Advertisement

ಸಂಚಾರ ಮುಗಿಸಿದ ಸಂಚಾರಿಗೆ ನುಡಿನಮನ

10:11 AM Jun 27, 2021 | Team Udayavani |

ಬದುಕಿನ ಪಾತ್ರಕ್ಕೆ ತೆರೆ ಎಳೆದು, ಕಾಣದ ದಾರಿಯ ಸಂಚಾರ ಪ್ರಾರಂಭಿಸಿದ ಸಂಚಾರಿ ವಿಜಯ್‌ ನಮ್ಮ ಕನ್ನಡದ ಹೆಮ್ಮೆ.

Advertisement

ಸಂಚಾರಿ ಎಂದರೆ ಸಂಚಲನ ಮೂಡಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟ ಇನ್ನು ನಮ್ಮೆಲ್ಲರ ಮನದಲ್ಲಿ ನೆನಪು ಮಾತ್ರ. ಜುಲೈ  17ರ 1983 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿ, ಲಿಂಗಾಪುರ ಗ್ರಾಮದಲ್ಲಿ ಈ ಉದಯೋನ್ಮುಖ ದೈತ್ಯ ಪ್ರತಿಭೆಯ ಉದಯವಾಯಿತು. ತಂದೆ ಬಸವರಾಜಯ್ಯ ಚಿತ್ರ ಕಲಾವಿದರಾಗಿದ್ದು, ಸಂಗೀತ ವಾದಕರಾಗಿದ್ದರು. ತಾಯಿ ಗೌರಮ್ಮ ಜನಪದ ಕಲಾವಿದೆಯಾಗಿದ್ದು, ಭದ್ರಾವತಿ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಇಡೀ ಕುಟುಂಬವೇ ಕಲೆಯನ್ನು ಆರಾಧಿಸುತ್ತಿದ್ದಿದ್ದರಿಂದ ಸಂಚಾರಿ ವಿಜಯ್‌ ಬಾಲ್ಯದಿಂದಲೇ ಕಲಾ ಮಾತೆಯ ಆರಾಧನೆಯಲ್ಲಿ ತೊಡಗಿಸಿಕೊಂಡು ಚಿತ್ರ ಕಲಾವಿದರಾಗಿ ಗುರುತಿಸಿಕೊಂಡರು. ಅನಂತರ ರಂಗಭೂಮಿಯ ಆಸಕ್ತಿ ಇವರ ಸೆಳೆದು ಸಾವು ಧ್ಯೇಯಕ್ಕಿಲ್ಲ, ಶ್ಮಶಾನ ಕುರುಕ್ಷೇತ್ರ, ಸತ್ಯಾಗ್ರಹ, ಶೂದ್ರ ತಪಸ್ವಿ, ಸಾವಿರದವಳು, ಸಂತೆಯೊಳಗೊಂದು ಮನೆಯ ಮಾಡಿ, ಪ್ಲಾಸ್ಟಿಕ್‌ ಭೂತ,  ಹಳ್ಳಿಯೂರ ಹಮ್ಮಿàರ, ಕಮಲಮಣಿ ಕಾಮಿಡಿ ಕಲ್ಯಾಣ, ಸಾಂಬಶಿವ ಪ್ರಹಸನ, ಮುಂತಾದ ನಾಟಕಗಳಲ್ಲಿ ಅಭಿನಯಿಸಿ ರಂಗಪ್ರೇಮಿಗಳನ್ನು ಮನರಂಜಿಸಿದ್ದರು.

ಸಂಚಾರಿ ಥಿಯೇಟರ್‌ ಮೂಲಕ ಪಿನಾಕಿಯೇ, ಮಿಸ್‌ ಅಂಡಸ್ಟ್ಯಾಂಡಿಂಗ್‌ ನಂತಹ ನಾಟಕಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡರು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದ ಇವರು ನಾಟಕ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿ ಪ್ರೇಕ್ಷಕ ಬಂಧುವಿಗೆ ಸಂಗೀತದ ರಸದೌತಣವನ್ನು ಉಣಬಡಿಸುತ್ತಿದ್ದರು.

