Advertisement

ಕೋಟಿ ಬಾಳುವ ಆಸ್ತಿ ಉಳಿಸಿಕೊಳ್ಳುವಲ್ಲಿ  ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ!

05:06 PM Sep 26, 2021 | Team Udayavani |

ಸಾಗರ: ನಗರಕ್ಕೆ ಅಂಟಿಕೊಂಡಂತೆ ಐತಿಹಾಸಿಕ ಇಕ್ಕೇರಿಗೆ ತೆರಳುವ ಮಾರ್ಗದಲ್ಲಿ ಪ್ರವಾಸೋದ್ಯಮ ಇಲಾಖೆಯ ಹತ್ತು ಕೋಟಿ ರೂ.ಗಳ ಮೌಲ್ಯದ ಎರಡು ಎಕರೆ ಜಾಗ ಒತ್ತುವರಿಯಾಗಿರುವುದು ಎಂಟು ವರ್ಷಗಳ ಹಿಂದೆಯೇ ಬಯಲಿಗೆ ಬಂದಿದ್ದು, ನ್ಯಾಯಾಲಯದ ಆದೇಶದ ಹೊರತಾಗಿಯೂ ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳುವಲ್ಲಿ ಮೀನಾಮೇಷ ಎಣಿಸುತ್ತಿರುವುದು ಹಲವು ಹತ್ತು ಸಂದೇಹಗಳಿಗೆ ಕಾರಣವಾಗಿದೆ.

Advertisement

ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಅರಳಿಕೊಪ್ಪ ಗ್ರಾಮದ ಸರ್ವೆ ನಂ. 88 ರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಖಾತೆಯಾದ ಎರಡು ಎಕರೆ ಜಾಗವಿದೆ. ಅವತ್ತಿನ ಎಡಜಿಗಳೇಮನೆ ಮಂಡಲ ಪಂಚಾಯ್ತಿಗೆ ಸೇರಿದ್ದ ಈ ಜಾಗವನ್ನು ಅಂದಿನ ಉಪಪ್ರಧಾನ ಚಿಪ್ಳಿ ಸುದರ್ಶನ್‌ರ ಆಸಕ್ತಿಯಿಂದ ಪ್ರವಾಸೋದ್ಯಮ ಇಲಾಖೆಗೆ ಮಂಜೂರಾಗಿತ್ತು. ಇಂತದೊಂದು ಅಮೂಲ್ಯ ಜಾಗ ತನ್ನ ವಶದಲ್ಲಿರುವುದು ಖುದ್ದು ಪ್ರವಾಸೋದ್ಯಮ ಇಲಾಖೆಯ ಅರಿವಿಗೇ ಬಂದಿಲ್ಲ. ಪ್ರವಾಸೋದ್ಯಮ ಇಲಾಖೆಯ ವಶದಲ್ಲಿಯೇ ಜಾಗವಿದ್ದಿದ್ದರೆ ಹೋಟೆಲ್, ಡಾರ್ಮೆಂಟರಿ ಮೊದಲಾದವುಗಳ ನಿರ್ಮಾಣ ಸಾಧ್ಯವಾಗುತ್ತಿದ್ದು. ಇಕ್ಕೇರಿ, ಸಿಗಂದೂರು, ವರದಹಳ್ಳಿ, ಜೋಗ, ಕೆಳದಿ ಮೊದಲಾದ  ಜಾಗಕ್ಕೆ ಭೇಟಿ ಕೊಡುವ ಪ್ರವಾಸಿಗರಿಗೆ ಅನುಕೂಲವಾಗುತ್ತಿತ್ತು.

ಪ್ರವಾಸೋದ್ಯಮ ಇಲಾಖೆಗೆ ಗಮನಕ್ಕೆ ಬರುವ ಮುನ್ನವೇ ಇಲಾಖೆಗೆ ಸೇರಿದ ಜಾಗದಲ್ಲಿ ಬಗರ್‌ಹುಕುಂ ಆಗಿ ಒಂದು ಕುಟುಂಬ ಇಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದೆ. ಇಲಾಖೆಯ ತೆರವು ನೋಟೀಸ್‌ನ ಹಿನ್ನೆಲೆಯಲ್ಲಿ ಬಗರ್‌ಹುಕುಂ ನಿವಾಸಿಗಳಿಂದ ನ್ಯಾಯಾಲಯದಲ್ಲಿ ಆಕ್ಷೇಪ ದಾಖಲಾಗಿತ್ತು. ೨೦೧೮ರಲ್ಲಿ

