ಸಮುದಾಯದ ಯುವಕ. ಮನೋ ಸ್ವಾಸ್ಥ್ಯ ಕೊರತೆಯಿಂದ ಬಳಲುತ್ತಿರುತ್ತಾನೆ. ಅವನ ತಂದೆ ಪ್ರಕೃತಿಯನ್ನು ಅಪಾರವಾಗಿ ಪ್ರೀತಿಸಿದವ ಎನ್ನುವುದಕ್ಕಿಂತ ಅದರೊಟ್ಟಿಗೇ ಬೆಳೆದವನು. ಎಂದೂ ಪ್ರಕೃತಿಯ ಬದುಕು ತನ್ನ ಬದುಕು ಬೇರೆ ಎಂದುಕೊಂಡವನಲ್ಲ. ಪ್ರಕೃತಿಗೆ (ಕಾಡಿಗೆ) ಸಣ್ಣ ಗಾಯವಾದರೂ ತನ್ನ ಗಾಯವೆಂದೇ ಅನುಭವಿಸುವವನು.

ಇವೆಲ್ಲವೂ ಕುನ್ನನಲ್ಲೂ ಮೈಗೂಡಿರುತ್ತದೆ. ತನ್ನ ತಂದೆಯ ಸಾವಿನ ನಂತರ ಕುನ್ನ ಕಾಡನ್ನು ಪ್ರೀತಿಸುವ, ಸಂರಕ್ಷಿಸುವ ಉತ್ತರಾಧಿಕಾರವನ್ನು ಹೊಂದುತ್ತಾನೆ. ಇದರರ್ಥ ತನ್ನಪ್ಪನಂತೆಯೇ ಕಾಡನ್ನು ಅಪಾರವಾಗಿ ಪ್ರೀತಿಸತೊಡಗುತ್ತಾನೆ. ಅವನ ತಾಯಿ ಸರಕಾರದ ನರ್ಸರಿಯಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿರುತ್ತಾಳೆ. ಕುನ್ನನೂ ಅವಳಿಗೆ ಸಹಾಯ ಮಾಡುತ್ತಾ ಬೆಳೆಯುತ್ತಾನೆ.

Advertisement

ಒಂದು ದಿನ ಸರಕಾರ ಅವನಿರುವ ಹಳ್ಳಿಯಿಂದ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ರಸ್ತೆಯ ಯೋಜನೆಯನ್ನು ಅನುಮೋದಿಸುತ್ತದೆ. ಸರಕಾರದ ಯೋಜನೆ ಹಾದು ಹೋಗುವಲ್ಲಿ ಸ್ಥಳೀಯ ಶಾಸಕರ ಭೂಮಿ ಇರುತ್ತದೆ. ಅದನ್ನು ಉಳಿಸಿಕೊಳ್ಳುವ ಸಲುವಾಗಿ ಇಡೀ ಯೋಜನೆಯ ರೂಪು ರೇಷೆಯನ್ನೇ ಬದಲಾಯಿಸುತ್ತಾನೆ. ಇದರಿಂದ ರಸ್ತೆ ಹಳ್ಳಿಯ ಹಸಿರು ಪ್ರದೇಶದಲ್ಲಿ ಹಾದು ಹೋಗುವಂತಾಗುತ್ತದೆ. ನೂರಾರು ಮರಗಳನ್ನು ಉರುಳಿಸಬೇಕಾಗುತ್ತದೆ. ಇದನ್ನು ಕಂಡು ಕುನ್ನನಿಗೆ ಸಹಿಸಲಾಗುವುದಿಲ್ಲ. ದುಃಖಿಸುತ್ತಾನೆ, ಪ್ರತಿಭಟಿಸುತ್ತಾನೆ. ದುಃಖಿಸುತ್ತಾನೆ. ಹೇಗಾದರೂ ಮಾಡಿ ಮರಗಳನ್ನು ಉಳಿಸಲು ಪ್ರಯತ್ನಿಸುತ್ತಾನೆ. ಹತಾಶೆಯಿಂದ ಯೋಜನೆಯನ್ನು ಜಾರಿಗೊಳಿಸಲು ಬರುವ ಸರಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸುತ್ತಾನೆ ಕುನ್ನ. ಮನಸ್ಸು, ಮೆದುಳು ಇಲ್ಲದ ಸರಕಾರಕ್ಕೆ ಇದಷ್ಟೇ ಸಾಕಾಗುತ್ತದೆ. ಅವನ ಮೇಲೆ ಕರ್ತವ್ಯ ನಿರತ ಸರಕಾರಿ ನೌಕರರ ಮೇಲೆ ಹಲ್ಲೆಯ ಕೇಸು ದಾಖಲಿಸಿ ಬಂಧಿಸಲಾಗುತ್ತದೆ.

