Advertisement

ದೇಶದ ಅಭಿವೃದ್ಧಿಗೆ ಗ್ರಾಮೀಣ ಭಾಗವನ್ನು ಗ್ಲ್ಯಾಮರ್‌ ಆಗಿಸಬೇಕು: ನಬಾರ್ಡ್‌ ಮುಖ್ಯಸ್ಥ

08:04 PM Jan 16, 2023 | Team Udayavani |

ಮಣಿಪಾಲ: ಗ್ರಾಮೀಣ ಪ್ರದೇಶ ಬಹುತೇಕರಿಗೆ ಗ್ಲ್ಯಾಮರ್‌ ಆಗಿರುವುದಿಲ್ಲ. ಆದರೆ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮೀಣ ಭಾಗವನ್ನು ಗ್ಲ್ಯಾಮರ್‌ ಆಗಿ ಪರಿವರ್ತಿಸಬೇಕು ಮತ್ತು ಈ ನಿಟ್ಟಿನಲ್ಲಿ ಯುವ ಜನತೆ ಹೊಸ ಅನ್ವೇಷಣೆ ಮಾಡಬೇಕು ಎಂದು ನ್ಯಾಷನಲ್‌ ಬ್ಯಾಂಕ್‌ ಫಾರ್‌ ಅಗ್ರಿಕ್ಚರಲ್‌ ಆ್ಯಂಡ್‌ ರೂರಲ್‌ ಡೆವಲಪ್‌ಮೆಂಟ್‌(ನಬಾರ್ಡ್‌)ನ ಮುಖ್ಯಸ್ಥ ಶಾಜಿ ಕೆ.ವಿ. ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಸೋಮವಾರ ಮಣಿಪಾಲದ ವ್ಯಾಲಿವ್ಯೂ ಹೊಟೇಲ್‌ನಲ್ಲಿ ನಡೆದ ಟಿ.ಎ.ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟ್ಯಾಪ್ಮಿ)ನ ಸಂಸ್ಥಾಪಕರ ದಿನ ಹಾಗೂ 40ನೇ ಟಿ.ಎ. ಪೈ. ಸಂಸ್ಮರಣೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ನೀಡಿದರು.

ಮೂಲ ಸೌಕರ್ಯ ಸಹಿತವಾಗಿ ಹಲವು ವಲಯಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ನಡುವೆ ಅಭಿವೃದ್ಧಿಯ ಅಂತರ ಹೆಚ್ಚಿದೆ. ಈ ಅಂತರ ನಿವಾರಿಸಿ, ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಬಾರ್ಡ್‌ ಕಾರ್ಯನಿರ್ವಹಿಸುತ್ತಿದೆ.

ಸರಕಾರಗಳಿಗೂ ಗ್ರಾಮೀಣಾಭಿವೃದ್ಧಿ ಅಗತ್ಯತೆಗಳು ಮನವರಿಕೆಯಾಗಿವೆ. ಹೀಗಾಗಿ ಮುಂದಿನ ಬಜೆಟ್‌ನಲ್ಲೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು.

ಕೊರೊನಾ ಅನಂತರದಲ್ಲಿ ಗ್ರಾಮೀಣ ಭಾಗಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ ಮತ್ತು ಅನೇಕರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಹಾರ ಭದ್ರತೆ ವಿಷಯದಲ್ಲಿ ವಿಶ್ವವೇ ಭಾರತದ ಕಡೆ ನೋಡುತ್ತಿದೆ. ಈ ನಿಟ್ಟಿನಲ್ಲಿ ಭಾರತವೂ ಸಜ್ಜಾಗಬೇಕಿದೆ. ಗ್ರಾಮೀಣಾಭಿವೃದ್ಧಿಯ ಜತೆ ಜತೆಗೆ ಸಿರಿಧಾನ್ಯಗಳಿಗೆ ಆದ್ಯತೆ ನೀಡುವ ಮೂಲಕ ಆಹಾರ ಭದ್ರತೆಗೆ ಇನ್ನಷ್ಟು ಕೊಡುಗೆ ನೀಡಲು ಸಾಧ್ಯವಿದೆ. ಕೇಂದ್ರ ಸರಕಾರವು ಈ ವರ್ಷವನ್ನು ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಿದೆ ಎಂದರು.

