Advertisement

ಕ್ಷುಲ್ಲಕ ರಾಜಕೀಯಕ್ಕೆ ಸಂಸತ್‌ ಕಲಾಪ ಬಲಿಯಾಗದಿರಲಿ

02:30 AM Jul 20, 2021 | Team Udayavani |

ದೇಶ ಒಂದು ಕಡೆಯಲ್ಲಿ ಕೊರೊನಾ ಕಷ್ಟ ಅನುಭವಿಸುತ್ತಿದೆ. ಮತ್ತೂಂದು ಕಡೆ ದೇಶಾದ್ಯಂತ ವರುಣನ ರುದ್ರ ನರ್ತನವೇ ಆಗುತ್ತಿದೆ. ಈ ಎರಡೂ ಸಂಕಷ್ಟಗಳ ಮಧ್ಯೆ ಸೋಮವಾರವಷ್ಟೇ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಕಲಾಪ ಗದ್ದಲಕ್ಕೆ ಬಲಿಯಾಗಿದೆ.

Advertisement

ಪ್ರತೀ ಬಾರಿಯೂ ಸಂಸತ್‌ ಕಲಾಪಕ್ಕೆ ಒಂದಿಲ್ಲೊಂದು ಘಟನೆಗಳು ಅಡ್ಡಿಯಾಗುತ್ತಲೇ ಇವೆ. ಈ ಮೂಲಕ ಕಲಾಪ ಫ‌ಲಪ್ರದವಾಗಿ ನಡೆಯಲು ಸಾಧ್ಯವಾಗುತ್ತಲೇ ಇಲ್ಲ. ಇಲ್ಲಿ ರಾಜಕಾರಣಿಗಳು ತಮ್ಮ ರಾಜಕಾರಣಕ್ಕಿಂತ ಜನರ ಹಿತಾಸಕ್ತಿಗೆ ಹೆಚ್ಚಿನ ಬೆಲೆ ಕೊಡದಿರುವುದೇ ಇದಕ್ಕೆ ಕಾರಣ.

ಕಲಾಪದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಅವರು ನೂತನವಾಗಿ ಪ್ರಮಾಣ ವಚ‌ನ ಸ್ವೀಕಾರ ಮಾಡಿರುವ ಸಚಿವರ ಪರಿಚಯ ಮಾಡಿಕೊಡುತ್ತಿದ್ದರು. ಆದರೆ ವಿಪಕ್ಷಗಳು ಇದಕ್ಕೆ ಅವಕಾಶ ನೀಡದೆ ಗದ್ದಲ ಎಬ್ಬಿಸಿದ್ದರಿಂದ ಮೊದಲ ದಿನದ ಕಲಾಪ ಆಹುತಿಯಾಯಿತು. ಸಂಸತ್‌ನ ಸಂಪ್ರದಾಯಕ್ಕೆ ಅನುಗುಣವಾಗಿ ಪ್ರಧಾನಿಗಳು, ನೂತನ ಸಚಿವರನ್ನು ಸದನಕ್ಕೆ ಪರಿಚಯ ಮಾಡಿಕೊಡುವುದು ಸಾಮಾನ್ಯ. ಆದರೆ ಇದಕ್ಕೂ ಅವಕಾಶ ಮಾಡಿಕೊಡದೆ ಸದನಕ್ಕೆ ಅಡ್ಡಿಪಡಿಸಿರುವುದು ಸತ್ಸಂಪ್ರದಾಯವಲ್ಲ.

