Advertisement

ಹೊಸಬರ ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರ ನ.25ಕ್ಕೆ ರಿಲೀಸ್

03:32 PM Nov 15, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸಿರುವ “ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಇದೇ ನವೆಂಬರ್‌ 25ಕ್ಕೆ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿದೆ.

Advertisement

ನೈಜ ಘಟನೆ ಆಧರಿಸಿದ ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾಕ್ಕೆ ಭಾಸ್ಕರ್‌ ಆರ್‌. ನೀನಾಸಂ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಾಕೇಶ್‌ ಮಯ್ಯ, ಪಾವನ ಗೌಡ ನಾಯಕ -ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ಮಧುನಂದನ್‌, ಅಚ್ಯುತ್‌ ಕುಮಾರ್‌, ರಾಘು ಶಿವಮೊಗ್ಗ, ಜಹಂಗೀರ್‌, ಕೃಷ್ಣ ಹೆಬ್ಟಾಳೆ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿದ ನಟ ಅಚ್ಯುತ್‌ ಕುಮಾರ್‌, “ಭಾಸ್ಕರ್‌ ನಟನೆ ಮಾಡ್ತಾನೆ ಅಂತ ಗೊತ್ತಿತ್ತು. ನನ್ನ ಅನೇಕ ನಾಟಕಗಳಲ್ಲಿ ಭಾಸ್ಕರ್‌ ಅಭಿನಯಿಸಿದ್ದಾನೆ. ಆದರೆ ನಿರ್ದೇಶನ ಮಾಡುತ್ತಾನೆ ಅಂತ ಗೊತ್ತಿರಲಿಲ್ಲ. ಈ ಸಿನಿಮಾವನ್ನು ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾನೆ. ಸಿನಿಮಾದಲ್ಲಿ ನನ್ನದು ಇನ್ಸ್‌ಪೆಕ್ಟರ್‌ ಪಾತ್ರ ಅಂದಾಗ ಮೊದಲು ನಾನು ಮಾಡೋದಿಲ್ಲ. ಅದರ ಬದಲು ಸಿನಿಮಾದಲ್ಲಿರುವ ಕೋಳಿ ಕಳ್ಳನ ಪಾತ್ರ ಕೊಡು, ತುಂಬಾ ಇಂಟ್ರಸ್ಟಿಂಗ್‌ ಆಗಿದೆ ಅಂದೆ. ಆದ್ರೆ ಕೊನೆಗೆ ಇನ್ಸ್‌ಪೆಕ್ಟರ್‌ ಪಾತ್ರವನ್ನು ನೀವೇ ಮಾಡಬೇಕು ಅಂತ ಹೇಳಿದ್ದರಿಂದ, ಈ ಪಾತ್ರ ಮಾಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದ್ದು, ಸಾಕಷ್ಟು ಕುತೂಹಲ ಮೂಡಿಸುವ ಅಂಶಗಳಿವೆ’ ಎಂದರು.

ನಟರಾದ ಮಧುನಂದನ್‌, ರಾಕೇಶ್‌ ಮಯ್ಯ, ನಾಯಕಿ ಪಾವನಾ ಗೌಡ ಮೊದಲಾದವರು ಸಿನಿಮಾದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. “ಎಂ.ಎಂ.ಸಿನಿಮಾಸ್‌’ ಬ್ಯಾನರ್‌ನಡಿ ಸುರಭಿ ಲಕ್ಷ್ಮಣ್‌ ನಿರ್ಮಿಸಿರುವ “ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾಕ್ಕೆ ರಾಜ್‌ ಕಾಂತ ಛಾಯಾಗ್ರಹಣ, ಶಶಿಧರ್‌ ಪಿ. ಸಂಕಲನವಿದೆ. ಚಿತ್ರದ ಹಾಡುಗಳಿಗೆ ಸಚಿನ್‌ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

ಒಟ್ಟಾರೆ ಟ್ರೇಲರ್‌ನಲ್ಲಿ ಒಂದಷ್ಟು ಕುತೂಹಲ ಮೂಡಿಸಲು ಯಶಸ್ವಿಯಾಗಿರುವ “ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಥಿಯೇಟರ್‌ ನಲ್ಲಿ ಎಷ್ಟರ ಮಟ್ಟಿಗೆ ಸಿನಿಪ್ರಿಯರ ಗಮನ ಸೆಳೆಯಲಿದೆ ಅನ್ನೋದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next