Advertisement

ಕೇರಳದಲ್ಲಿ ಯುಡಿಎಫ್‌ ಕೈಹಿಡಿದ ಶಬರಿಮಲೆ ವಿವಾದ, ರಾಹುಲ್‌ ಸ್ಪರ್ಧೆ

12:06 AM May 24, 2019 | sudhir |

ಕಾಸರಗೋಡು: ಕದನ ಕುತೂಹಲಕ್ಕೆ ಕಾರಣವಾಗಿದ್ದ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಗುರುವಾರ ಬೆಳಗ್ಗೆ ಆರಂಭಗೊಂಡಿದ್ದು, ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾಂಞಂಗಾಡ್‌ ಸಮೀಪದ ಪಡನ್ನಕ್ಕಾಡ್‌ ನೆಹರೂ ಆರ್ಟ್ಸ್ ಆ್ಯಂಡ್‌ ಸಯನ್ಸ್‌ ಕಾಲೇಜಿನಲ್ಲಿ ಬಿಗು ಪೊಲೀಸ್‌ ಬಂದೋಬಸ್ತಿನಲ್ಲಿ ನಡೆಯಿತು.

Advertisement

ಕೇರಳದಲ್ಲಿ ಎಲ್‌ಡಿಎಫ್‌ ಸರಕಾರ ವಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಮತದಾರರು ಎಡರಂಗವನ್ನು ತಿರಸ್ಕರಿಸಿ ಯುಡಿಎಫ್‌ ಅಭ್ಯರ್ಥಿಗÙ ‌ ಕೈಹಿಡಿದಿದ್ದಾರೆ. ಕೇರಳದಲ್ಲಿ ಯುಡಿಎಫ್‌ ಅಲೆ ಎಂದರೂ ತಪ್ಪಾಗಲಾರದು. ದೇಶದಾದ್ಯಂತ ಮೋದಿ ಅಲೆ ಇದ್ದರೆ ಕೇರಳದಲ್ಲಿ ಮಾತ್ರ ರಾಹುಲ್‌ ಅಲೆ ಕಾಣಿಸಿಕೊಂಡಿದೆ.

ಬಹುತೇಕ ಚುನಾವಣೋತ್ತರ ಸಮೀಕ್ಷೆ ಗಳಲ್ಲೂ ಯುಡಿಎಫ್‌ ಬಹಳಷ್ಟು ಮುನ್ನಡೆ ಯನ್ನು ಸಾಧಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಈ ಭವಿಷ್ಯ ಸತ್ಯವಾಗಿದೆ. ಎಲ್‌ಡಿಎಫ್‌ ನೆಲಕಚ್ಚಲಿದೆ ಎಂದೇ ಬಹುತೇಕ ಸಮೀಕ್ಷೆಗಳಲ್ಲಿ ಬಹಿರಂಗಗೊಳಿಸಲಾಗಿತ್ತು. ಅದರಂತೆಯೇ ಮತ ಎಣಿಕೆಯ ಪ್ರತಿ ಕ್ಷಣದಲ್ಲೂ ಅದನ್ನೇ ರುಜು ಮಾಡುವಂತಿತ್ತು.

ಕಾಂಗ್ರೆಸ್‌ ಅಲೆ ಸೃಷ್ಟಿ
ಎಡರಂಗದ ಹೀನಾಯ ಸೋಲಿಗೆ ಶಬರಿಮಲೆ ವಿವಾದ ಪ್ರಮುಖ ಕಾರಣವಾಗಿದ್ದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೇರಳದ ವಯನಾಡಿನಲ್ಲಿ ಕೇರಳಾದ್ಯಂತ ಕಾಂಗ್ರೆಸ್‌ ಅಲೆ ಸೃಷ್ಟಿಗೆ ಕಾರಣವಾಯಿತು. ಅದರ ಸ್ಪಷ್ಟ ಸೂಚನೆಯೂ ಚುನಾವಣಾ ಫಲಿತಾಂಶದಲ್ಲಿ ಗೋಚರಿಸಿದೆ.

ಎಡರಂಗ ಹೀನಾಯ ಸೋಲು
ಪಿಣರಾಯಿ ಸರಕಾರದ ಹಿಂದೂ ವಿರೋಧಿ ನೀತಿಗಳು, ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್‌ ತೀರ್ಪು ಬಗ್ಗೆ ತೆಗೆದುಕೊಂಡ ನಿಲುವು ಮೊದಲಾದವು ಎಡರಂಗದ ಹೀನಾಯ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿತು ಎಂಬುದಾಗಿ ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತಾಗಿ ಕೇರಳ ಸರಕಾರ ತೆಗೆದುಕೊಂಡ ನಿಲುವು ಎಡರಂಗವನ್ನು ಕೈಹಿಡಿಯುವ ಬದಲಾಗಿ ತಿರುಗೇಟು ಉಂಟಾಯಿತು. ಶಬರಿಮಲೆಯ ಮುನಿಸು ಎಡರಂಗಕ್ಕೆ ತಟ್ಟಿದೆ ಎಂಬ ಅಭಿಪ್ರಾಯಗಳೂ ಕೇಳಲಾರಂಭಿಸಿವೆ.

ಶಬರಿಮಲೆ ವಿವಾದ: ಎನ್‌ಡಿಎಗೆ ಲಾಭವಿಲ್ಲ
ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿರುದ್ಧವಾಗಿ ನಡೆದ ಹೋರಾಟದಿಂದ ಎನ್‌ಡಿಎಗೆ ಲಾಭ ತಂದುಕೊಡಲಿದೆ ಎಂದು ನಿರೀಕ್ಷಿಸಲಾಗಿದ್ದರೂ, ನಿರೀಕ್ಷೆಯಂತೆ ಎನ್‌ಡಿಎಗೆ ಯಾವುದೇ ಲಾಭ ತಂದಿಲ್ಲ.

ಬದಲಾಗಿ ಶಬರಿಮಲೆ ವಿವಾದ ಯುಡಿಎಫ್‌ನ ಕೈಹಿಡಿದಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಎಡರಂಗದ ಘಟಾನುಘಟಿಗಳೆಲ್ಲ ಪರಾಭವವನ್ನು ಅನುಭವಿಸಿದ್ದಾರೆ.

ಪ್ರಾರಂಭದಿಂದಲೇ ಐಕ್ಯರಂಗ ಮುನ್ನಡೆ
ಮತ ಎಣಿಕೆಯ ಆರಂಭದಿಂದಲೇ ಐಕ್ಯರಂಗ ಬಹುತೇಕ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸುತ್ತಲೇ ಮುಂದೆ ಸಾಗಿತ್ತು.

ಮೋದಿ ಮೋಡಿ: ಬಿಜೆಪಿ ಕಾರ್ಯಕರ್ತರ ಸಂಭ್ರಮ
ದೇಶದಾದ್ಯಂತ ಮೋದಿ ಅಲೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ ಅಂಗವಾಗಿ ಕಾಸರಗೋಡು ಜಿಲ್ಲೆಯ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು. ಕಾಸರಗೋಡಿನ ಬಿಜೆಪಿ ಕೇಂದ್ರಗಳಲೆಲ್ಲಾ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next