ಇದಕ್ಕೆ ಮಿಗಿಲಾಗಿ ಈ ಬಾರಿಯ ಸಂಸತ್‌ ಅಧಿವೇಶನದ ವೇಳೆ ವಿಪಕ್ಷಗಳು ಮತ್ತು ಸರಕಾರ ಒಟ್ಟಿಗೆ ಕುಳಿತು ಕೊರೊನಾ ಸಂಕಷ್ಟದ ಬಗ್ಗೆ ಚರ್ಚೆ ಮಾಡಲೇಬೇಕು. ಈ ವಿಚಾರದಲ್ಲಿ ಗದ್ದಲ ಎಬ್ಬಿಸುವುದಕ್ಕಿಂತ ಈಗ ಏನಾಗಿದೆ. ಮುಂದೇನಾಗಬೇಕು ಎಂಬ ಬಗ್ಗೆ ಚರ್ಚೆಯಾಗಬೇಕು. ಕೊರೊನಾ 2ನೇ ಅಲೆ ವೇಳೆ ದೇಶಾದ್ಯಂತ ಹಾಸಿಗೆ ಸಮಸ್ಯೆ, ಆಕ್ಸಿಜನ್‌ ಸಮಸ್ಯೆ ಹೆಚ್ಚಾಗಿಯೇ ಕಾಣಿಸಿಕೊಂಡಿತ್ತು. ಸದ್ಯದಲ್ಲೇ ಮೂರನೇ ಅಲೆ ಬರಲಿದೆ ಎಂಬ ಆತಂಕದ ಭವಿಷ್ಯವಾಣಿ ಇದೆ. ಹೀಗಾಗಿ ಈ ಕಲಾಪದ ವೇಳೆ ಚರ್ಚಿಸಿ, ಇದಕ್ಕೊಂದು ಪರಿಹಾರ ಕಾಣಬೇಕು. ಇದರಿಂದ ಬಿಜೆಪಿ, ಕಾಂಗ್ರೆಸ್‌ ಅಷ್ಟೇ ಅಲ್ಲ, ಇತರ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂಬುದನ್ನು ಮನಗಾಣಬೇಕು.

ಇನ್ನು ಈಗಷ್ಟೇ ಮುಂಗಾರು ಮಳೆ ಇಡೀ ದೇಶಕ್ಕೆ ವ್ಯಾಪಿಸಿದೆ. ಇಂಥ ಸಂದರ್ಭದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಹಲವಾರು ಸಮಸ್ಯೆಗಳನ್ನು ರೈತರು ಎದುರಿಸುವುದುಂಟು. ಇದರ ಬಗ್ಗೆಯೂ ಸಂಸತ್‌ ನಲ್ಲಿ ಚರ್ಚೆಯಾಗಬೇಕು. ಹಾಗೆಯೇ ಕಳೆದ ನವೆಂಬರ್‌-ಡಿಸೆಂಬರ್‌ ನಿಂದಲೂ ರೈತರು ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿಕೊಂಡು ಬರುತ್ತಲೇ ಇದ್ದಾರೆ. ಇವರ ಬಳಿ ಚರ್ಚಿಸಿ, ಇದಕ್ಕೊಂದು ತಾರ್ಕಿಕ ಅಂತ್ಯ ನೀಡಲು ಕೇಂದ್ರ ಸರಕಾರ ಮುಂದಾಗಬೇಕು. ಏಕೆಂದರೆ ಈ ಅಧಿವೇಶನದ ವೇಳೆ, ದಿನವೂ ಸಂಸತ್‌ ಭವನದ ಬಳಿಗೆ ಬಂದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಇವರ ಸಮಸ್ಯೆಯನ್ನು ಕೇಳಿ ಅದನ್ನು ಬಗೆಹರಿಸಿದರೆ ಉತ್ತಮ.

Advertisement

ಇದರ ಜತೆಯೇ ದಿನದಿಂದ ದಿನಕ್ಕೆ ತೈಲೋತ್ಪನ್ನ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಅಗತ್ಯ ವಸ್ತುಗಳ ದರವೂ ಹೆಚ್ಚಾಗಿದೆ. ಈ ಸಂಬಂಧವೂ ವಿಪಕ್ಷಗಳು ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದರೆ ಉತ್ತಮ. ಏನೇ ಆಗಲಿ, ಸಂಸತ್‌ ಕಲಾಪ ಸುಖಾಸುಮ್ಮನೆ ವ್ಯರ್ಥವಾಯಿತು ಎಂದು ಕಡೆಗೆ ಅಂದುಕೊಳ್ಳುವುದು ಬೇಡ.

Advertisement

Udayavani is now on Telegram. Click here to join our channel and stay updated with the latest news.

Next