Advertisement

ಕೋಚಿಂಗ್‌ ಟರ್ಮಿನಲ್‌ಗೆ ವಿವಾದದ ಸೋಂಕು!

04:37 PM Oct 23, 2019 | Naveen |

ಮಾ.ವೆಂ.ಸ. ಪ್ರಸಾದ್‌
ಸಾಗರ:
ಸಾಗರ ತಾಲೂಕು ಅಭಿವೃದ್ಧಿ ವಿಚಾರದಲ್ಲಿ ಪದೇ ಪದೆ ವಿವಾದಕ್ಕೀಡಾಗುತ್ತಿದೆ. ಕಲ್ಲೊಡ್ಡು ಅಣೆಕಟ್ಟು ವಿಚಾರದ ಉದ್ವಿಗ್ನತೆ ಪರಿಹಾರವಾಯಿತು ಎನ್ನುವಷ್ಟರಲ್ಲಿ ಈ ಸರಪಳಿಗೆ ಹೊಸದಾಗಿ ಕೊಂಡಿ ಸೇರ್ಪಡೆಯಾಗಿದೆ. ಈ ಬಾರಿ ತಾಳಗುಪ್ಪದಲ್ಲಿ ನಿರ್ಮಾಣವಾಗುತ್ತಿದೆ ಎಂದು ಭಾವಿಸಲಾಗಿದ್ದ ರೈಲ್ವೆ ಕೋಚಿಂಗ್‌ ಟರ್ಮಿನಲ್‌ ಮತ್ತೆ ಶಿವಮೊಗ್ಗ ಸಮೀಪದ ಕೋಟೆಗಂಗೂರಿಗೆ ಸ್ಥಳಾಂತರಿಸುವ ನಿರ್ಧಾರವನ್ನು ರೈಲ್ವೆ ಇಲಾಖೆ ಮಾಡುತ್ತದೆ ಎಂಬ ವದಂತಿ ನಗರದಲ್ಲಿ ಆಕ್ರೋಶದ ಅಲೆಗಳನ್ನು ಎಬ್ಬಿಸಿದೆ.

Advertisement

ಕೈಗೆ ಬಂದ ತುತ್ತು?: ರೈಲ್ವೆ ಕೋಚಿಂಗ್‌ ಟರ್ಮಿನಲ್‌ ಆಗುವುದರಿಂದ ಈಗ ಶಿವಮೊಗ್ಗಕ್ಕೆ ಬರುತ್ತಿರುವ ಎಲ್ಲ ರೈಲುಗಳು ತಾಳಗುಪ್ಪದವರೆಗೆ ಬರುವಂತಾಗುತ್ತದೆ. ತಾಳಗುಪ್ಪದಂತ ಪ್ರದೇಶದಲ್ಲಿ ರೈಲ್ವೆ ಅಭಿವೃದ್ಧಿಯೆಂಬುದು ಪರೋಕ್ಷವಾಗಿ ಆ ಊರು ಬೆಳವಣಿಗೆಯನ್ನು ಕಾಣುವಂತಾಗುತ್ತದೆ. ಕೋಚಿಂಗ್‌ ಟರ್ಮಿನಲ್‌ ಆದರೆ 300ರಿಂದ 400 ಜನರಿಗೆ
ಉದ್ಯೋಗಾವಕಾಶ ಸಿಗುವ ಹಿನ್ನೆಲೆಯಲ್ಲಿ ತಾಳಗುಪ್ಪ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಉದ್ಯಮ, ವ್ಯಾಪಾರಕ್ಕೆ ಅವಕಾಶವಾಗುತ್ತದೆ. ಜೋಗ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಹಿನ್ನೆಲೆಯಲ್ಲಿ ತಾಳಗುಪ್ಪದವರೆಗೆ ರೈಲು ಸಂಚಾರ ಹೆಚ್ಚುವುದು ಅನುಕೂಲಕರ. ಈವರೆಗೆ ರೈಲನ್ನೇ ಕಾಣದ ಸಿರಸಿ, ಸಿದ್ಧಾಪುರಗಳಿಗೂ ಮುಂದಿನ ದಿನಗಳಲ್ಲಿ ತಾಳಗುಪ್ಪದಿಂದ ರೈಲು ಮಾರ್ಗ ನಿರ್ಮಾಣವಾಗುವುದಕ್ಕೂ ಈ ಬೆಳವಣಿಗೆ ಪೂರಕ ಎಂಬುದು ತಾಳಗುಪ್ಪದ ರೈಲ್ವೆ ಟರ್ಮಿನಲ್‌ ಪರವಾಗಿರುವವರ ವಾದ.