ಕಷ್ಟಗಳ ಮೂಟೆ ಹೊತ್ತು ಚಿತ್ರರಂಗ ಪ್ರವೇಶಿಸಿದ ಇವರ ಆರಂಭದ ದಿನಗಳು ಸುಲಭ¨ªೆನಿರಲ್ಲಿಲ್ಲ. ಸದಾ ವಿಭಿನ್ನತೆ ಬಯಸುವ  ಸಂಚಾರಿ ಪಾಲಿಗೆ ಸಿಕ್ಕಿದ್ದು  ನಾನು ಅವನಲ್ಲ ಅವಳು ಎಂಬ ಚಿತ್ರ. ಈ ಚಿತ್ರ ನೋಡಿದ ಯಾವೊಬ್ಬ ಸಿನಿ ಅಭಿಮಾನಿಯು ಇವರ ಅಭಿನಯಕ್ಕೆ ಮನ ಸೋಲದೆ ಇರಲಾಗದು.ತಾನು ಆ ಮಂಗಳಮುಖೀ ಪಾತ್ರದಲ್ಲಿ ಪರಕಾಯ ಪ್ರವೇಶಿಸಿ ಚಿತ್ರರಸಿಕರನ್ನು ದಿಗ್ಭ್ರಮೆಗೊಳಿಸಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಹೆಮ್ಮೆ ಇವರದ್ದು. ನಾನು ಅವನಲ್ಲ ಅವಳು ಎಂಬ ಚಿತ್ರ ಸದಾಕಾಲಕ್ಕೂ ಅವರ ಅಭಿಮಾನಿಗಳ  ಎದೆಯಲ್ಲಿ ಅಚ್ಚಳಿಯದೆ ಉಳಿದು ಸಂಚಾರಿಯು “ತೃತೀಯ ಲಿಂಗಿಯ’ ಪಾತ್ರದ ಮುಖಾಂತರ ಸದಾ ಜೀವಂತವಾಗಿರುತ್ತಾರೆ. ಅನಂತರ ಹರಿವು ಚಿತ್ರದ ನಟನೆಗಾಗಿ ರಾಜ್ಯ ಗ್ರಾಮೀಣ ನಟನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ನಾತಿಚರಾಮಿ, ಕೃಷ್ಣ ತುಳಸಿ, ಕಿಲ್ಲಿಂಗ್‌ ವೀರಪ್ಪನ್‌,  6ನೇ ಮೈಲಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಆಕ್ಟ್ 1978, ರಿಕ್ತ, ಪಾದರಸ, ಒಗ್ಗರಣೆ, ಶುದ್ಧಿ, ತಲೆದಂಡ ಇವರು ನಟಿಸಿದ ಕೆಲವು ಚಿತ್ರಗಳು ಮತ್ತು ಕೆಲವು ಇನ್ನೂ ತೆರೆಕಾಣಬೇಕಾದ್ದದ್ದು. ಇವರು ಕೊನೆಯದಾಗಿ ನಟಿಸಿ ಬಿಡುಗಡೆ ಹಂತದಲ್ಲಿರುವ ತಲೆದಂಡ ಚಿತ್ರದ ಟೀಸರ್‌ ನೋಡಿದ ಪ್ರತಿಯೊಬ್ಬ ಸಂಚಾರಿಯ ಅಭಿಮಾನಿಯು ಈಗ ಮಂತ್ರ ಮುಗ್ಧ! ಮಾಡಿದ ಪ್ರತೀ ಸಿನೆಮಾದಲ್ಲು ತನ್ನ ವಿಭಿನ್ನವಾದ ಪಾತ್ರದ ರೌದ್ರ ರೂಪ ತೋರಿಸಿ ಅಭಿಮಾನಿಗಳನ್ನು ಮನರಂಜಿಸುವ ಸಂಚಾರಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

Advertisement

38 ವರ್ಷದ ಈ ನಟನ ಸಾಧನೆ ಇನ್ನೂ ಹಲವಿತ್ತು, ಕನ್ನಡಕ್ಕೆ ಇನ್ನೂ ಪ್ರಶಸ್ತಿಗಳ ಸುರಿಮಳೆ ಬರುವುದಿತ್ತೇನು.ಸಂಚಾರಿಯ ಕನಸು ನೂರಿತ್ತು. ಇನ್ನೂ ಚಿತ್ರ ರಸಿಕರನ್ನು ಮನರಂಜಿಸಲಿತ್ತು. ಆದರೇನು ಮಾಡುವುದು,  ಸಂಚಾರಿ ಸಂಚಾರಿ ನಿಯಮವನ್ನು ಪಾಲಿಸಲಿಲ್ಲ ಎಂಬ ಅಪವಾದದ ದುಃಖದ ಸುದ್ದಿ ನೀಡುತ್ತಲೇ ಮರೆಯಾದರು. ಪಾದರಸದಂತಹ ನಟನೆಯ ಪರಿಪೂರ್ಣ ನಟ, ನಟನ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಭೂಪ ಕನ್ನಡ ಚಿತ್ರರಂಗದಲ್ಲಿ ಮಿನುಗುತ್ತಿದ್ದ ಧ್ರುವತಾರೆ ಅನಿರೀಕ್ಷಿತವಾಗಿ ನಡೆದ ಅಪಘಾತದಲ್ಲಿ ವಿಧಿಯ ಕರೆಗೆ ಓಗೊಟ್ಟು ಸಂಚಾರ ಅಂತ್ಯಗೊಳಿಸಿದರು.

ಎಲ್ಲೆಲ್ಲೂ ನೀರವ ಮೌನ,  ಕನ್ನಡ ಚಿತ್ರರಂಗ ಮತ್ತೆ ಮತ್ತೆ ಬರಿದಾಗುತ್ತಿದೆ ಇಂತಹ ಅಮೋಘ ನಟರನ್ನು ಕಳೆದುಕೊಂಡು. ಹೋಗಿಬನ್ನಿ ಸಂಚಾರಿ ವಿಜಯ್.

ಜೀವನದ ಸಂಚಾರದಲ್ಲಿ ಕಣ್ಮರೆಯಾದರು ನಿಮ್ಮೆಲ್ಲ ಅಭಿಮಾನಿಗಳ  ನೆನಪಲ್ಲಿ ಸದಾಕಾಲವೂ ಸಂಚಾರಿಯಾಗಿ ನಿಶಬ್ದದಿಂದಲೇ ಸಂಚರಿಸುವಿರಿ. ಸಾವಲ್ಲೂ ಮಾನವೀಯತೆ ಮೆರೆದು ಅಂಗಾಗ ದಾನ ಮಾಡಿ ಇನ್ನೊಂದು ಜೀವಕ್ಕೆ ಆಸರೆಯಾದ ನಿಮ್ಮ ಅಭಿಮಾನಿ ನಾವು ಎಂಬ ಹೆಮ್ಮೆ, ಸಾರ್ಥಕತೆ ನಮ್ಮಲ್ಲಿದೆ.

 

 ಕೃತಿಕಾ ಸದಾಶಿವ

ದ್ವಿತೀಯ ಪತ್ರಿಕೋದ್ಯಮ ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next