Advertisement

ಪರಿವರ್ತನೆ ಅಗತ್ಯ
ಗ್ರಾಮೀಣ ಭಾಗದಲ್ಲಿ ಕೃಷಿ, ಕೃಷಿಯಂತ್ರೋಪಕರಣ, ಕೃಷಿ ಉತ್ಪನ್ನ ಸಹಿತವಾಗಿ ಎಲ್ಲ ರೀತಿಯಲ್ಲೂ ಡಿಜಿಟಲೈಜೇಶನ್‌ ಆಗಬೇಕು ಮತ್ತು ತಂತ್ರಜ್ಞಾನವು ಸುಲಭದಲ್ಲಿ ದೊರೆಯುವಂತೆ ಆಗಬೇಕು. ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಗೆ ಅನುಕೂಲವಾದ ಆರ್ಥಿಕ ಸ್ವಾವಲಂಬಿಕ ಕಾರ್ಯಕ್ರಮಗಳು ಬರಬೇಕು. ಸಮುದಾಯಗಳ ಸಬಲೀಕರಣ, ಮೂಲ ಸೌಕರ್ಯಗಳ ಅಭಿವೃದ್ಧಿಯ ಜತೆಗೆ ಹೂಡಿಕೆದಾರರು ಹೆಚ್ಚೆಚ್ಚು ಗ್ರಾಮೀಣ ಪ್ರದೇಶದ ಕಡೆಗೆ ಮುಖಮಾಡಬೇಕು. ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಸ್ಟಾರ್ಟ್‌ಅಪ್‌ಗಳ ಹುಟ್ಟಿಕೊಳ್ಳಬೇಕು ಎಂದು ಹೇಳಿದರು.

ಜಿಡಿಪಿಗೆ ಹೆಚ್ಚಿನ ಕೊಡುಗೆ
2019-20ರಲ್ಲಿ ಗ್ರಾಮೀಣ ಆರ್ಥಿಕತೆಯು ದೇಶದ ಜಿಡಿಪಿಗೆ ಶೇ.40ರಷ್ಟು ಕೊಡುಗೆ ನೀಡಿದೆ. ಗ್ರಾಮೀಣ ಭಾಗದಲ್ಲೂ ನಗರೀಕರಣವಾಗುತ್ತಿದೆ. ಇದು ದೇಶದ ಅಭಿವೃದ್ಧಿಗೂ ಪೂರಕವಾಗಲಿದೆ ಮತ್ತು ಇದರಿಂದಲೇ ಜಿಡಿಪಿಗೆ ಶೇ. 35ರಷ್ಟು ಕೊಡುಗೆ ಮುಂದಿನ ದಿನಗಳಲ್ಲಿ ಸಿಗುವ ಸಾಧ್ಯತೆಯಿದೆ. 2047ರ ವೇಳೆಗೆ ಕೃಷಿ ವಲಯದಿಂದ 139 ಲಕ್ಷ ಕೋ.ರೂ. ಜಿಡಿಪಿಗೆ ಕೊಡುಗೆ ಸಿಗುವ ಸಾಧ್ಯತೆಯಿದೆ. ಕೃಷಿ, ಕೈಗಾರಿಕೆ ಹಾಗೂ ಸೇವಾವಲಯದಿಂದ 2000 ಲಕ್ಷ ಕೋ.ರೂ.ಗಳಷ್ಟು ಕೊಡುಗೆ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು.

