Advertisement

ಹನೂರು -ಮಹದೇಶ್ವರ ಬೆಟ್ಟ -ಪಾಲಾರ್ ರಸ್ತೆ ಅಭಿವೃದ್ಧಿಗೆ 135 ಕೋಟಿ: ಸಚಿವ ಸೋಮಣ್ಣ

07:06 PM May 09, 2022 | Team Udayavani |

ಹನೂರು: ಕೊಳ್ಳೇಗಾಲದಿಂದ ಹನೂರಿನವರೆಗೆ ಸುಸಜ್ಜಿತ ಕೆ-ಶಿಪ್ ರಸ್ತೆ ನಿರ್ಮಾಣವಾಗುತ್ತದ್ದು ಹನೂರು – ಮಹದೇಶ್ವರಬೆಟ್ಟ -ಪಾಲಾರ್ ರಸ್ತೆ ಅಭಿವೃದ್ಧಿಗೆ 135 ಕೋಟಿ ಅನುದಾನ ನೀಡಲಾಗಿದ್ದು ಟೆಂಡರ್ ಕರೆಯಲು ಕ್ರಮವಹಿಸಲಾಗಿದೆ ಎಂದು ವಸತಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ತಿಳಿಸಿದರು.

Advertisement

ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ 10ಕೋಟಿ ವೆಚ್ಚದಲ್ಲಿ ರಾಮಾಪುರ-ಕೌದಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವ ಸೋಮಣ್ಣ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ತಾಲೂಕು, ಜಿಲ್ಲೆ, ರಾಜ್ಯ ಮಾತ್ರವಲ್ಲದೆ ದೇಶದ ನಾನಾ ಮೂಲಗಳಿಂದ ಸಹಸ್ರಾರು ಭಕ್ತಾದಿಗಳು ಆಗಮಿಸುತ್ತಾರೆ. ಅವರಿಗೆ ಸುಸಜ್ಜಿತ ರಸ್ತೆ ಮತ್ತು ಅಗತ್ಯ ಮೂಲಸೌಕರ್ಯ ಒದಗಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಶಾಸಕ ನರೇಂದ್ರ ಅವರು ಪ್ರಾಮಾಣಿಕವಾಗಿ ಸೇವೆ ಮಾಡುತ್ತಾ ಬಂದಿದ್ದು ರಾಮಾಪುರ-ಕೌದಳ್ಳಿ ರಸ್ತೆ ಅಭಿವೃದ್ಧಿಗೆ 10 ಕೋಟಿ ಅನುದಾನ ನೀಡಿದ್ದಾರೆ ಎಂದು ಹೊಗಳಿಕೆಯ ಸುರಿಮಳೆಗೈದರು.

100 ಬೆಡ್ ಆಸ್ಪತ್ರೆ, ಡಯಾಲಿಸಿಸ್ ಕೇಂದ್ರ: ಹನೂರು ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅತಯಾಧುನಿಕವಾಗಿ ನವೀಕರಣಗೊಳಿಸಿ 100 ಬೆಡ್‍ಗಳ ಅಸ್ಪತ್ರೆಯನ್ನಾಗಿ ಮೇಲ್ದಜೆಗೇರಿಸಲು ಮತ್ತು ಡಯಾಲಿಸಿಸ್‍ಗಾಗಿ 100 ಕಿ.ಮೀ ದೂರ ತೆರಳಬೇಕಿರುವ ಪರಿಸ್ಥಿತಿಯ ಬಗ್ಗೆ ಶಾಸಕ ನರೇಂದ್ರ ಜೊತೆಗೂಡಿ ಆರೋಗ್ಯ ಸಚಿವ ಸುಧಾಕರ್ ಜೊತೆ ಚರ್ಚಿಸಿದ್ದು ಶಿಘ್ರವಾಗಿ ಡಯಾಲಿಸಿಸ್ ಕೇಂದ್ರ ತೆರೆಯಲು ಮತ್ತು ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿದೆ ಎಂದರು.

