Advertisement

ಪಾಲಕ್ಕಾಡ್ : ಪಿಎಫ್‌ಐ ನಾಯಕನ ಹತ್ಯೆ ಬೆನ್ನಲ್ಲೇ ಆರ್‌ಎಸ್‌ಎಸ್ ಮುಖಂಡನ ಕೊಲೆ

06:27 PM Apr 16, 2022 | Team Udayavani |

ಪಾಲಕ್ಕಾಡ್ : ಕೇರಳದ ಪಾಲಕ್ಕಾಡ್ ಜಿಲ್ಲೆಯು ಕಳೆದ 24 ಗಂಟೆಗಳಲ್ಲಿ ಶನಿವಾರ ಎರಡನೇ ರಾಜಕೀಯ ಹತ್ಯೆಗೆ ಸಾಕ್ಷಿಯಾಗಿದ್ದು, ಬೈಕ್‌ನಲ್ಲಿ ಬಂದ ತಂಡವು ಪಟ್ಟಣದ ಹೃದಯಭಾಗದಲ್ಲಿ ಆರ್‌ಎಸ್‌ಎಸ್ ಮುಖಂಡನನ್ನು ಹತ್ಯೆಗೈದ ಘಟನೆ ಶನಿವಾರ ನಡೆದಿದೆ.

Advertisement

ಆರ್‌ಎಸ್‌ಎಸ್‌ನ ಮಾಜಿ ಜಿಲ್ಲಾ ಮುಖಂಡ ಮತ್ತು ಪದಾಧಿಕಾರಿ ಶ್ರೀನಿವಾಸನ್ (45) ಅವರು ಇಲ್ಲಿಗೆ ಸಮೀಪದ ಮೇಲಮುರಿಯಲ್ಲಿರುವ ಅವರ ಮೋಟಾರ್‌ಬೈಕ್ ಅಂಗಡಿಯಲ್ಲಿದ್ದಾಗ ಆರು ಜನರ ತಂಡ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿಗೆ ಸಮೀಪದ ಹಳ್ಳಿಯೊಂದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕನ ಹತ್ಯೆಯಾದ 24 ಗಂಟೆಗಳ ನಂತರ ಈ ಘಟನೆ ಸಂಭವಿಸಿದೆ.

ಮಧ್ಯಾಹ್ನ ನಡೆದ ಆರ್‌ಎಸ್‌ಎಸ್ ಮುಖಂಡನ ಹತ್ಯೆಯ ನಂತರ ಸ್ಥಳೀಯರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂಗಡಿಗಳನ್ನು ಮುಚ್ಚಿದ್ದು, ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದ ಹತ್ತಿರದ ಅಂಗಡಿಗಳ ಸಿಸಿಟಿವಿ ದೃಶ್ಯಗಳು ಮೂರು ಮೋಟರ್‌ಬೈಕ್‌ಗಳಲ್ಲಿ ದುಷ್ಕರ್ಮಿಗಳು ಅಂಗಡಿಯನ್ನು ಸುತ್ತುವರಿದು, ಅವರಲ್ಲಿ ಮೂವರು ಶ್ರೀನಿವಾಸನ್ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ.

Advertisement

ಆರ್‌ಎಸ್‌ಎಸ್ ಮುಖಂಡನ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಭಾರೀ ಶೋಧ ನಡೆಸುತ್ತಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ವಿಜಯ್ ಸಾಖರೆ ಅವರು ಪಾಲಕ್ಕಾಡ್ ಪಟ್ಟಣಕ್ಕೆ ಆಗಮಿಸಿ ಮೊಕ್ಕಾಂ ಹೂಡಿದ್ದು, 24 ಗಂಟೆಗಳ ಅವಧಿಯಲ್ಲಿ ನಡೆದ ಎರಡು ರಾಜಕೀಯ ಕೊಲೆಗಳ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ತನ್ನ ತಂದೆಯೊಂದಿಗೆ ಮನೆಗೆ ಮರಳುತ್ತಿದ್ದಾಗ ಜಿಲ್ಲೆಯ ಎಲಪ್ಪುಲ್ಲಿಯಲ್ಲಿ ಸುಬೈರ್ (43) ಅವರನ್ನು ಹತ್ಯೆ ಮಾಡಲಾಗಿತ್ತು. ಬಿಜೆಪಿ ಮತ್ತು ಆರ್ ಎಸ್ ಎಸ್ ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ.

ಪಾಲಕ್ಕಾಡ್ ನಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next