Advertisement

ಮೃಗಾಲಯಗಳಲ್ಲಿ ಸುರಕ್ಷತೆ ಕೈಗೊಳ್ಳಲಾಗಿದೆ: ಸರ್ಕಾರ

10:17 AM Apr 10, 2020 | Suhan S |

ಬೆಂಗಳೂರು: ಬನ್ನೇರುಘಟ್ಟ ಜೈವಿಕ ರಾಷ್ಟ್ರೀಯ ಉದ್ಯಾನವನ ಹಾಗೂ ಮೈಸೂರು ಮೃಗಾಲಯ ಸೇರಿ ರಾಜ್ಯದ 9 ಮೃಗಾಲಯ ಹಾಗೂ ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಒಟ್ಟು 5,247 ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೋವಿಡ್‌-19 ವೈರಸ್‌ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು ಗುರುವಾರ ಲಿಖೀತ ಹೇಳಿಕೆ ಸಲ್ಲಿಸಿ ಈ ಮಾಹಿತಿ ನೀಡಿದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಎಲ್ಲಾ 9 ಮೃಗಾಲಯ ಹಾಗೂ ಪ್ರಾಣಿ ಸಂಗ್ರಹಾಲಯಗಳಲ್ಲಿ ಮಾ.15ರಿಂದ ಏ.14ರವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಈ ಮೃಗಾಲಯಗಳಲ್ಲಿ 2,825 ಸಸ್ತನಿಗಳು, 1,703 ಪಕ್ಷಿಗಳು ಮತ್ತು 717 ಸರೀಸೃಪಗಳು ಸೇರಿದಂತೆ ಒಟ್ಟು 5,247 ವನ್ಯಜೀವಿಗಳಿವೆ. ಇದಲ್ಲದೇ, 51 ಹುಲಿ, 33 ಸಿಂಹ, 96 ಚಿರತೆ, 15 ಕಾಡುಬೆಕ್ಕು ಸೇರಿದಂತೆ 308 ಅಪರೂಪದ ಪ್ರಾಣಿಗಳಿವೆ. ಅವುಗಳ ರಕ್ಷಣೆಗೆ ಮತ್ತು ಕೋವಿಡ್‌-19 ಸೋಂಕು ಹರಡದಂತೆ ಎಲ್ಲಾ ಜೈವಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನೂ ಆನೆ ಶಿಬಿರಗಳಲ್ಲಿ ಮಾವುತರು ಹಾಗೂ ಕಾವಾಡಿಗರ ಮೂಲಕ ಆನೆಗಳಿಗೆ ಕೋವಿಡ್‌-19 ಸೋಂಕು ತಗುಲದಂತೆ ಕ್ರಮ ಜರುಗಿಸಲಾಗಿದೆ. ಮೃಗಾಲಯದಲ್ಲಿ ಪ್ರಾಣಿಗಳ ವಾಸಸ್ಥಾನ ಸ್ವಚ್ಛಗೊಳಿಸಿ, ಸ್ಯಾನಿಟೈಸ್‌ ಮಾಡಲಾಗುತ್ತಿದೆ, ರೋಗನಿರೋಧಕ ಔಷಧಿ ಕೊಡಲಾಗುತ್ತಿದೆ. ಪ್ರವೇಶದ್ವಾರದಲ್ಲಿ ರೋಗಾಣು ನಿರೋಧಕ ದ್ರಾವಣ ಪ್ರತಿದಿನ ಸಿಂಪಡಿಸಲಾಗುತ್ತಿದೆ. ಮೃಗಾಲಯ ಸಿಬ್ಬಂದಿಗೆ ಕೋವಿಡ್‌-19 ಸೂಕ್ತ ಜಾಗೃತಿ ಮೂಡಿಸಲಾಗುತ್ತಿದೆ. ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್‌ ನೀಡಲಾಗಿದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next