Advertisement

ಮಾಯವಾದವೋ ಕೆರೆಗಳು ಮಾಯವಾದವು !

02:13 AM Apr 21, 2021 | Team Udayavani |

ಪಟ್ಟಣ ಪಂಚಾಯತ್‌ನಲ್ಲಿ ಕೆರೆಗಳಿಗೂ ಬರವಿರಲಿಲ್ಲ ; ಕುಡಿಯುವ ನೀರಿಗೂ ಸಮಸ್ಯೆ ಇರಲಿಲ್ಲ. ಕೃಷಿ ಪ್ರಾಧಾನ್ಯ ಪ್ರದೇಶವಾದ ಗ್ರಾಮಗಳಲ್ಲಿ ನಿಧಾನವಾಗಿ ಕೆರೆಗಳು ಕರಗುತ್ತಾ ಬಂದವು. ಅದರೊಂದಿಗೇ ಕೃಷಿಗೂ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಬಂದಿತು. ಇದರ ಬೆನ್ನಿಗೇ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸತೊಡಗಿತು. ಈಗ ಸಮಸ್ಯೆಯ ತುತ್ತ ತುದಿಗೆ ಹೋಗಿಲ್ಲ ಎಂಬುದೊಂದೇ ಸಮಾಧಾನದ ಸಂಗತಿ. ಈಗಲಾದರೂ ಕೆರೆಗಳು ಅಭಿವೃದ್ಧಿಪಡಿಸಿ ಸಮೃದ್ಧ ಜಲಮೂಲವನ್ನಾಗಿ ಮಾರ್ಪಡಿಸಿಕೊಂಡರೆ ಅದು ಪಟ್ಟಣ ಪಂಚಾಯತ್‌ನ ಜಾಣ ನಡೆಯಾದೀತು.

Advertisement

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಇದ್ದ ಕೆರೆಗಳ ಪೈಕಿ ಅರ್ಧದಷ್ಟು ಕೆರೆಗಳು ಈಗ ಜೀರ್ಣಗೊಂಡಿವೆ. ಉಳಿದ ಅರ್ಧದಷ್ಟು ಕೆರೆಗಳನ್ನು ಉಳಿಸಿಕೊಳ್ಳಲು ಪಟ್ಟಣ ಪಂಚಾಯತ್‌ ಮತ್ತು ಜನರು ಇನ್ನಾದರೂ ಮುಂದಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನೀರಿನ ಕೊರತೆ ನಮ್ಮನ್ನು ಕಾಡದಿರದು.

ಉದಯವಾಣಿ ಕಲೆ ಹಾಕಿದ ಮಾಹಿತಿ ಪ್ರಕಾರ ಪ.ಪಂ. ವ್ಯಾಪ್ತಿಯಲ್ಲಿ ಸುಮಾರು 40-50 ವರ್ಷಗಳ ಹಿಂದೆ 16 ದೊಡ್ಡಕೆರೆ ಮತ್ತು 81 ಕಿರುಕೆರೆಗಳು ಸೇರಿದಂತೆ ಒಟ್ಟು 97 ಸರಕಾರಿ ಕೆರೆಗಳಿದ್ದವು. ಕಾರ್ಕಡ ಗ್ರಾಮದಲ್ಲಿ ದೇಸಿಕೆರೆ, ಮಟೆರೆ, ಬಳ್ಳಿಕೆರೆ, ಚೇಂಪಿನಕೆರೆ, ಹೆದ್ದಾರಿ ಕೆರೆ ಎನ್ನುವ ದೊಡ್ಡ ಕೆರೆಗಳು ಹಾಗೂ 25 ಕಿರು ಕೆರೆಗಳು ಸೇರಿದಂತೆ ಒಟ್ಟು 30 ಕೆರೆಗಳಿದ್ದವು. ಗುಂಡ್ಮಿ ಗ್ರಾಮದಲ್ಲಿ ಕಾನ್‌ಕೆರೆ, ಶಾಸ್ತ್ರಿಕೆರೆ, ಆಂತನಕೆರೆ, ತಗ್ಗಿನಬೈಲುಕೆರೆ, ಮಡಿವಾಳಬೆಟ್ಟು ಕೆರೆ, ಯಕ್ಷಿಮಠಕೆರೆ ದೊಡ್ಡಕೆರೆ ಮತ್ತು 24 ಚಿಕ್ಕ ಕೆರೆ ಸೇರಿದಂತೆ ಒಟ್ಟು 30 ಕೆರೆಗಳಿದ್ದವು. ಪಾರಂಪಳ್ಳಿ ಗ್ರಾಮದಲ್ಲಿ ವಿಷ್ಣುಮೂರ್ತಿ ಕೆರೆ, ದಾಸನಕೆರೆ, ಅಡಿಗರಕೆರೆ ಮತ್ತು 19 ಕಿರು ಕೆರೆ ಸೇರಿದಂತೆ 22 ಕೆರೆಗಳು ಅಸ್ತಿತ್ವದಲ್ಲಿದ್ದವು. ಚಿತ್ರಪಾಡಿ ಗ್ರಾಮದಲ್ಲಿ ಬೆಟ್ಲಕ್ಕಿ ಕೆರೆ ಮತ್ತು 14 ಕಿರುಕೆರೆಗಳೊಂದಿಗೆ ಒಟ್ಟು 15 ಕೆರೆಗಳಿದ್ದವು. ಒಟ್ಟು 97 ಕೆರೆಗಳಿದ್ದವು ಎಂದು ಕಂದಾಯ ಇಲಾಖೆಯ ದಾಖಲೆಯಲ್ಲಿದೆ.

