Advertisement

ರೌಡಿಶೀಟರ್ ಗಳ ಪರೇಡ್; ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ!

10:02 PM Dec 23, 2021 | Team Udayavani |

ಕುಷ್ಟಗಿ: ಈ ಪರೇಡ್ ನಲ್ಲಿ ರೌಡಿಶೀಟರ್ ಎಂ.ಓ.ಬಿ.ಗಳು ವಯಸ್ಸಾದವರೆಂದು ಸಡಿಲಿಕೆ ಇಲ್ಲ. ವಯಸ್ಸಾಗಿದ್ದರೂ ಊರಲ್ಲಿ ಬೆಂಕಿ ಹಚ್ಚುವ ಕಾರ್ಯಕ್ರಮದಲ್ಲಿ ನಿರತರಾಗಿರುತ್ತಾರೆ. ಅಂತವರಿಗೆ ವಿನಾಯಿತಿ ಇರುವುದಿಲ್ಲ ನಡತೆಯಲ್ಲಿ ಬದಲಿಸಿಕೊಳ್ಳಬೇಕಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಟಿ. ಶ್ರೀಧರ ಹೇಳಿದರು.

Advertisement

ಕುಷ್ಟಗಿ ಸಿಪಿಐ ಕಛೇರಿಯ ಆವರಣದಲ್ಲಿ ಕುಷ್ಟಗಿ, ತಾವರಗೇರಾ, ಹನುಮಸಾಗರ ಪೊಲೀಸ ಠಾಣಾ ವ್ಯಾಪ್ತಿಯ ನೂರಾರು ರೌಡಿಶೀಟರ್ ಗಳ ಪರೇಡ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವಯಸ್ಸಾದವವರಿಗೆ ನಡತೆ ಮುಖ್ಯ ವಯಸ್ಸಲ್ಲ ಎಂದ ಅವರು, ಸಹಜವಾಗಿ ವಯಸ್ಸು ಜಾಸ್ತಿಯಾದವರ ಚಟುವಟಿಕೆ ಕಡಿಮೆಯಾಗಿರುತ್ತದೆ. ಕೆಲವು ಪ್ರಕರಣದಲ್ಲಿ ವಯಸ್ಸಾದವರು ಅಪರಾಧ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದು, ಊರಲ್ಲಿ ತೊಂದರೆ ನೀಡುವ ಸ್ವಭಾವದವರಾಗಿದ್ದು ಅಂತವರಿಗೆ ಮುಲಾಜು ಇಲ್ಲ ಅಂತವರ ದಾಖಲೆ ಮುಂದುವರೆಸುತ್ತೇವೆ. ಅಂತವರ ಮೇಲೆ ಪೊಲೀಸರು ಸದಾ ನಿಗಾವಹಿಸಿರುತ್ತಾರೆ. ಯುವಕರಾದವರು ಬುದ್ದಿ ತಿದ್ದಿಕೊಂಡು ತಮ್ಮ ನಡತೆ ಸುಧಾರಿಸಿಕೊಂಡಿದ್ದರೆ ಪರಿಶೀಲಿಸಿ ಪಟ್ಟಿಯನ್ನು ಕ್ಲೋಸ್ ಮಾಡಲಾಗುತ್ತಿದೆ ಎಂದರು.

ಅಪರಾಧಿಗಳ ಕಾನೂನು ಬಾಹಿರ ಚಟುವಟಿಕೆಗಳ ಹಿನ್ನೆಲೆಯ ವಸ್ತುನಿಷ್ಟ ಮಾಹಿತಿಯನ್ನು ಜಿಲ್ಲೆಯಲ್ಲಿ ಒಂದೇ ಚೌಕಟ್ಟಿನಲ್ಲಿ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

ಕುಷ್ಟಗಿ ವೃತ್ತ ವ್ಯಾಪ್ತಿಯಲ್ಲಿ 267 ರೌಡಿ ಅಸಾಮಿಗಳು ಸ್ವತ್ತಿನ ಅಪರಾಧದಲ್ಲಿ ತೊಡಗಿರುವ (ಎಂ.ಓ.ಬಿ) ಹಿನ್ನೆಲೆಯ ಅಪರಾಧದಲ್ಲಿರುವ 118 ಜನರಿದ್ದಾರೆ. ಅವರಲ್ಲಿ ಏನೂ ಸುಧಾರಣೆಯಾಗಿದೆ. ಹಿಂದೆ ಪ್ರಕರಣ ದಾಖಲಾದ ಸಮಯಕ್ಕೂ ಸದ್ಯ ಏನಾದ್ರೂ ನಡತೆಯಲ್ಲಿ ಬದಲಾವಣೆಗಳ ಬಗ್ಗೆ ದಾಖಲೆಗಳನ್ನು ಮುಂದುವರಿಸಬೇಕೋ? ಪರಿಸಮಾಪ್ತಿಗೊಳಿಸಬೇಕೋ? ಸಮಾಲೋಚಿಸಿ ಕ್ರಮ ಜರುಗಿಸಲಾಗುತ್ತಿದೆ.