ಈಗಾಗಲೇ ಇದು ವಾತಾವರಣವನ್ನು ಬಿಸಿಗೊಳಿಸುತ್ತಿದೆ. ಸಾಗರಕ್ಕೆ ಬ್ರಾಡ್‌ಗೇಜ್‌ ತರುವಲ್ಲಿ ನಿರಂತರ ಶ್ರಮ ವಹಿಸಿದ ರೈಲ್ವೆ ಹೋರಾಟ ಸಮಿತಿ ಕೆಂಪು ಬಾವುಟ ತೋರಿಸಿದ್ದು, ನ. 4ರಂದು ಪ್ರತಿಭಟನೆಗೆ ಕರೆ ನೀಡಿದೆ. ಬುಧವಾರ ತಾಳಗುಪ್ಪದಲ್ಲಿ ಸರ್ಕಾರದಲ್ಲಿ ಆಡಳಿತದ ಪರ ಒಲವಿರುವ ವಿಶ್ವ ಹಿಂದೂ ಪರಿಷತ್‌ ಮತ್ತು ಭಜರಂಗ ದಳ ತಾಳಗುಪ್ಪದಲ್ಲಿ ಅಲ್ಲಿನ ವಿವಿಧ ಸಂಘಟನೆಗಳ ಜೊತೆಗೂಡಿ ಜಾಥಾ ನಡೆಸಲಿದೆ. ಆದರೆ ಟರ್ಮಿನಲ್‌ ಎಲ್ಲಿ ಎಂಬ ಬಗ್ಗೆ ಈಗಲೂ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುವ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಈ ವಿವಾದ ಕುಪಿತರನ್ನಾಗಿಸಿದೆ ಎಂದುಕೊಳ್ಳಬಹುದಾದ ವಿದ್ಯಮಾನಗಳು ಗಾಂಧಿ  ನೆನಪಿನ ಪಾದಯಾತ್ರೆಯ ಸಂದರ್ಭದಲ್ಲಿ ವ್ಯಕ್ತವಾಗಿದೆ.

ಪರ್ಯಾಯವಾಗಿ ತಾಳಗುಪ್ಪ ಆಯ್ಕೆ: ಸಾಗರದ ಬಳಕೆದಾರರ ವೇದಿಕೆ ದಾಖಲೆಗಳನ್ನು ಮುಂದಿಟ್ಟುಕೊಂಡು ಟರ್ಮಿನಲ್‌ ವಿವಾದದ ಕುರಿತಾಗಿ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದೆ. ರೈಲ್ವೆ ಇಲಾಖೆ ಶಿವಮೊಗ್ಗಕ್ಕೆ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಕೇವಲ ಏಳು ಕಿಮೀ ದೂರದಲ್ಲಿರುವ ಕೋಟೆಗಂಗೂರಿನಲ್ಲಿ ಕೋಚಿಂಗ್‌ ಟರ್ಮಿನಲ್‌ ನಿರ್ಮಾಣ ಕಾರ್ಯಸಾಧುವಲ್ಲ ಎಂಬ ಅಂಶ ಮನವರಿಕೆ ಆದ ನಂತರವೇ ತಾಳಗುಪ್ಪವನ್ನು ಯೋಜನೆಗೆ ಪರಿಗಣಿಸಿದೆ. ಇಲಾಖೆಯ ಉನ್ನತ ಅಧಿಕಾರಿಗಳು ಈ ವಿಚಾರವನ್ನು ಅಧಿಕೃತವಾಗಿ ಸ್ಪಷ್ಟಪಡಿಸಿದ್ದರೂ ವಿಷಯ ನೆನೆಗುದಿಗೆ ಬಿದ್ದಿರುವುದರ ಹಿಂದೆ ಜನಪರ ಕಾಳಜಿಗಿಂತ ರಾಜಕೀಯ ಆಸಕ್ತಿಗಳು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ರೈಲ್ವೆಯ ಉನ್ನತ ಅಧಿ ಕಾರಿಗಳಾದ ರಾಜೇಶ್‌ ಅಗರ್ವಾಲ್‌, ಅಜಯ್‌ಕುಮಾರ್‌ ಹಾಗೂ ಅಪರ್ಣಾ ಗಾರ್ಗ್‌ ಕಳೆದ ಆಗಸ್ಟ್‌ 25ರಂದು ತಾಳಗುಪ್ಪದಿಂದ ಅರಸೀಕೆರೆಯವರೆಗೆ ಸ್ಥಳ ಪರಿಶೀಲನೆ ನಡೆಸಿದ್ದಲ್ಲದೆ, ಸಂಸದ ಬಿ.ವೈ. ರಾಘವೇಂದ್ರ ಅವರ ಜೊತೆ ಚರ್ಚೆ ನಡೆಸಿದ ನಂತರ ಆ. 30ರಂದು ಸೌತ್‌ ವೆಸ್ಟರ್‌° ರೈಲ್ವೆ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ ಕೋಚಿಂಗ್‌ ಟರ್ಮಿನಲ್‌ ಕುರಿತು ಸ್ಪಷ್ಟಪಡಿಸಿರುವ ಅಂಶಗಳತ್ತ ಬಳಕೆದಾರರ ವೇದಿಕೆ ಗಮನ ಸೆಳೆದಿದೆ.

