Advertisement
ನನಗೆ ಗೊತ್ತು, ನನ್ನ ಮೇಲೆ ನಿನಗೆ ತುಂಬಾ ಕೋಪ ಇದೆ ಅಂತ. ನಿನಗೆ ಹೇಳದೆ ಊರು ಬಿಟ್ಟು ಬಂದದ್ದಕ್ಕೆ ನೀನು ಅದೆಷ್ಟು ನೋವು ಪಟ್ಟಿರುವೆ ಅಂತ. ಎಷ್ಟೇ ಕೋಪವಿದ್ದರೂ ನೀನು ಕ್ಷಮಿಸುತ್ತೀಯಾ ಎನ್ನುವ ನಂಬಿಕೆ ನನ್ನದು. ಏಕೆಂದರೆ, ನನ್ನ ಅಂತರಾಳದಲ್ಲಿ ಪ್ರೀತಿಯನ್ನು ಹುಟ್ಟುಹಾಕಿ ಚಿಗುರಿಸಿದವಳು ನೀನಲ್ಲವೇ, ಹುಡುಗಿಯರನ್ನು ನೋಡಿ ಮಾರುದ್ದ ಸರಿಯುತ್ತಿದ್ದ ನನ್ನನ್ನು ಪ್ರೀತಿಯೆಂಬ ಲೋಕಕ್ಕೆ ಕೊಂಡೊಯ್ದವಳು ನೀನಲ್ಲವೇ, ಈ ಹೃದಯದ ಒಡತಿ ನೀನಲ್ಲವೇ, ಈ ಜೀವಕೆ ಉಸಿರು ನೀನಲ್ಲವೇ?
Related Articles
Advertisement
ಊರ ಹೊರಗಿನ ಬಯಲು,ನಮ್ಮೂರಿನ ಬೆಟ್ಟ ಗುಡ್ಡದ ಕಲ್ಲಿನ ಮೇಲೆ ನಮ್ಮಿಬ್ಬರ ಹೆಸರು ಕೆತ್ತಿದ್ದು, ಹಳ್ಳದ ದಂಡೆಯ ಮರಳಿನಲ್ಲಿ ಗುಬ್ಬಿಯ ಗೂಡು ಕಟ್ಟಿದ್ದು, ಸದಾ ನಾವಿಬ್ಬರೂ ಮಾತನಾಡುತ್ತ ಬೇಸರವ ಮರೆತದ್ದು…ಈ ಮಧುರ ನೆನಪುಗಳು ಈಗಲೂ ನನ್ನೊಂದಿಗಿವೆ. ನಿಜ. ಸಮಯ ಎಂಬುದು ಒಂದೇ ತರನಾಗಿ ಇರುವುದಿಲ್ಲ, ಎಂಬುದಕ್ಕೆ ನಮ್ಮಿಬ್ಬರ ಅಗಲಿಕೆಯೇ ಸಾಕ್ಷಿ.
ಮನೆಯ ಹಿರಿಯ ಮಗನಾದ ನಾನು ನನ್ನ ಜವಾಬ್ದಾರಿಯನ್ನು ಅರಿತು ನಡೆಯಬೇಕಿದೆ. ಎದೆಯೆತ್ತರ ಬೆಳೆದು ನಿಂತಿರುವ ಸಾಲ, ಕಳೆಗುಂದಿರುವ ಅಮ್ಮನ ಮುಖ, ಸುಮಾರಾಗಿ ಓದುತ್ತಿರುವ ತಮ್ಮ, ಮದುವೆ ವಯಸ್ಸಿಗೆ ಬಂದಿರುವ ತಂಗಿ…ಇವರೆಲ್ಲರ ಬದುಕನ್ನು ನೆಮ್ಮದಿಯ ಹಳಿಗೆ ತಂದು ನಿಲ್ಲಿಸಬೇಕಾಗಿದೆ. ಇದೆಲ್ಲಾ ಆಗಬೇಕೆಂದರೆ ನಾನು ಒಂದು ಕೆಲಸಕ್ಕೆ ಸೇರಿಕೊಳ್ಳಬೇಕು.
ಮೂರ್ನಾಲ್ಕು ವರ್ಷದವರೆಗೆ ಎರಡು ಪಾಳಿಯಲ್ಲಿ ಕೆಲಸ ಮಾಡಿಯಾದ್ರೂ ಈ ಜವಾಬ್ದಾರಿಗಳನ್ನು ಮುಗಿಸಿ ನಿನ್ನೆಡೆಗೆ ಹಾರಿ ಬರ್ತೀನಿ. ಅದೆಷ್ಟೇ ಆಯಾಸವಾಗಿದ್ರೂ ಸರಿ, ನಿನ್ನನ್ನು ಕಂಡಾಕ್ಷಣ ಆಗುವ ಸಂತೋಷಕ್ಕೆ, ತುಟಿ ಮೀರಿ ಬಂದ ಭಾವುಕತೆಗೆ, ನನ್ನ ಎಣೆಯಿರದ ಸೌಭಾಗ್ಯಕ್ಕೆ ಬೆರಗಾಗಿ ನಿನ್ನ ಕೈ ಹಿಡಿದು ಸಮಾಧಾನವಾಗುವಷ್ಟು ಅತ್ತು… ಆಮೇಲೆ ನಿನ್ನ ಜೊತೇನೇ ಬದುಕ್ತೇನೆ. ಪ್ಲೀಸ್, ಸ್ವಲ್ಪ ದಿನ ಕಾಯ್ತಿಯಾ?ಇಂತಿ ನಿನ್ನ ಮನಮೆಚ್ಚಿದ ಹುಡುಗ,
ಪ್ರಶಾಂತ್ ಮೇಟಿ