ಬೆಂಗಳೂರು: ಸಾರ್ವಜನಿಕ ಕ್ಷೇತ್ರದ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿ., (ಕೆಐಒಸಿಎಲ್) 2017-18ನೇ ಸಾಲಿನ ಹಣಕಾಸು ವರ್ಷದ 4ನೇ ತ್ತೈಮಾಸಿಕದಲ್ಲಿ ಕಾರ್ಯಾಚರಣೆಯಿಂದ 1605.41 ಕೋಟಿ ರೂ. ಆದಾಯ ಗಳಿಸಿ ತೆರಿಗೆ ನಂತರದಲ್ಲಿ 81.48 ಕೋಟಿ ರೂ. ಲಾಭ ದಾಖಲಿಸಿದೆ.
ಪ್ರಸಕ್ತ ಸಾಲಿನ ಅಂತ್ಯಕ್ಕೆ ಕೆಐಒಸಿಎಲ್ ಪೆಲೆಟ್ ಉತ್ಪಾದನೆಯಲ್ಲಿ 2.33 ಮಿಲಿಯನ್ಟನ್ ದಾಖಲಿಸಿ, ಕಳೆದ ಸಾಲಿಗಿಂತ ಶೇ.59ರಷ್ಟು ಉತ್ಪಾದನೆ ಹೆಚ್ಚಿಸಿಕೊಂಡಿದೆ.
ಕಂಪನಿಯ ತೆರಿಗೆ ರಹಿತ ಲಾಭ 86.09 ಕೋಟಿ ರೂ. ಆಗಿದ್ದು, ಕಳೆದ ವರ್ಷಕ್ಕಿಂತ ಶೇ.175ರಷ್ಟು ಹೆಚ್ಚಳ ಕಂಡುಬಂದಿದೆ. ಅದೇ ರೀತಿ ತೆರಿಗೆ ನಂತರ ಲಾಭದ ಪ್ರಮಾಣವೂ ಶೇ.70ರಷ್ಟು ಏರಿಕೆಯಾಗಿ ಒಟ್ಟು 81.48 ಕೋಟಿ ರೂ. ಲಾಭ ದಾಖಲಿಸಿದೆ. ಅಂತಿಮ ತ್ತೈಮಾಸಿಕದಲ್ಲಿ ಪೆಲೆಟ್ ಉತ್ಪಾದನೆ ಮತ್ತು ರವಾನೆಯಲ್ಲೂ ಹೆಚ್ಚಳವಾಗಿದ್ದು, ಶೇ.66ರಷ್ಟು (2.30 ಮಿಲಿಯನ್ ಟನ್) ಪ್ರಗತಿ ಕಂಡುಬಂದಿದೆ ಎಂದು ಕಂಪನಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಸುಬ್ಬರಾವ್ ತಿಳಿಸಿದ್ದಾರೆ.ಒಟ್ಟಾರೆ ಪೆಲೆಟ್ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆ ಮಾಡಲು ಮೇಕ್ ಇನ್ ಇಂಡಿಯಾ ಯೋಜನೆಯ ಪರಿಣಾಮಕಾರಿ ಅಳವಡಿಕೆಯೇ ಕಾರಣವಾಗಿದೆ. ಅಲ್ಲದೆ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಕಂಪನಿಯ ಲಾಭದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲಾಗಿದೆ. ಈ ಸಾಧನೆಯಲ್ಲಿ ಸಿಬ್ಬಂದಿ ಕಾರ್ಯದಕ್ಷತೆ ಬಗ್ಗೆ ಶ್ಲಾಘಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ (ಪಿ ಆ್ಯಂಡ್ ಪಿ) ಎನ್. ವಿದ್ಯಾನಂದ ಇತರರು ಉಪಸ್ಥಿತರಿದ್ದರು.