Advertisement

ಕೋಟೆಗಂಗೂರಿನ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಬಜೆಟ್‌ ಮೂಲಕ ರೈಲ್ವೆ ಬೋರ್ಡ್‌ 62 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಪಿಟ್‌ ಲೈನ್‌, ಸ್ಟಾಬ್ಲಿಂಗ್‌ ಲೈನ್‌ ಸೌಲಭ್ಯಗಳನ್ನು ಸ್ಥಾಪಿಸಲಾಗಿತ್ತು. ಶಿವಮೊಗ್ಗ ನಗರಕ್ಕೆ ಹೆಚ್ಚು ರೈಲುಗಳು ಬರುವಂತಾಗಲು ಕೋಟೆಗಂಗೂರಿಗೆ ಕೋಚಿಂಗ್‌ ಟರ್ಮಿನಲ್‌ ಕೂಡ ಮಂಜೂರಾಗಿತ್ತು ಎಂಬುದನ್ನು ಈ ಪ್ರಕಟಣೆ ಬಹಿರಂಗಪಡಿಸುತ್ತದೆ.

ರೈಲ್ವೆ ಅಧಿಕಾರಿಗಳು ಕೋಟೆಗಂಗೂರಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಸೀಮಿತ ಪ್ರಮಾಣದ ಭೂಮಿಯ ಲಭ್ಯತೆಯ ಕಾರಣ ಸುಸಜ್ಜಿತ ಕೋಚಿಂಗ್‌ ಟರ್ಮಿನಲ್‌ ಕಷ್ಟ ಎಂಬ ಹಿನ್ನೆಲೆಯಲ್ಲಿ ಪರ್ಯಾಯವಾಗಿ ತಾಳಗುಪ್ಪವನ್ನು ಕೂಡ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಇಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳಬೇಕಾದ ತೊಡಕಿನ ಹಾಗೂ ಸಮಯವನ್ನು ತಿನ್ನುವ ಕಷ್ಟ ಇಲ್ಲ.

ಹೀಗಾಗಿ ಅಗತ್ಯ ಪರವಾನಗಿಗಳ ಜೊತೆಗೆ ಸಕಾರಾತ್ಮಕ ಸಮಯದಲ್ಲಿಯೇ ಯೋಜನೆ ಪೂರ್ಣಗೊಳಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಹೇಳಲಾಗಿದೆ. ರೈಲ್ವೆ ಸಂಚಾರ ವ್ಯವಸ್ಥೆಯ ನಿರ್ವಹಣೆಯ ಜವಾಬ್ದಾರಿ ಹೊತ್ತ ರೈಲ್ವೆಯ ರೋಲಿಂಗ್‌ ಸ್ಟಾಕ್‌ ಸದಸ್ಯರಾದ ರಾಜೇಶ್‌ ಅಗರ್ವಾಲ್‌ ದಕ್ಷಿಣ ಪಶ್ಚಿಮ ರೈಲ್ವೆಗೆ ಸೂಚನೆ ನೀಡಿ, ತಾಳಗುಪ್ಪದಲ್ಲಿ ಟರ್ಮಿನಲ್‌ ಯೋಜನೆ ಜಾರಿಗೊಳಿಸಲು ಅಗತ್ಯವಾದ ವಿವರವಾದ ಯೋಜನಾ ವರದಿ ಡಿಪಿಆರ್‌ನ್ನು ತಯಾರಿಸಿ ರೈಲ್ವೆ ಸಚಿವಾಲಯದ ಮುಂದಿಡಬೇಕು ಎಂದು ಆದೇಶಿರುವುದನ್ನು ಕೂಡ ಸೌತ್‌ ವೆಸ್ಟರ್ನ್ ರೈಲ್ವೆ ಪ್ರಕಟಣೆ ಸ್ಪಷ್ಟಪಡಿಸಿದೆ.