ಕೋರ್ಟೀನ ಹಸ್ತಕ್ಷೇಪದಿಂದ ಜೈಲಿಗೆ ಹೋಗುವುದು ತಪ್ಪುತ್ತದೆ. ಕುನ್ನನ ಮನೋಸ್ವಾಸ್ಥ್ಯದ ಮಟ್ಟವನ್ನು ಪರೀಕ್ಷಿಸಲು ಸೂಚಿಸಲಾಗುತ್ತದೆ. ಮೂರು ತಿಂಗಳ ಕಾಲ ಮನೋಸ್ವಾಸ್ಥ್ಯ ಕೇಂದ್ರದಲ್ಲಿದ್ದು, ಆ ಬಳಿಕ ಮನೆಗೆ ವಾಪಸಾಗುತ್ತಾನೆ. ಮರಗಳನ್ನು ಉಳಿಸುವ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ.

ಕೆಲವರ ಸಹಾಯ ಪಡೆದು ಮುಖ್ಯಮಂತ್ರಿಯವರಿಗೆ ಪತ್ರವನ್ನೂ ಬರೆಸುತ್ತಾನೆ. ಎಲ್ಲವೂ ನಡೆಯುತ್ತಿರುವಾಗಲೇ, ರಸ್ತೆಯ ಯೋಜನೆ ಜಾರಿಗೆ ಶಾಸಕ ಮುಂದಾಗುತ್ತಾನೆ. ರಾತ್ರೋ ರಾತ್ರಿ ಮರಗಳನ್ನು ಉರುಳಿಸಬೇಕೆಂಬ ಯೋಜನೆ ಸಿದ್ಧವಾಗುತ್ತದೆ. ಇದನ್ನು ತಿಳಿದು ದುಃಖಿಸುವ ಕುನ್ನ, ಪ್ರಕೃತಿ ಬಗೆಗೆ ಪ್ರೀತಿಯಲ್ಲದ, ಮನಸ್ಸು ಮೆದುಳಿಲ್ಲದ ಸರಕಾರದ ಧೋರಣೆಯನ್ನು ಪ್ರತಿಭಟಿಸುವ ಅಸಹಾಯಕನಾಗಿ ಮರವೊಂದಕ್ಕೆ ನೇಣು ಹಾಕಿಕೊಳ್ಳುತ್ತಾನೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಪತ್ರ ತಲುಪಿ, ಮರಗಳನ್ನು ಕಡಿಯದಂತೆ ಆದೇಶಿಸುತ್ತಾರೆ. ಒಟ್ಟೂ ಪರಿಣಾಮ ಮರಗಳು ಉಳಿಯುತ್ತವೆ, ಪರಿಸರ ಸಂರಕ್ಷಣೆಯಾಗುತ್ತದೆ.

ಎಲ್ಲರ ಭಾಗ ಮತ್ತು ಅಗತ್ಯವೆನಿಸುವ ಪ್ರಕೃತಿಯನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅದನ್ನೂ ಸಮರ್ಥವಾಗಿ ನಿಭಾಯಿಸಲು ಒಂದಿಷ್ಟು ಮಂದಿಯ ಬಲಿ ಏಕೆ ಆಗಬೇಕು? ಕೆರೆಗೆ ಹಾರದಂತೆ ಏಕಾಗಬೇಕು? ಎಂಬುದು ಸಿನಿಮಾ ನಮ್ಮಲ್ಲಿ ಉಳಿಸುವ ತಾತ್ವಿಕ ಪ್ರಶ್ನೆ. ಪ್ರಕೃತಿಯ ನಾಶದ ಪರಿಣಾಮ ಅಥವಾ ತನ್ನ ಒಂದು ನಿರ್ಧಾರದ ಪರಿಣಾಮ ಹಲವರ ಸಾವಿನ ನಂತರವೇ ಸರಕಾರದಂಥ ವ್ಯವಸ್ಥೆಗೆ, ಸಚಿವರಂಥ ಮನುಷ್ಯ ಜೀವಿಗಳಿಗೆ ಏಕೆ ಅರ್ಥವಾಗುತ್ತದೆ? ಹೇಗೆ ಅರ್ಥವಾಗುತ್ತದೆ? ಎಂಬುದು ಪ್ರೇಕ್ಷಕನಲ್ಲಿ ಏಳಿಸುವ ಸಂದೇಹಗಳು.

