Advertisement

ಶರಣತತ್ವದ ಆಧಾರದಡಿ ಆಡಳಿತ: ಸಿಎಂ ಬಸವರಾಜ ಬೊಮ್ಮಾಯಿ

04:04 PM Mar 10, 2023 | Team Udayavani |

ಹಾವೇರಿ (ಶಿಗ್ಗಾವಿ): ಶರಣ ತತ್ವದಡಿ ಆಡಳಿತ ನಡೆಸುತ್ತಿದ್ದು, ಎಲ್ಲರಿಗೂ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾವಿ ವಿರಕ್ತಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಮಠದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

Advertisement

ಶಿಗ್ಗಾವಿ ವಿರಕ್ತಮಠ ಶಿಗ್ಗಾವಿಯ ಆಗು ಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿನ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಲ್ಲಿ ಸಂಗನಬಸವ ಸ್ವಾಮೀಜಿ ಮಹತ್ವದ ಪಾತ್ರ ವಹಿಸಿದ್ದಾರೆ. ನಮ್ಮ ಕೆರೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅದೇ ರೀತಿ ಪ್ರತಿ ವರ್ಷ ಹಳ್ಳಿಗಳಲ್ಲಿ ಗಿಡಗಳನ್ನು ನೆಡುವ ಕಾರ್ಯ ಮೆಚ್ಚುವಂತಹದ್ದು. ಅವರು ಗಿಡಗಳಿಗೆ ಮಕ್ಕಳ ಹೆಸರಿಡುವಂತೆ ಸಲಹೆ ನೀಡಿದ್ದಾರೆ. ಅದನ್ನು ಎಲ್ಲರೂ ಪಾಲಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ
ನೀಡಿದ್ದೇನೆ ಎಂದರು.

ವಿರಕ್ತಮಠಕ್ಕೆ ಎಲ್ಲ ಪಕ್ಷಗಳು ಇಲ್ಲಿ ಬಂದ ಸಂಗಮ ಆಗುತ್ತವೆ. ಯಾರೇ ಬಂದರೂ ಅವರಿಗೆ ಸ್ವಾಮೀಜಿಗಳು ನಮ್ಮ ಪರವಾಗಿಯೇ ಇದ್ದಾರೆನ್ನುವ ಭಾವನೆ ಮೂಡಿಸುತ್ತಾರೆ. ಅವರು ಯಾರಿಗೂ ಆಶೀರ್ವಾದ ಮಾಡಲ್ಲ. ನನಗೂ ಅವರು ಆಶೀರ್ವಾದ ಮಾಡಿಲ್ಲ. ಅವರು ಬೋಧನೆ ಮಾಡುತ್ತಾರೆ. ಅದನ್ನು ಪಾಲಿಸಿದರೆ ಯಶಸ್ಸು ಸಿಗುತ್ತದೆ. ನಾನು ಅವರ ಬೋಧನೆ ಪಾಲಿಸಿದ್ದೇನೆ. ಅದಕ್ಕೆ ಯಶಸ್ಸು ಸಿಕ್ಕಿದೆ. ನಾನು ಈಗ ಸಿಎಂ ಆಗಿದ್ದೇನೆ. ಅದು ನಿಮ್ಮ ಆಶೀರ್ವಾದ. ನೀವು ಅದರ
ಮಾಲಕರು ಎಂದು ಹೇಳಿದರು.

ವಿಜಯಪುರದಲ್ಲಿ ನಲವತ್ತು ವರ್ಷದ ಸಮಸ್ಯೆಗೆ ಪರಿಹಾರ ನೀಡಿದ್ದೇನೆ. ಅದರಿಂದ ಅಲ್ಲಿನ ಜನರು ಖುಷಿಯಿಂದ ಸನ್ಮಾನಿಸಿದರು. ಅದಕ್ಕೆ ನಮ್ಮ ಕ್ಷೇತ್ರದ ಜನರೇ ಕಾರಣ. ನಾನು ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಪ್ರತಿದಿನ ಒಂದು ಹೊಸ ಸವಾಲು ಬಂದರೂ ಅದನ್ನು ಎದುರಿಸಿದ್ದೇನೆ. ಜಯ ಸಾಧಿಸಿದ್ದೇನೆ.

