Advertisement

ಖಾತೆ ಬದಲಾವಣೆಗೆ ಲಂಚ ಪಡೆದ ಗ್ರಾಮಕರಣಿಕ ಎಸಿಬಿ ಬಲೆಗೆ

09:59 AM Oct 11, 2019 | sudhir |

ಪುತ್ತೂರು: ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಕಡಬ ತಾಲೂಕಿನ ರಾಮಕುಂಜ ಮತ್ತು ಹಳೆನೇರಂಕಿ ಗ್ರಾಮದ ಗ್ರಾಮಕರಣಿಕ ದುರ್ಗಪ್ಪ (24) ಎಂಬವರನ್ನು ಗುರುವಾರ ಸಂಜೆ ಪುತ್ತೂರಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ರೆಡ್‌ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

Advertisement

ರಾಮಕುಂಜ ಮತ್ತು ಹಳೆನೇರಂಕಿ ಎರಡು ಗ್ರಾಮಗಳ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ, ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬತ್ತನಹಳ್ಳಿ ನಿವಾಸಿ ದುರ್ಗಪ್ಪ ಅವರು ಹಳೆನೇರಂಕಿ ಗ್ರಾಮದ ಕಾಪಿಕಾಡು ನಿವಾಸಿ ಶರತ್‌ ಪಿ.ಎನ್‌. ಅವರಿಂದ ಲಂಚದ ಪಡೆದುಕೊಳ್ಳುತ್ತಿದ್ದಾಗ ಬಂಧಿಸಲಾಗಿದೆ.

ಶರತ್‌ ಅವರು ತನ್ನ ದೊಡ್ಡಪ್ಪನ ಹೆಸರಿನಲ್ಲಿರುವ ಜಾಗವನ್ನು ತನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವಂತೆ ಫೆ. 20ರಂದು ಅರ್ಜಿ ಸಲ್ಲಿಸಿದ್ದರು. ಸೆ.12ರಂದು ಅರ್ಜಿದಾರರಿಗೆ ನೋಟಿಸ್‌ ನೀಡಲಾಗಿತ್ತು. ಬಳಿಕ ಖಾತೆ ಬದಲಾವಣೆಗೆ ಮಾಡಿಕೊಡಲು 20 ಸಾ. ರೂ. ನೀಡುವಂತೆ ಗ್ರಾಮಕರಣಿಕ ದುರ್ಗಪ್ಪ ಅರ್ಜಿದಾರರಲ್ಲಿ ಬೇಡಿಕೆ ಇಟ್ಟಿದ್ದರು.

ಈ ಪೈಕಿ 5 ಸಾ.ರೂ. ಅನ್ನು ಅರ್ಜಿದಾರರು ನೀಡಿದ್ದರೂ ದುರ್ಗಪ್ಪ ಮತ್ತೆ ಹಣಕ್ಕಾಗಿ ಬೇಡಿಕೆ ಮುಂದಿಟ್ಟು ಸತಾಯಿಸತೊಡಗಿದ್ದರು. ಕೊನೆಗೆ 8 ಸಾ. ರೂ. ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಶರತ್‌ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.

Advertisement

ಉಳಿಕೆ 3 ಸಾ. ರೂ. ಅನ್ನು ನೀಡುವಂತೆ ಸತಾಯಿಸುತ್ತಿದ್ದ ದುರ್ಗಪ್ಪ, ಗುರುವಾರ ಅರ್ಜಿದಾರ ಶರತ್‌ ಅವರನ್ನು ತನ್ನದೇ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಬಂದು ಪುತ್ತೂರು ನಗರದ ಮುಖ್ಯ ರಸ್ತೆಯ ಕರ್ಣಾಟಕ ಬ್ಯಾಂಕ್‌ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ. ಆತ  ಪಡೆದಿದ್ದ ಲಂಚದ ಹಣವನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಭ್ರಷ್ಟಾಚಾರ ನಿಗ್ರಹ ದಳದ ಪ್ರಭಾರ ಎಸ್ಪಿ ಸುಧೀರ್‌ ಹೆಗ್ಡೆ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಶ್ಯಾಮ ಸುಂದರ್‌ ಮತ್ತು ಯೋಗೀಶ್‌ ಕುಮಾರ್‌, ಹೆಡ್‌ ಕಾನ್‌ಸ್ಟೆಬಲ್‌ಗ‌ಳಾದ ರಾಧಾಕೃಷ್ಣ, ರಾಧಾಕೃಷ್ಣ ಇ.ಎ., ಉಮೇಶ್‌, ರಾಕೇಶ್‌, ರಾಜೇಶ್‌, ಕಾನ್‌ಸ್ಟೆಬಲ್‌ಗ‌ಳಾದ ಪ್ರಶಾಂತ್‌, ವೈಶಾಲಿ ಮತ್ತು ಗಣೇಶ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next