ಗಡಿಯವರೆಗೆ ರಸ್ತೆ, ಎಲ್ಲಾ ಕೆರೆಗಳಿಗೂ ನೀರು

ಕೊಳ್ಳೇಗಾಲದಿಂದ ಹನೂರಿನವರೆಗೆ ಕೆ-ಶಿಪ್ ಯೋಜನೆಯಡಿ ರಸ್ತೆ ನಿರ್ಮಾಣವಾಗುತ್ತಿದ್ದು ಅಲ್ಲಿಂದ ಮುಂದೆ ಮಹದೇಶ್ವರ ಬೆಟ್ಟ ಮೂಲಕ ಪಾಲಾರ್ ಗಡಿವರೆಗೆ ರಸ್ತೆ ಅಭಿವೃದ್ಧಿಗಾಗಿ 135ಕೋಟಿ ಅನುದಾನ ಮಂಜೂರಾಗಿದೆ. ಈ ಕಆಮಗಾರಿಯನ್ನು ಕೆಆರ್‍ಐಡಿಎಲ್ ಮೂಲಕ ನಿರ್ವಹಿಸಲು ತೀರ್ಮಾನಿಸಲಾಗಿತ್ತು. ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ್ದು ಟೆಂಡರ್ ಪ್ರಕ್ರಿಯೆ ನಡೆಸಿ ಪ್ರತಿಷ್ಠಿತ ಗುತ್ತಿಗೆದಾರರ ಮೂಲಕ ಕಾಮಗಾರಿ ಮಾಡಲು ಅಗತ್ಯ ಕ್ರಮವಹಿಸಲಾಗಿದೆ ಎಂದರು. ಇದಲ್ಲದೆ ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲೂ ನದಮೂಲದಿಂದ ನೀರು ತುಂಬಿಸಲು ಬಾಕಿ ಉಳಿದಿರುವ ಕೆರೆಗಳನ್ನು ಗುರುತಿಸಲಾಗಿದ್ದು ಆ ಕೆರೆಗಳಿಗೆ ಶಾಶ್ವತ ಯೋಜನೆ ರೂಪಿಸಲು ಜಲಸಂಪನ್ಮೂಲ ಸಚಿವರ ಜೊತೆ ಚರ್ಚಿಸಲಾಗಿದ್ದು, ಅದಕ್ಕೆ 500ಕೋಟಿ ಆದರೂ ಪರವಾಗಿಲ್ಲ ಯೋಜನೆಯನ್ನು ಜಾರಿಗಳಿಸಿ ಮುಖ್ಯಮಂತ್ರಿಗಳನ್ನು ಕರೆತಂದು ಶಂಕುಸ್ಥಾಪನೆ ನೆರವೇರಿಸುತ್ತೇನೆ ಎಂದು ಘೋಷಿಸಿದರು.

Advertisement

ಇದೇ ವೇಳೆ ಶಾಸಕ ನರೇಂದ್ರ ಮಾತನಾಡಿ ರಾಮಾಪುರ – ಕೌದಳ್ಳಿ ಮಾರ್ಗದ ರಸ್ತೆಯ ಅಭಿವೃದ್ಧಿಗೆ ಕಳೆದ 1 ವರ್ಷದ ಹಿಂದೆಯೇ ಅನುದಾನ ಮಂಜೂರು ಮಾಡಿ ಕ್ರಮವಹಿಸಲಾಗಿತ್ತು. ಆದರೆ ಕೆಲ ತಾಂತ್ರಿಕ ದೋಷಗಳಿಂದ ಈ ರಸ್ತೆಗೆ ಮೀಸಲಿಟ್ಟಿದ್ದ ಅನುದಾನವನ್ನೂ ಮಹದೇಶ್ವರಬೆಟ್ಟ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಪ್ರಕ್ರಿಯೆ ಜರುಗಿದ್ದವು. ಬಳಿಕ ಈ ಸಂಬಂಧ ಲೋಕೋಪಯೋಗಿ ಇಲಾಖಾ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಪತ್ರ ವ್ಯವಹಾರ ನಡೆಸಿ ಮತ್ತೆ ಆ ಅನುದಾನವನ್ನು ಈ ರಸ್ತೆಗೆ ಹಾಕಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ಇದಲ್ಲದೆ ಹನೂರು ಕ್ಷೇತ್ರ ವ್ಯಾಪ್ತಿಗೆ ಒಳಪಡುವ ರಸ್ತೆಗಳು ಹಾಳಾಗಿದ್ದು ದುರಸ್ಥಿಗೊಳ್ಳಬೇಕಿರುವ ರಸ್ತೆಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಲಾಗಿದ್ದು ಗತ್ಯ ಅನುದಾನ ಮಂಜೂರು ಮಾಡಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ತಹಸೀಲ್ದಾರ್ ನಾಗರಾಜು, ಡಿವೈಎಸ್ಪಿ ನಾಗರಾಜು, ಲೋಕೋಪಯೋಗಿ ಇಲಾಖೆಯ ಎಸ್‍ಇ ರಾಥೋಡ್, ಇಇ ವಿನಯ್, ಎಇಇ ಸದಾನಂದಮೂರ್ತಿ, ಜೆಇ ಮಹೇಶ್, ಗ್ರಾ.ಪಂ ಅಧ್ಯಕ್ಷೆ ದಾಕ್ಷಾಯಿಣಿ, ಉಪಾಧ್ಯಕ್ಷ ಮುರುಗೇಶ್, ಜಿ.ಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಬಿಜೆಪಿ ಜಿಲ್ಲಾ ಸಂಯೋಜಕ ವೆಂಕಟೇಶ್ ಇನ್ನಿತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next