ಸಿನಿಮಾದ ಕಥಾವಸ್ತು ಚೆನ್ನಾಗಿದೆ. ಹಲವು ಬುಡಕಟ್ಟು ಸಮುದಾಯಗಳು ಒಂದು ಕಾಲದಲ್ಲಿ ಕಾಡಿನ ಸಂರಕ್ಷಕ ಸಮುದಾಯಗಳಾಗಿದ್ದವು. ಕಾಡನ್ನು ತಮ್ಮ ಬದುಕಿನೊಂದಿಗೇ ಪ್ರೀತಿಸುತ್ತಾ ಬೆಳೆದವರು. ಅದೇ ಒಬ್ಬ ಸಮುದಾಯದ ಯುವಕ, ಅದರಲ್ಲೂ ಮನೋಸ್ವಾಸ್ಥ್ಯ ಕೊರತೆಯ ಯುವಕನ ಪ್ರಕೃತಿ ಬಗೆಗಿನ ಅವಿಚ್ಛಿನ್ನ ಪ್ರೀತಿ ಅನನ್ಯ. ಅದನ್ನು ಸರಾಗವಾಗಿ ಪ್ರೇಕ್ಷಕರನ್ನು ತಲುಪಿಸುವಲ್ಲಿ ಸಂಚಾರಿ ವಿಜಯ್ ಎಲ್ಲೂ ಸೋಲುವುದಿಲ್ಲ. ಜತೆಗೆ ಮನಸ್ಸೇ ಸರಿ ಇಲ್ಲದಿದ್ದರೂ ಕಾಡಿನ ಬಗೆಗಿನ ಪ್ರೀತಿಗೆ ಯಾವ ಕೊರತೆಯೂ ಕಾಣುವುದಿಲ್ಲ, ಎಲ್ಲವೂ ಸರಿ ಇದ್ದ ನಮ್ಮಲ್ಲೇಕೆ ಆ ಭಾವ ಮೂಡುವುದಿಲ್ಲ ಎಂಬ ಪ್ರಶ್ನೆಯನ್ನೂ ಏಳಿಸುತ್ತಾರೆ.

ಆದರೆ ಒಟ್ಟಂದದಲ್ಲಿ ನೋಡುವಾಗ ಚಿತ್ರ ಸ್ವಲ್ಪ ಹಿಂದಕ್ಕೆ ಬೀಳುವುದು ಅಲ್ಲಿರಬೇಕಾದ ಮತ್ತು ಇರಲೇಬೇಕಾದ ಒಂದಿಷ್ಟು ಬೊಗಸೆಗಳ ಮೌನಕ್ಕೆ ಅವಕಾಶ ಕಲ್ಪಿಸದಿರುವುದು. ಪ್ರಕೃತಿಯ ಬಹಳ ಪ್ರಮುಖವಾದ ಭಾಗ ಮೌನ. ಪ್ರಕೃತಿ ಮೊದಲು ಪ್ರತಿನಿಧಿಸುವುದೇ ಅದನ್ನು. ಕಥೆ ಬೆಳೆಸುವ ಅಥವಾ ನಿರೂಪಿಸುವ ವೇಗದಲ್ಲಿ ವಿಸ್ತರಿಸಿಕೊಳ್ಳುವ ಪಾತ್ರಗಳು ಮತ್ತು ಅವುಗಳಲ್ಲಿನ ತುಸು ಹೆಚ್ಚೆನಿಸುವ ವಾಚಾಳಿತನ ಪ್ರಕೃತಿಯಲ್ಲಿನ ಸಹಜ ಮೌನವನ್ನು ಕೊಲ್ಲುತ್ತದೆ. ಅದರ ಪರಿಣಾಮ ಕಥೆಯೊಳಗಿನ ಮೌನ ಪ್ರೇಕ್ಷಕನ ಮನಸ್ಸಿನಾಳಕ್ಕೆ ಇಳಿಯುವುದು ಕಷ್ಟ ಸಾಧ್ಯವೆನಿಸುತ್ತದೆ.