ಲಾಭ ನಷ್ಟಗಳ ಲೆಕ್ಕಾಚಾರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಕೋಟೆಗಂಗೂರು ಹಾಗೂ ತಾಳಗುಪ್ಪ ಬರುತ್ತದೆ. ಈಗಾಗಲೇ ರೈಲ್ವೆ ಇಲಾಖೆ ಕೋಟೆಗಂಗೂರು ಸುಸಜ್ಜಿತ ಟರ್ಮಿನಲ್‌ ಸ್ಥಾಪನೆಗೆ ಸೂಕ್ತ ಅಲ್ಲ ಎಂದಿದ್ದರೂ ಆ ನಿಲ್ದಾಣವನ್ನೂ ಈಗಲೂ ಸ್ಪರ್ಧೆಯಲ್ಲಿ ಇಡಲು ಜನಪ್ರತಿನಿಧಿಗಳು ಆಸಕ್ತರಾಗಿರುವುದರ ಹಿಂದೆ ವಿಶೇಷ ಕಾರಣಗಳಿವೆ ಎಂಬ ವಾದವಿದೆ. ಕೋಟೆಗಂಗೂರಿನ ಸುತ್ತಮುತ್ತಲಿನ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ರಾಜಕೀಯ ಪ್ರಮುಖರು ಖರೀದಿಸಿರುವುದರಿಂದ ಕೋಟೆಗಂಗೂರಿನಲ್ಲಿಯೇ ಟರ್ಮಿನಲ್‌ ಆದರೆ ರಿಯಲ್‌ ಎಸ್ಟೇಟ್‌ ಉದ್ಯಮ ಹಲವು ಪಟ್ಟು ಬೆಳೆಯುವುದು ಅವರ ಗಮನ ಸೆಳೆದಿದೆ ಎಂದು ಪ್ರತಿಪಾದಿಸಲಾಗುತ್ತಿದೆ.

ಜನಪ್ರತಿನಿಧಿಯಾಗಿ, ಪ್ರತಿ ಸಂದರ್ಭದಲ್ಲಿ ಸಾಗರ ಸ್ಥಳೀಯ ಶಾಸಕರಾದ ಎಚ್‌.
ಹಾಲಪ್ಪ ಉಭಯಸಂಕಟಕ್ಕೀಡಾಗುವ ವಿಚಿತ್ರ ಸನ್ನಿವೇಶ ನಿರ್ಮಾಣವಾಗುತ್ತಿದೆ. ಕಲ್ಲೊಡ್ಡು ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕ್ಷೇತ್ರಕ್ಕೆ ನೀರಾವರಿ ಒದಗಿಸಲು ಸಾಗರ ಕ್ಷೇತ್ರದ ರೈತರು ಮುಳುಗಡೆಗೊಳಗಾಗುವ ಸನ್ನಿವೇಶವನ್ನು ನಿರ್ವಹಿಸುವುದು ಆಡಳಿತ ಪಕ್ಷದ ಹಿರಿಯ ಶಾಸಕರಾಗಿ ಹಾಲಪ್ಪನವರಿಗೆ ಸುಲಭದ್ದಾಗಿರಲಿಲ್ಲ. ಮುಖ್ಯಮಂತ್ರಿಗಳ ಆಪ್ತರಾದ ಹಿನ್ನೆಲೆಯಲ್ಲಿ ಅವರು ಇಡೀ ಪ್ರಕರಣವನ್ನು ಜಾಣ್ಮೆಯಿಂದ ನಿರ್ವಹಿಸಿ ಯೋಜನೆಯನ್ನು ಸಾಗರದಿಂದ ದಾಟಿಸಿ ಶಿಕಾರಿಪುರಕ್ಕೆ ಸಾಗಿಸಿದರು ಎಂಬ ಮೆಚ್ಚುಗೆ ವ್ಯಕ್ತವಾಗಿದೆ.

ಜೋಗದ ಭೂಗರ್ಭ ವಿದ್ಯುದಾಗಾರದ ಸರ್ಕಾರದ ಪ್ರಸ್ತಾಪ ಕೂಡ ಸಾಗರ ತಾಲೂಕಿನ ಕಾಡು, ಭೂ ಪ್ರದೇಶವನ್ನು ಕಬಳಿಸುವುದರಿಂದ ಕ್ಷೇತ್ರದಲ್ಲಿ ಮತ್ತೂಂದು ಸುತ್ತಿನ ಪ್ರತಿಭಟನೆ ಹೊತ್ತಿಕೊಳ್ಳುವ ಸಾಧ್ಯತೆಯಿದೆ. ಇದರ ನಡುವೆ ಅಭಿವೃದ್ಧಿಯನ್ನು ಪ್ರತಿಪಾದಿಸುವ ತಾಳಗುಪ್ಪ ರೈಲ್ವೆ ಟರ್ಮಿನಲ್‌ ಆಗಿದ್ದರೆ ಅವರು ನಿಟ್ಟುಸಿರು ಬಿಡಬಹುದಿತ್ತು. ವಾಸ್ತವವಾಗಿ ತಾಳಗುಪ್ಪ ಕುಮಾರ್‌ ಬಂಗಾರಪ್ಪ ಪ್ರತಿನಿಧಿಸುವ ಸೊರಬ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದಾದರೂ ಪ್ರತಿಭಟನೆಯ ಬಿಸಿಯನ್ನು ಹಾಲಪ್ಪ ಎದುರಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next