ಬೆಂಗಳೂರು: ಮಲ್ಲೇಶ್ವರಂ 4ನೇ ಮುಖ್ಯರಸ್ತೆಯಲ್ಲಿ ಇರುವ ಸರಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿ 11.75 ಕೋಟಿ ರೂಪಾಯಿ ವೆಚ್ಚದ ನಾಲ್ಕು ಮಹಡಿಗಳ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಸ್ಥಳೀಯ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.
ಮಲ್ಲೇಶ್ವರಂ 13ನೇ ಕ್ರಾಸ್ ನಲ್ಲಿರುವ, ಬೆಂಗಳೂರು ನಗರ ವಿ.ವಿ.ಗೆ ಸೇರಿದ ಮಹಿಳಾ ಬಹುಶಿಸ್ತೀಯ ಘಟಕ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಪದವಿ ಕಾಲೇಜಿನ ಭೌತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗಗಳ ನೂತನ ಪ್ರಯೋಗಾಲಯಗಳನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “ಈ ಆವರಣದಲ್ಲಿ ತಲೆ ಎತ್ತಲಿರುವ ನೂತನ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳೆರಡೂ ಇರಲಿವೆ. ಇಲ್ಲಿ ಅಂಗನವಾಡಿಯಿಂದ ಹತ್ತನೇ ತರಗತಿಯವರೆಗೂ ಹೈಟೆಕ್ ಗುಣಮಟ್ಟದ ಶಿಕ್ಷಣ ನೀಡಲಾಗುವುದು” ಎಂದರು.
ಈ ಆವರಣದಲ್ಲಿ ಅಂಗನವಾಡಿಯಿಂದ ಹಿಡಿದು ಸ್ನಾತಕೋತ್ತರ ಹಂತದವರೆಗೂ ಶಿಕ್ಷಣ ಲಭ್ಯವಿದೆ. ಮಹಿಳಾ ಘಟಕ ಕಾಲೇಜಿನಲ್ಲಿ ಆರಂಭದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿನಿಯರು ಇದ್ದರು. ಈಗ ಈ ಸಂಖ್ಯೆಯು 300ಕ್ಕೂ ಹೆಚ್ಚಾಗಿದೆ. ಇಲ್ಲಿನ ಶೈಕ್ಷಣಿಕ ಗುಣಮಟ್ಟವು ಖಾಸಗಿ ಕಾಲೇಜುಗಳಿಗಿಂತ ಉತ್ತಮವಾಗಿದೆ ಎಂದು ಅವರು ನುಡಿದರು.
Related Articles
ಮಲ್ಲೇಶ್ವರ ಕ್ಷೇತ್ರವು ಶಿಕ್ಷಣಕ್ಕೆ ಹೆಸರಾದ ಕ್ಷೇತ್ರವಾಗಿದೆ. ಇದಕ್ಕೆ ತಕ್ಕಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ 25 ಅಂಗನವಾಡಿಗಳನ್ನು ಆಧುನೀಕರಣಗೊಳಿಸಲಾಗಿದೆ. ಜೊತೆಗೆ 13 ಪ್ರಾಥಮಿಕ ಶಾಲೆಗಳನ್ನು ಉನ್ನತ ದರ್ಜೆಗೆ ಏರಿಸಲಾಗಿದೆ ಎಂದು ಅವರು ಹೇಳಿದರು.
ಕಲಿಕೆ ಎಂಬುದು ಮೊದಲಿಗೆ ನಮ್ಮೊಳಗೆ ಆರಂಭ ಆರಂಭವಾಗಬೇಕು. ಹೀಗಾಗಿ, ವಿದ್ಯಾರ್ಥಿಗಳು ಸ್ವಯಂ ಕಲಿಕೆಗೆ ಒತ್ತುಕೊಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಆಧುನಿಕ ಕಾಲಘಟ್ಟದಲ್ಲಿ ಕಲಿಕೆಗೆ ಬಹಳ ಮಹತ್ವವಿದೆ. ಮೊದಲಿಗೆ ಸ್ವಯಂ ಕಲಿಕೆಗೆ ಒತ್ತುಕೊಟ್ಟು ನಂತರ ಸಹಪಾಠಿಗಳೊಂದಿಗಿ ಕಲಿಕೆ ಹಾಗೂ ಗುರುಗಳ ಮುಖೇನ ಕಲಿಕೆಗೆ ಆದ್ಯತೆ ಕೊಡಬೇಕು ಎಂದು ಅವರು ವಿವರಿಸಿದರು.
ಕನ್ನಡ ರಾಜ್ಯೋತ್ಸವ ಆಚರಣೆಯ ಬಗ್ಗೆ ಪ್ರಸ್ತಾಪಿಸಿದ ಅವರು, ನಾಡುನುಡಿಯ ವಿಷಯ ಬಂದಾಗ ಗೋಕಾಕ್ ಚಳುವಳಿ ಎಂದೆಂದೂ ಪ್ರೇರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ನಗರ ವಿವಿ ಕುಲಪತಿ ಲಿಂಗರಾಜ ಗಾಂಧಿ, ಪ್ರಾಂಶುಪಾಲರಾದ ಜ್ಯೋತಿ ವೆಂಕಟೇಶ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರವಿ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಗೋಕಾಕ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.