ಸವಾಲು ಮತ್ತು ಪರಿಹಾರ
ಗ್ರಾಮೀಣ ಭಾಗದಲ್ಲಿ ಜಮೀನಿನ ಸಮಸ್ಯೆ, ಮಳೆ ಆಧಾರಿತ ಕೃಷಿ, ಬೆಳೆ ವೈವಿಧ್ಯತೆಯಲ್ಲಿನ ಕೊರತೆ, ಕೊಯ್ಲಿಗೆ ಬೇಕಾದ ಮೂಲಸೌಕರ್ಯ ಸಿಗದೇ ಇರುವುದು, ತಂತ್ರಜ್ಞಾನದ ಅನುಷ್ಠಾನ ಆಗದೇ ಇರುವುದು, ಆಹಾರ ಸಂಸ್ಕರಣೆ ಘಟಕಗಳು ನಿರೀಕ್ಷಿತ ಪ್ರಮಾಣದಲ್ಲಿ ಸ್ಥಾಪನೆಯಾಗದೆ ಇರುವುದು ಹಾಗೂ ಕೃಷಿ ತ್ಯಾಜ್ಯ ನಿರ್ವಹಣೆ ಸೂಕ್ತವಾಗಿ ಆಗದೆ ಇರುವುದು ಸೇರಿದಂತೆ ಹಲವು ಸವಾಲು ಪ್ರಸ್ತುತ ಗ್ರಾಮೀಣ ಭಾಗದಲ್ಲಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೂಲ ಕೃಷಿ ಪದ್ಧತಿಯಾದ ಧ್ಯಾನ ಅಥವಾ ಸಿರಿಧಾನ್ಯಗಳ ಉತ್ಪಾದನೆಗೆ ಆದ್ಯತೆ ನೀಡಬೇಕು. ಕೃಷಿ ಆಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಹೆಚ್ಚಿನ ಹೂಡಿಕೆ ಆಗಬೇಕು ಮತ್ತು ಲ್ಯಾಬ್‌ಗಳಲ್ಲಿ ಆಗುವ ಸಂಶೋಧನೆಯ ಫ‌ಲ ಕೃಷಿ ಭೂಮಿಯಲ್ಲಿ ಕಾಣುವಂತಿರಬೇಕು. ಇನ್ನಷ್ಟು ಉದ್ಯೋಗಾವಕಾಶಗಳ ಸೃಷ್ಟಿಯಾಗಬೇಕು ಮತ್ತು ಗ್ರಾಮೀಣ ಹಣಕಾಸು ಸುಧಾರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ಯಾಶ್‌ಲೆಸ್‌ಗೆ ಆದ್ಯತೆ
ಗ್ರಾಮೀಣ ಭಾಗದಲ್ಲಿ ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಬಾರ್ಡ್‌ 15 ಪೈಲೆಟ್‌ ಯೋಜನೆಗಳನ್ನು ವಿವಿಧ ಬ್ಯಾಂಕ್‌ಗಳ ಸಹಕಾರದೊಂದಿಗೆ ಅನುಷ್ಠಾನ ಮಾಡುತ್ತಿದೆ. ಎಲ್ಲ ವ್ಯವಹಾರಗಳು ಕ್ಯಾಶ್‌ಲೆಸ್‌ ಆದರಂತೆ ಪಾರದರ್ಶಕತೆ ಹೆಚ್ಚಿರುತ್ತದೆ. ನಬಾರ್ಡ್‌ ಫೈನಾನ್ಸ್‌ ಇನ್‌ಕ್ಲೂಸನ್‌ ಫ‌ಂಡ್‌ ಅಡಿಯಲ್ಲಿ ಗ್ರಾಮೀಣ ಭಾಗದ ಮೂಲ ಸೌಕರ್ಯ, ತಂತ್ರಜ್ಞಾನದ ಉನ್ನತೀಕರಣಕ್ಕೆ ಶ್ರಮಿಸುತ್ತಿದೆ. ಸುಮಾರು 2 ಸಾವಿರ ಕೋ.ರೂ.ಗಳಷ್ಟು ನಿಧಿಯಿದೆ ಎಂದರು.