ನ್ಯಾಯಾಲಯ ತೀರ್ಪು ನೀಡಿದ್ದು, ಜಾಗದ ಮೇಲೆ ಪ್ರವಾಸೋದ್ಯಮ ಇಲಾಖೆಯ ಹಕ್ಕುದಾರಿಕೆಯನ್ನು ಎತ್ತಿಹಿಡಿದಿದೆ. ತೀರ್ಪಿನ ನಂತರ ಜಾಗವನ್ನು ಪ್ರವಾಸೋದ್ಯಮ ಇಲಾಖೆಯ ವಶಕ್ಕೆ ವಹಿಸಿಕೊಡಲು ತೆರುವು ಕಾರ‍್ಯ ಮಾತ್ರ ಕುಂಟುತ್ತ ಸಾಗಿದೆ. ಅಲ್ಲಿ ವಾಸಿಸುತ್ತಿರುವವರ ಭವ್ಯ ಮನೆ ನಿರ್ಮಾಣವಾಗಿದೆ, ಇಲಾಖೆ ತನ್ನ ಸುಪರ್ದಿಯ ಜಾಗ ಎಂದು ಹಾಕಿದ ಬೋರ್ಡ್ ಕೂಡ ಕಣ್ಮರೆಯಾಗಿ, ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ ಇಲಾಖೆಯ ಮನೋಭಾವವನ್ನು ಪ್ರಶ್ನಿಸುವಂತಾಗಿದೆ.

2004ರಲ್ಲಿ ಸಾಮಾಜಿಕ ಹೋರಾಟಗಾರರು ಮಾಹಿತಿ ಹಕ್ಕಿನಲ್ಲಿ ದಾಖಲೆಗಳನ್ನು ಪಡೆದಾಗ ಜಾಗದ ವಾಸ್ತವ ಬೆಳಕಿಗೆ ಬಂದಿತ್ತು. ಪ್ರವಾಸೋದ್ಯಮ ಇಲಾಖೆಯ ಅಂದಿನ ಸಹಾಯಕ ನಿರ್ದೇಶಕ ನಾಗರಾಜ ಜಾವಳಿ, ಕರ್ನಾಟಕ ಭೂಸೇನಾ ನಿಗಮದ ಇಂಜಿನಿಯರ್ ಉಮೇಶ ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ್ದರು. ತಹಶೀಲ್ದಾರರು ತಕ್ಷಣ ಜಾಗ ಒತ್ತುವರಿಯ ತೆರವಿನ ಕುರಿತು ಖಡಕ್ ಮಾತನಾಡಿದ್ದರು.

Advertisement

ಸದರಿ ಜಾಗದ ರಕ್ಷಣೆಗಾಗಿ ಪ್ರವಾಸೋದ್ಯಮ ಇಲಾಖೆ 5 ಲಕ್ಷ ರೂ. ವೆಚ್ಚದಲ್ಲಿ ಕಲ್ಲುಕಂಬ ಹಾಗೂ ಮುಳ್ಳುತಂತಿಗಳನ್ನು ಬಳಸಿ ಸುಭದ್ರ ಬೇಲಿಯನ್ನು ಕರ್ನಾಟಕ ಭೂಸೇನಾ ನಿಗಮ ಮೂಲಕ ಮಾಡಿಸಿತ್ತು. ಆದರೆ ಕಾಣದ ಕೈಗಳ ಕಾರಣ ವಿವಾದಿತ ಜಾಗದಲ್ಲಿದ್ದ ಮನೆಯವರ ಸಂಚಾರಕ್ಕೆ ಅನುಕೂಲವಾಗುವಂತೆ ಸ್ಥಳಾವಕಾಶ ಕಲ್ಪಿಸಿ ಸರ್ಕಾರದ ಹಣದಲ್ಲಿ ಒತ್ತುವರಿದಾರರಿಗೆ ಸುಭದ್ರ ಬೇಲಿ ಮಾಡಿಕೊಟ್ಟಂತಾಗಿದ್ದುದು ತೀವ್ರ ಟೀಕೆಗೆ ಒಳಗಾಗಿತ್ತು.