ಟಿವಿ ಯಲ್ಲಿನ ಕಾರ್ಟೂನ್ ಗಳ ಚಲನೆಯನ್ನೇ ಬೆರಗಿನಿಂದ ನೋಡುತ್ತಾ ಅದರ ಮಾತನ್ನು ಮತ್ತು ಮೌನವನ್ನು ಸಂಪೂರ್ಣವಾಗಿ ಹಿಡಿಯುವಲ್ಲಿ ಸೋಲುವ ಮಕ್ಕಳಂತೆ ಎನಿಸಿಬಿಡುತ್ತದೆ. ಪಾತ್ರಗಳು ಪ್ರೇಕ್ಷಕನೊಳಗೆ ಬೆಳೆಯುವುದು ಅವುಗಳ ಮಾತಿನಂದಲ್ಲ, ಬದಲಾಗಿ ಅವುಗಳು ಧರಿಸುವ ಮತ್ತು ಪ್ರದರ್ಶಿಸುವ ಮೌನದ ಮೂಗುತಿಯ ಹೊಳಪಿನಿಂದ.

ಮಳೆ ನಿಂತ ಮೇಲೂ ಉದುರುವ ಹನಿ ಭೂಮಿಗೆ ಸ್ಪರ್ಶಿಸುವ ನಡುವಿನ ಮೌನ ಅಸಾಧಾರಣವಾದುದು. ಅನುಭವದ ತೀವ್ರತೆ ಹೆಚ್ಚಿಸುವಂಥದ್ದು. ಅಪರೂಪದ ಕಥಾವಸ್ತು ಅನನ್ಯವಾಗದೇ ಉಳಿಯುವುದು ಈ ಹಂತದಲ್ಲೇ. ಇದರ ನಿರ್ದೇಶಕ ಪ್ರವೀಣ್ ಕೃಪಾಕರ್ ಕೆಲವು ಸನ್ನಿವೇಶಗಳಲ್ಲಿ ತೋರಿರುವ ಸೂಕ್ಷ್ಮತೆ ಈ ದಿಸೆಯಲ್ಲೂ ತೋರಿದ್ದರೆ ಕಲಾಕೃತಿ ಇನ್ನಷ್ಟು ಸೊಗಸಾಗಿರುತ್ತಿತ್ತು.

ಪಾತ್ರಗಳ ನಿರ್ವಹಣೆಯಲ್ಲಿ ಸಂಚಾರಿ ವಿಜಯ್, ಎನ್. ಮಂಗಳಾ (ಕುನ್ನನ ಅಮ್ಮ), ಮಂಡ್ಯ ರಮೇಶ್ (ಶಾಸಕ), ರಮೇಶ್ ಪಂಡಿತ್, ಭವಾನಿ, ಚೈತ್ರ ಆಚಾರ್ ಎಲ್ಲರೂ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಎಲ್ಲರೂ ರಂಗಭೂಮಿಯ ಹಿನ್ನೆಲೆಯವರು. ಪಾತ್ರಗಳನ್ನು ಧರಿಸುವುದು ಕರಗತವಾದುದೇ. ಸಂಚಾರಿ ವಿಜಯ್ ಹೊರತುಪಡಿಸಿದಂತೆ ಕೆಲವು ಪಾತ್ರಗಳು ಕಥೆಯಲ್ಲಿ ಇರಬಹುದಾದ ಮತ್ತು ಸನ್ನಿವೇಶಗಳ ಮಧ್ಯೆ ಸೃಜನೆಯಾಗುವ ಮೌನವನ್ನು ನುಂಗಿ ಬಿಡುತ್ತಾರೆ. ಅದು ಚಲನಚಿತ್ರವನ್ನು ವಾಚಾಳಿಗೊಳಿಸುತ್ತದೆ.

ತಮ್ಮ ಚಿತ್ರದ ಬಗ್ಗೆ ಮಾತನಾಡಿದ ಪ್ರವೀಣ್, ‘ಪ್ರಕೃತಿಯನ್ನು ರಕ್ಷಿಸದೇ ಮರಗಳನ್ನು ಕಡಿಯುತ್ತಾ ನಾವೇ (ಮನುಷ್ಯರು) ನಮ್ಮ ಗೋರಿಯನ್ನು ತೋಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ. ಕಥೆಯ ಒಂದು ಸಾಲಿನ ಸಂದೇಶವೆಂದರೆ, ಅಲ್ಲಿ ಕುನ್ನನ ತಲೆದಂಡವಾಯಿತು. ಆದರೆ ಪ್ರಕೃತಿ ಬಗೆಗೆ, ಪರಿಸರದ ಬಗೆಗೆ ಇಂಥದ್ದೇ ಉಪೇಕ್ಷೆ,ಅಸಡ್ಡೆ ಮುಂದುವರಿದರೆ ಮುಂದೊಂದು ದಿನ ಮನುಕುಲದ ತಲೆದಂಡವಾದೀತು ಎಂದು ಎಚ್ಚರಿಸಲೆತ್ನಿಸುತ್ತದೆ.

