ಬೆಂಗಳೂರು: ಟ್ರಬಲ್ ಶೂಟರ್ ಎಂದೇ ಹೆಸರಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಹೋದರ ಡಿ ಕೆ ಸುರೇಶ್ ನಿವಾಸಗಳ ಮೇಲೆ ಸೋಮವಾರ ಬೆಳಗ್ಗೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಒಂದಷ್ಟು ಪೂರಕ ಮಾಹಿತಿಯನ್ನು ಕಲೆಹಾಕಿದ್ದಾರೆ. ಕುಟುಂಬದವರೊಂದಿಗೆ ಅಧಿಕಾರಿಗಳು ನಡೆದುಕೊಂಡ ರೀತಿಗೆ ಸಂಸದ ಡಿಕೆ ಸುರೇಶ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು ಸಿಬಿಐ ದಾಳಿಯ ಒಟ್ಟಾರೆ ಸ್ಥಿತಿಗತಿಗಳನ್ನು ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರಮುಖವಾಗಿ ಕನಕಪುರ, ಬೆಂಗಳೂರು ಮತ್ತು ದಿಲ್ಲಿಯ ನಮ್ಮ ಮನೆ ಮತ್ತು ಕಛೇರಿಗಳಿಗೆ ಬಂದು ಯಾವುದೇ ಕಿರುಕುಳ ನೀಡದೇ ವೃತ್ತಿಪರವಾಗಿ ನಡೆದುಕೊಂಡ CBI ಅಧಿಕಾರಿಗಳಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.
ಅಧಿಕಾರಿಗಳ ದಾಖಲೆ ಪರಿಶೀಲನೆಯಲ್ಲಿ ನನ್ನ ಮತ್ತು ನನ್ನ ಅಣ್ಣನ ಮನೆಯಿಂದ ಸೇರಿ ಒಟ್ಟು 6.78 ಲಕ್ಷ ರೂಪಾಯಿಗಳು ಸಿಕ್ಕಿರುತ್ತದೆ. ಅದರಲ್ಲಿ ನನ್ನ ದೆಹಲಿ ನಿವಾಸದಲ್ಲಿ 1.57 ಲಕ್ಷ, ಬೆಂಗಳೂರಿನ ನನ್ನ ಅಣ್ಣನ ನಿವಾಸದಲ್ಲಿ 1.71 ಲಕ್ಷ, ಅವರ ಬೆಂಗಳೂರಿನ ಕಛೇರಿಯಲ್ಲಿ 3.5 ಲಕ್ಷ ರೂಪಾಯಿಗಳು ಅಧಿಕಾರಿಗಳಿಗೆ ಸಿಕ್ಕಿರುವುದನ್ನು ಖಾತ್ರಿ ಪಡಿಸಿದ್ದಾರೆ.
ಇನ್ನು ನನ್ನ ಅಣ್ಣನ ದಿಲ್ಲಿ ಮನೆ ಮತ್ತು ನನ್ನ ಬೆಂಗಳೂರಿನ ಮನೆಯಲ್ಲಿ ಯಾವುದೇ ಹಣ ಸಿಕ್ಕಿರುವುದಿಲ್ಲ. ಹಾಗೆಯೇ ನಮ್ಮ ಎರಡೂ ಮನೆಗಳಲ್ಲಿ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಆಭರಣಗಳನ್ನೂ ವಶಪಡಿಸಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಆಭರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ IT ಮತ್ತು ED ಗೆ ಕೊಟ್ಟ ದಾಖಲೆಗಳನ್ನೇ ಮತ್ತೊಮ್ಮೆ CBI ಸ್ಪಷ್ಟನೆ ತಗೆದುಕೊಂಡಿದೆ. ಇನ್ನು CBI ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಒಟ್ಟು 57 ಲಕ್ಷ ರೂ. ಸಿಕ್ಕಿದ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ ಬಾಕಿ 50.22 ಲಕ್ಷ ಹಣ ಎಲ್ಲಿ ಸಿಕ್ಕಿದೆ, ಅದರ ಹಿನ್ನೆಲೆ ಏನು ಎಂಬುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಈ ಹಿಂದೆ IT ಮತ್ತು ED ಅಧಿಕಾರಿಗಳು ಪರಿಶೀಲಿಸಿದ ದಾಖಲೆಗಳ ನಕಲು ಪ್ರತಿಗಳನ್ನು CBI ಗೆ ಕೊಟ್ಟಿರುತ್ತೇವೆ. ಇನ್ನು ಮುಂದೆಯೂ ಬೇಕಾದ ಎಲ್ಲ ದಾಖಲೆಗಳನ್ನು ಒಪ್ಪಿಸಲು ತಯಾರಿದ್ದೇವೆ. ಈ ಎಲ್ಲ ಪರೀಕ್ಷೆಗಳನ್ನು ಎದುರಿಸಿ ಹೊರಬರುವ ವಿಶ್ವಾಸ ನಮಗಿದೆ. ಅಭಿಮಾನಿಗಳು ಮತ್ತು ಹಿತೈಷಿಗಳಾದ ನಿಮ್ಮೆಲ್ಲರ ಆಶೀರ್ವಾದ ಹಾರೈಕೆ ಸದಾ ಹೀಗೇ ಇರಲಿ ಎಂದು ಟ್ವೀಟ್ ಮೂಲಕ ಸಂಸದ ಡಿ.ಕೆ. ಸುರೇಶ್ ಕೇಳಿಕೊಂಡಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ನಿವಾಸ, ಕನಕಪುರ ನಿವಾಸ ಮಾತ್ರವಲ್ಲದೆ ದಿಲ್ಲಿಯಲ್ಲಿರುವ ಡಿ.ಕೆ. ಸುರೇಶ್ ನಿವಾಸ, ಮುಂಬೈನಲ್ಲಿಯೂ ಅಧಿಕಾರಿಗಳು ದಾಳಿ ನಡೆಸಿದ್ದರು. ಸುಮಾರು 60 ಸಿಬಿಐ ಅಧಿಕಾರಿಗಳ ತಂಡ ಒಟ್ಟು 14 ಕಡೆ ದಾಳಿ ನಡೆಸಿತ್ತು.