ನಾನು ಸಿಎಂ ಆದ ನಾಲ್ಕು ಗಂಟೆಯಲ್ಲಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದೆ. ನಾನು ಹಳ್ಳಿಗಳಿಗೆ ಹೋದಾಗ ಅಲ್ಲಿನ ಕೆಲವು ಮನೆಗಳು ಆರ್‌ ಸಿಸಿ ಮನೆಗಳಿರುವುದನ್ನು ನೋಡಿ ಕೇಳಿದೆ. ಸರ್ಕಾರಿ, ಖಾಸಗಿ ನೌಕರಿ ಮಾಡುವುದರಿಂದ ಅವರು ಆರ್‌ ಸಿಸಿ ಮನೆ ಹಾಕಿಕೊಂಡಿದ್ದಾರೆ. ರೈತರ ಮಕ್ಕಳು ವಿದ್ಯೆ ಕಲಿತರೆ ಅವರೂ ಬೇರೆ ಬೇರೆ ಉದ್ಯೋಗ ಮಾಡಿದರೆ ಅವರು ಅಭಿವೃದ್ಧಿ ಆಗುತ್ತಾರೆ. ಹೀಗಾಗಿ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇನೆ ಎಂದರು.

Advertisement

ದುಡಿಯುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ಕೊಡುವ ಯೋಜನೆ ರೂಪಿಸಿದ್ದೇನೆ. ವಿದ್ಯಾರ್ಥಿನಿಯರಿಗೆ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ನೀಡಿದ್ದೇನೆ. ಪಿಯುಸಿ ನಂತರ ಎಲ್ಲರಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಪಿಯುಸಿ ಫೇಲ್‌ ಆದವರಿಗೂ ತರಬೇತಿ ನೀಡಿ ಸ್ಟೈಪೆಂಡ್‌ ನೀಡುವ ಕೆಲಸ ಮಾಡಿದ್ದೇನೆ. ರೈತರಿಗೆ ವಿಮೆ ಮಾಡಿದ್ದೇನೆ. ಯಾರೇ ಸಹಜ ಸಾವು ಹೊಂದಿದರೂ ಅವರ ಕುಟುಂಬಕ್ಕೆ ಎರಡು ಲಕ್ಷ ರೂ. ವಿಮೆ ಹಣ ಸಿಗುವಂತೆ ಮಾಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳ ಜತೆಗೆ ಬದುಕುತ್ತಾರೆ. ಅಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಿದ್ದೇನೆ.

ಪ್ರತಿಯೊಂದು ಸಮಸ್ಯೆಗೆ ಶರಣರ ತತ್ವಗಳ ಪಾಲನೆ ಮಾಡಿ ಆಡಳಿತ ನಡೆಸುತ್ತಿದ್ದೇನೆ ಎಂದು ಹೇಳಿದರು. ಈ ದೇಶಕ್ಕೆ ದೊಡ್ಡ ಚರಿತ್ರೆ ಇದೆ. ಚಾರಿತ್ರ್ಯ ಬೇಕಿದೆ. ಯಾವ ದೇಶದಲ್ಲಿ ಚಾರಿತ್ರ್ಯಇಲ್ಲವೋ ಆ ದೇಶ ಅಧೋಗತಿಗೆ ಇಳಿಯಲಿದೆ. ನಮ್ಮಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಸಾಕಷ್ಟು ಸಂಘರ್ಷ ಇದೆ. ಅದನ್ನು ಸಮನ್ವತೆಯಿಂದ ಬಗೆಹರಿಸಬೇಕು ಎಂದರು.

ನಮ್ಮ ಗುರುಗಳು ಕಿಂಚಿತ್ತಾದರೂ ಬದಲಾವಣೆ ತರಲು ಪ್ರತಿವರ್ಷ ಶರಣ ಸಂಸ್ಕೃತಿ ಮೂಲಕ ಬದಲಾವಣೆ ತರುವ ಕೆಲಸ ಮಾಡಿದ್ದಾರೆ. ಅವರ ಆಶೀರ್ವಾದದಿಂದ ಉತ್ತಮ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇದರ ಎರಡು ಪಟ್ಟು ಕೆಲಸ ಮಾಡುತ್ತೇನೆ. ನಿಮ್ಮ ಆಶೀರ್ವಾದ ಇರಲಿ ಎಂದರು. ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮೀಜಿ, ಶ್ರೀ ಹೆಬ್ಬಾಳದ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಅಗಡಿ ಸ್ವಾಮೀಜಿ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next