ಜನರ ಭವಿಷ್ಯದ ಚಿಂತಕ
ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಅವರು ಮಾತನಾಡಿ, ಟಿ.ಎ.ಪೈ ಅವರು ಸಂಸದರಾಗಿ ರೈಲ್ವೆ, ಬೃಹತ್‌ ಕೈಗಾರಿಕೆ, ಸ್ಟೀಲ್‌ ಆ್ಯಂಡ್‌ ಮೈನಿಂಗ್‌ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ರಾಜಕಾರಣಿಯಾಗಿದ್ದರೂ ಮುಂದಿನ ಚುನಾವಣೆಯ ಬಗ್ಗೆ ಎಂದೂ ಯೋಚನೆ ಮಾಡಿದವರಲ್ಲ. ಬದಲಾಗಿ ಜನರ ಭವಿಷ್ಯದ ಬಗ್ಗೆ ಸದಾ ಯೋಚನೆ ಮಾಡುತ್ತಿದ್ದರು. ಆಹಾರ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಿಂಡಿಕೇಟ್‌ ಬ್ಯಾಂಕ್‌ನಲ್ಲೂ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ರಾಜಕೀಯ, ಆರ್ಥಿಕ ಕ್ಷೇತ್ರದಿಂದ ಜನ ಸಾಮಾನ್ಯರ ಅನುಕೂಲಗುವ ಸಾಕಷ್ಟು ಸೇವೆಯನ್ನು ಇವರು ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.

ಟ್ಯಾಪ್ಮಿಯಲ್ಲಿ ಬಹುಕಾಲದಿಂದ ಸೇವೆ ಸಲ್ಲಿಸುತ್ತಿರುವ ಪ್ರಾಧ್ಯಾಪಕರನ್ನು ಹಾಗೂ ಆಡಳಿತ ವಿಭಾಗದಲ್ಲಿರುವ ಹಿರಿಯರನ್ನು ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಕಾರ್ಯನಿರ್ವಹಕ ಅಧ್ಯಕ್ಷ ಟಿ.ಸತೀಶ್‌ ಯು. ಪೈ ಸಮ್ಮಾನಿಸಿದರು.

ಸಂಶೋಧನೆಯಲ್ಲಿ ಉತ್ತಮ ಸಾಧನೆ ಮಾಡಿದ ಮಾಹೆ ಸಹ ಕುಲಪತಿ ಹಾಗೂ ಟ್ಯಾಪ್ಮಿ ನಿರ್ದೇಶಕ ಪ್ರೊ| ಮಧು ವೀರರಾಘವನ್‌ ಅವರಿಗೆ ಟಿ.ಎ.ಪೈ ಚಿನ್ನದ ಪದಕ ನೀಡಿ ಸಮ್ಮಾನಿಸಲಾಯಿತು.

ಉಡುಪಿ ಜಿಲ್ಲೆಯ ಮೊದಲ ಜಿಲ್ಲಾಧಿಕಾಡಿ ಡಾ| ಟ್ಯಾಪ್ಮಿ ನಿರ್ದೇಶಕ ಪ್ರೊ| ಮಧು ವೀರರಾಘವನ್‌ ಸ್ವಾಗತಿಸಿದರು. ಬ್ಯಾಂಕಿಂಗ್‌ ತಜ್ಞ ಮೃತ್ಯುಂಜಯ ಮಹಾಪಾತ್ರ ಅವರು ಶಾಜಿ ಕೆ.ವಿ.ಅವರ ಪರಿಚಯ ಮಾಡಿದರು. ಟ್ಯಾಪ್ಮಿಯ ಪ್ರೊ| ಮೀರಾ ಎಲ್‌. ಬಿ. ಅರಾನ್ಹಾ ವಂದಿಸಿ, ಪ್ರೊ| ರಾಜೀವ್‌ ಶಾ ನಿರೂಪಿಸಿದರು.

ಟಿ.ಎ.ಪೈ ಅವರು ಆರ್ಥಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಸಾಮಾನ್ಯ ಜನರ ಜೀವಮಟ್ಟ ಸುಧಾರಣೆಗೆ ಬೇಕಾದ ಕ್ರಮಗಳನ್ನು ಅವರು ದಶಕಗಳ ಹಿಂದೆ ರೂಪಿಸಿ, ಅನುಷ್ಠಾನ ಮಾಡಿದ್ದರು. ಕರಾವಳಿ ಮಾತ್ರವಲ್ಲದೆ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಹೆಚ್ಚಿದೆ.
-ಶಾಜಿ ಕೆ.ವಿ., ಮುಖ್ಯಸ್ಥ, ನಬಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next