ನೂರು ವರ್ಷಗಳಲ್ಲಿ ನಾವು ಶೇ. 50 ರಷ್ಟು ಪ್ರಕೃತಿ ಮತ್ತು ಪರಿಸರವನ್ನು ನಾಶಗೊಳಿಸಿದ್ದೇವೆ. ಈ ಮೂಲಕ ಭವಿಷ್ಯದ ತಲೆಮಾರುಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೇವೆ. ಒಬ್ಬ ಮನೋಸ್ವಾಸ್ಥ್ಯವಿಲ್ಲದ ವ್ಯಕ್ತಿ 30 ವರ್ಷಗಳಿಂದ ತನ್ನಷ್ಟಕ್ಕೇ ಪರಿಸರ ಸಂರಕ್ಷಣೆಯಲ್ಲಿ ಕ್ರಿಯಾಶೀಲವಾಗಿದ್ದನ್ನು ಕಂಡೇ ಈ ಸಿನಿಮಾ ಮಾಡಿದ್ದೇನೆ. ನನ್ನ ಕಥೆಗೆ ಸ್ಫೂರ್ತಿಯೇ ಸತ್ಯ ಘಟನೆ ಎಂದರು ಪ್ರವೀಣ್ ಕೃಪಾಕರ್.

ಹವಾಮಾನ ವೈಪರೀತ್ಯವನ್ನು ನಾವಿನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಅದು ನಿಜ, ಬರಿಯ ಕಲ್ಪನೆಯಲ್ಲ. ಚಿತ್ರವು ಶೇ. 1 ರಷ್ಟು ಪ್ರೇಕ್ಷಕರಲ್ಲಿ ಪರಿಸರದ ಕುರಿತು ಒಂದಿಷ್ಟು ಅರಿವು ಮೂಡಿಸಿದರೂ ನನ್ನ ಪರಿಶ್ರಮ ಸಾರ್ಥಕ ಎಂದ ಪ್ರವೀಣ್, ಸಂಚಾರಿ ವಿಜಯ್ ಅವರ ಅಗಲಿಕೆಯನ್ನೂ ಸ್ಮರಿಸಿಕೊಂಡರು. ಚಿತ್ರದ ಆರಂಭದಿಂದಲೂ ಕೊನೆವರೆಗೂ ಇದ್ದ ಸಂಚಾರಿ ವಿಜಯ್, ಅದು ತೆರೆ ಕಂಡು ಜನರನ್ನು ತಲುಪುವಾಗ ಇಲ್ಲದಿರುವುದು ಬಹಳ ಬೇಸರದ ಸಂಗತಿ ಎಂದರು.

ಚಿತ್ರವನ್ನು ಕೃಪಾನಿಧಿ ಕ್ರಿಯೇಷನ್ಸ್ ನಿರ್ಮಿಸಿದ್ದು, ಅಶೋಕ್ ಕಶ್ಯಪ್ ಅವರು ಛಾಯಾಗ್ರಹಣವನ್ನು ಪೂರೈಸಿದ್ದಾರೆ. ಬಿ.ಎಸ್. ಕೆಂಪರಾಜು ಅವರ ಸಂಕಲನವಿದೆ. ಪ್ರವೀಣ್ ಕೃಪಾಕರ್ ಚಿತ್ರ ನಿರ್ದೇಶಕರಾಗಿ, ನಟರಾಗಿ, ಚಿತ್ರಕಥಾ ರಚನಾಕಾರರಾಗಿ ಹಾಗೂ ನಿರ್ಮಾಪಕರಾಗಿರುವವರು. ಜತೆಗೆ ಮೈಸೂರು ವಿಶ್ವವಿದ್ಯಾಲಯದಲ್ಲೂ ಫ್ಯಾಕಲ್ಟಿ ಸದಸ್ಯರಾದವರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next