ಈ ರೀತಿಯ ಪರೇಡ್ ನಲ್ಲಿ ಸುಧಾರಣೆ ಕಂಡು ಬಂದಿರುವ ವ್ಯಕ್ತಿಗಳ ಉತ್ತಮ ನಡತೆ ಆಧರಿಸಿ ದಾಖಲೆ ಕ್ಲೋಸ್ ಮಾಡಲಾಗುತ್ತಿದೆ. ಈ ದಾಖಲೆಗಳಿಗೆ ಹೊರಬಂದಿರುವ ವ್ಯಕ್ತಿಗಳು ಸಮಾಜದಲ್ಲಿ ರೌಡೀಶೀಟರ್, ಎಂ.ಓ.ಬಿ. ಎಂಬ ಕಳಂಕದಿಂದ ಹೊರಬರುವ ಆಶಯವುಳ್ಳವರಾಗಿರುತ್ತಾರೆ ಇವರಂತೆ ಇನ್ನುಳಿದವರು ವರ್ತನೆ ಬದಲಿಸಿಕೊಳ್ಳಲು ಪ್ರೇರಣೆಯಾಗಲಿ ಉದ್ದೇಶದ ಹಿನ್ನೆಲೆಯಲ್ಲಿ ಈ ಪರೇಡ್ ನಡೆಸಲಾಗುತ್ತಿದೆ ಎಂದರು.

Advertisement

ಕೊಪ್ಪಳ ಜಿಲ್ಲೆಯಲ್ಲಿ 1,400 ರೌಡಿ ಅಸಾಮಿಗಳಿದ್ದರು ಕಳೆದ ಮೂರು ತಿಂಗಳ ಹಿಂದೆ ಇದೇ ರೀತಿಯ ಪರೇಡ್ ನಲ್ಲಿ ಸನ್ನಡತೆ ಆಧಾರಿಸಿ, 350 ರೌಡಿ ಶೀಟರ್ ಪಟ್ಟಿಯಿಂದ ತೆಗೆಯಲಾಗಿದೆ. ಈಗ ವರ್ಷಾಂತ್ಯವಾಗಿದ್ದು, ಎರಡನೇ ಹಂತದ ಪರೇಡ್ ನಲ್ಲಿ ಸ್ಥಿತಿಗತಿ ಅರ್ಥೈಸಲು ಸಾಧ್ಯವಾಗುತ್ತಿದೆ ತಮ್ಮ ವರ್ತನೆಯ ಬದಲಿಸಿಕೊಂಡವರಿದ್ದು, ಈ ಪಟ್ಟಿಯಲ್ಲಿದ್ದರೆ ಸರ್ಕಾರಿ ನೌಕರಿಯಲ್ಲಿ ತೊಂದರೆಯಾಗುವ ಸಾದ್ಯತೆಗಳಿವೆ. ಇನ್ನು ಯೌವ್ವನದಲ್ಲಿ ಅಪರಾಧ ಕೃತ್ಯ ಮಾಡಿದವರಾಗಿರುತ್ತಾರೆ. ಕೆಲವರು ಪರಿಸ್ಥಿತಿ ಪ್ರಭಾವದಿಂದ ಅಪರಾಧ ಕೃತ್ಯವೆಸಗಿದವರಾಗಿರುತ್ತಾರೆ ಅಂತವರು ಉತ್ತಮ ನಾಗರೀಕರಾಗಿರಲು ಇದೊಂದು ಅವಕಾಶವಾಗಿರುತ್ತದೆ ಎಂದರು.

ವ್ಯವಸ್ಥಿತವಾಗಿ ನಡೆಯುತ್ತಿದ್ದ ಇಸ್ಪೇಟ್ ಕ್ಲಬ್ ಗಳನ್ನು ಬಂದ್ ಮಾಡಲಾಗಿದ್ದು, ಸಮಸ್ತವಾಗಿ ಶೂನ್ಯ ಅಪರಾದ ಎಂದು ಹೇಳು ಸಾದ್ಯವಿಲ್ಲ ಸಹಜವಾಗಿ ಅಪರಾಧ ಚಟುವಟಿಕೆಗಳು ಇದ್ದೇ ಇರುತ್ತವೆ ಆದರೂ ಕೂಡ ನಮ್ಮ ಅಧಿಕಾರಿಗಳು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಒಳ್ಳೇ.. ಸಾಧನೆ ಮಾಡಿದ್ದೀಯ ಬಿಡು…
ಪರೇಡ್ ನಲ್ಲಿಪ್ರತಿಯೊಬ್ಬರು ವೈಯಕ್ತಿಕ ಮಾಹಿತಿ ಕೇಳಿದ ಎಸ್ಪಿ ಟಿ. ಶ್ರೀಧರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ನೀಡಿದರು. ಪರೇಡ್ ವೇಳೆ ರೇಪಿಸ್ಟ್ ವಿಚಾರಣೆ ಸಂಧರ್ಭದಲ್ಲಿ ರೇಪಿಸ್ಟ್ ಮದುವೆ ಮಾಡಿಕೊಂಡಿರುವುದಾಗಿ ತಿಳಿಸಿದಾಗ ಒಳ್ಳೆಯ ಸಾಧನೆ ಮಾಡಿದ್ದೀಯ ಬಿಡು ಎಂದು ಹಾಸ್ಯ ಚಟಾಕಿ ಹಾರಿಸಿದರು. ರೌಡಿಶೀಟರ್, ಮಟ್ಕಾ ಬುಕ್ಕಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ತಿಮ್ಮಣ್ಣ ನಾಯಕ್, ತಾವರಗೇರಾ ಪಿಎಸೈ ವೈಶಾಲಿ ಝಳಕಿ, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ಮತ್ತೀತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next