ಎಂಟು ವರ್ಷಗಳ ನಂತರವೂ ಇಲಾಖೆಯ ಧ್ವನಿ ಬದಲಾಗಿಲ್ಲ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ, “ಇಲಾಖೆಗೆ ಸೇರಿದ್ದ ಜಾಗ ಒತ್ತುವರಿಯಾದ ಕಾರಣ ಬೇಲಿ ಹಾಕಿ ರಕ್ಷಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಇಲಾಖೆ ಪರವಾಗಿ ಆದೇಶವಾಗಿದೆ. ಆದೇಶ ಪ್ರತಿ ದೊರಕಿದ ತಕ್ಷಣ ಇಲಾಖೆಯ ಜಾಗವನ್ನು ತೆರವುಗೊಳಿಸುವ ಕ್ರಮ ತೆಗೆದುಕೊಳ್ಳಲಾಗಿವುದು ಎನ್ನುತ್ತಾರೆ. ನ್ಯಾಯಾಲಯದ ತೀರ್ಪು ಲಭಿಸಿ ಮೂರು ವರ್ಷಗಳೇ ಸಂದಿವೆ!

ಪ್ರವಾಸೋದ್ಯಮ ಇಲಾಖೆಗೆ ಕಾದಿರಿಸಿದ್ದ ಜಾಗ ಒತ್ತುವರಿ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಒತ್ತುವರಿ ತೆರವು ಸಂಬಂಧ ನ್ಯಾಯಾಲಯ ಆದೇಶ ನೀಡಿದ್ದು, ಇಲಾಖೆ ತೆರವು ಕಾರ‍್ಯ ನಡೆಸಿದಾಗ, ಕಂದಾಯ ಇಲಾಖೆಯ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಹಶೀಲ್ದಾರ್ ಕಚೇರಿಯ ಪರಮೇಶ್ವರ್ ಭರವಸೆ ನೀಡುತ್ತಾರೆ. ಪತ್ರಿಕೆ ಮೂರು ವರ್ಷಗಳ ಕೆಳಗೆ ಮಾತನಾಡಿಸಿದಾಗಲೂ ಅವರಿಂದ ಇದೇ ಭರವಸೆಯೇ ಪ್ರಸ್ತಾಪವಾಗಿತ್ತು.

ತನ್ನದೇ ಇಲಾಖೆಯ ಜಾಗವನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಇಲಾಖೆಯ ಅಧಿಕಾರಿಗಳಿಗೆ ಕಿಂಚಿತ್ತೂ ಆಸಕ್ತಿಯೂ ಇಲ್ಲ. ಅವರದೇ ಜಾಗದ ಅತಿಕ್ರಮಣವಾಗಿರುವ ಕುರಿತು ನಾವೇ ಮಾಹಿತಿ ನೀಡಿ, ವ್ಯಾಜ್ಯ ನ್ಯಾಯಾಲಯದಲ್ಲಿ ಪ್ರವಾಸೋದ್ಯಮ ಇಲಾಖೆ ಪರವಾಗಿ ಇತ್ಯರ್ಥವಾಗಿದ್ದರೂ ಒತ್ತುವರಿಯನ್ನು ಖುಲ್ಲಾ ಮಾಡಿಸುವಲ್ಲಿ ಇಲಾಖೆ ಅನಗತ್ಯವಾಗಿ ವಿಳಂಬ ಮಾಡುತ್ತಲೇ ಇದೆ. ಈ ಬಗ್ಗೆ ಕೇಳಿದರೆ ಎಸಿಗೆ ಬರೆದಿದ್ದೇವೆ, ಡಿಸಿಗೆ ಬರೆದಿದ್ದೇವೆ ಎಂಬ ಸಬೂಬು ಮಾತ್ರ ಇಲಾಖೆಯ ಅಧಿಕಾರಿಗಳಿಂದ ಕೇಳಿಬರುತ್ತಿದೆ.

ಜಯಪ್ರಕಾಶ್ ಗೋಳಿಕೊಪ್ಪ, ಪರಿಸರ ಕಾರ್ಯಕರ್ತ

ಮಾ.ವೆಂ.ಸ.ಪ್ರಸಾದ್

 

Advertisement

Udayavani is now on Telegram. Click here to join our channel and stay updated with the latest news.

Next