ರೈತರು ಈ ಕೆರೆಗಳ ನೀರನ್ನು ಬಳಸಿಕೊಂಡು ವರ್ಷದಲ್ಲಿ 3 ಬಾರಿ ಭತ್ತ, ಶೇಂಗಾ ಮುಂತಾದ ಬೆಳೆ ಬೆಳೆಯುತ್ತಿದ್ದರು.

ಕೆರೆಗಳ ಸ್ವರೂಪ ಹಾಳಾಗದಿರಲಿ
ಕೆರೆಯ ಸುಂದರೀಕರಣ, ಆಧುನೀಕರಣ (ವಾಕಿಂಗ್‌ ಟ್ರ್ಯಾಕ್‌ ಇತ್ಯಾದಿ)ದ ಹೆಸರಿನಲ್ಲಿ ಒಟ್ಟೂ ಕೆರೆಗಳ ಅಸ್ತಿತ್ವಕ್ಕಾಗಲೀ ಅಥವಾ ಸುತ್ತಲಿನ ಹಸಿರಿನ ಅಸ್ತಿತ್ವಕ್ಕಾಗಲೀ (ಮರ-ಗಿಡ) ಚ್ಯುತಿ ಬಾರದಂತೆ ಸಂಬಂಧಪಟ್ಟ ಇಲಾಖೆಗಳು, ಪಟ್ಟಣ ಪಂಚಾಯತ್‌ ಗಮನಹರಿಸಬೇಕಿದೆ. ಕೆರೆ ಅಭಿವೃದ್ಧಿಪಡಿಸುವ ಗ್ರಾಮಸ್ಥ ರಿಗೂ, ಸಂಘ ಸಂಸ್ಥೆಗಳಿಗೂ ಹಸುರಿನ ಮಹತ್ವವನ್ನು ತಿಳಿಸಿ ಕೊಡಬೇಕಿದೆ. ಯಾಕೆಂದರೆ, ಈಗ ಕೆರೆಗಳ ಸುಂದರೀಕರಣ ಎಂದರೆ ಸುತ್ತಲಿನ ಬೃಹತ್‌ ಮರಗಳನ್ನು ಕಡಿದು, ಇಂಟರ್‌ಲಾಕ್‌ ಹಾಕುವುದು. ಇಂಥ ಕಾಂಕ್ರೀಟ್‌ ವನ ನಿರ್ಮಿಸುವ ಅಪಾಯವನ್ನು ತಡೆಯಬೇಕಿದೆ.

Advertisement

 ಕುಡಿಯುವ ನೀರಿಗೆ ಬಳಕೆ
ಪ.ಪಂ. ವ್ಯಾಪ್ತಿಯಲ್ಲಿ 417 ಮನೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜತೆಗೆ 8.9. ಎಂ.ಸಿ.ಎಫ್‌.ಟಿ. ನೀರಿನ ಬೇಡಿಕೆಯನ್ನು ಪ.ಪಂ.ನ 8 ಬಾವಿಗಳಿಂದ ಪೂರೈಸಲಾಗುತ್ತಿಲ್ಲ. ಹೀಗಾಗಿ ಕೆರೆಗಳ ಹೂಳೆತ್ತಿ ಅಭಿವೃದ್ಧಿ ಪಡಿಸಿದರೆ ಬಾವಿಯ ನೀರಿನ ಮಟ್ಟ ಮತ್ತು ಅಂತರ್ಜಲ ಮಟ್ಟ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ದೂರವಾಗಲಿದೆ ಹಾಗೂ ಖಾಸಗಿ ಬಾವಿಗಳಲ್ಲೂ ಜಲಮಟ್ಟ ಹೆಚ್ಚಾಗಲಿದೆ.

ಕಂದಾಯ ಇಲಾಖೆಯ ಮೂಲಕ ಸರಕಾರಿ ಕೆರೆಗಳ ಸರ್ವೆ ನಡೆಸಿ ಗುರುತಿಸಬೇಕಿದ್ದು, ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕಿದೆ. ಪ್ರಸ್ತುತ ಪಾರಂಪಳ್ಳಿ ವಿಷ್ಣುಮೂರ್ತಿ ದೇವಸ್ಥಾನ ಕೆರೆಯನ್ನು ಸ್ಥಳೀಯರು ಒಟ್ಟಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಇದೇ ಮಾದರಿಯ ಕೆಲಸ ಪ್ರತಿಯೊಂದು ಗ್ರಾಮದಲ್ಲೂ ಆಗಬೇಕಿದೆ ಮತ್ತು ಕೆರೆಗಳ ಅಭಿವೃದ್ಧಿ ಸರಕಾರ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾಕಷ್ಟು ಅವಕಾಶಗಳಿದೆ. ಗ್ರಾಮಸ್ಥರ ಸಭೆ ಕರೆದು, ಕೆರೆಗಳ ಉಳಿವಿನ ಬಗ್ಗೆ ಚರ್ಚಿಸಿ ಯೋಜನೆಗಳನ್ನು ಹಾಕಿಕೊಳ್ಳುವ ಇಚ್ಛಾಶಕ್ತಿಯನ್ನು ಆಡಳಿತ ವ್ಯವಸ್ಥೆ ತೋರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next