Advertisement

ನಂದಿಬೆಟ್ಟಕ್ಟೆ ರೋಪ್‌ ವೇ ನಿರ್ಮಿಸಲು ಸಂಪುಟ ಒಪ್ಪಿಗೆ

01:57 PM Feb 19, 2022 | Team Udayavani |

ಚಿಕ್ಕಬಳ್ಳಾಪುರ: ಪ್ರಾಕೃತಿಕ ಸೌಂದರ್ಯದಿಂದ ಸಹಸ್ರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ, ಕರ್ನಾಟಕ ಊಟಿ ಎಂದು ಖ್ಯಾತಿ ಪಡೆದ ಜಿಲ್ಲೆಯ ನಂದಿಗಿರಿಧಾಮದಲ್ಲಿ ರೋಪ್‌ವೇ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಹಲವು ವರ್ಷಗಳ ಜಿಲ್ಲೆಯ ಜನರ ಕನಸು ನನಸಾಗಲಿದೆ.

Advertisement

ನಟ ದಿ. ಶಂಕರ್‌ನಾಗ್‌ ಅವರು ಜಿಲ್ಲೆಯ ನಂದಿಗಿರಿಧಾಮದಲ್ಲಿ ರೋಪ್‌ವೇ ನಿರ್ಮಾಣ ಮಾಡುವ ಕನಸನ್ನು ಹೊಂದಿದ್ದರು. ಇದೇ ವಿಚಾರದಲ್ಲಿ ಅನೇಕ ಬಾರಿ ಚರ್ಚೆಗಳಾಗಿ ರೋಪ್‌ವೇ ನಿರ್ಮಾಣ ಮಾಡುವ ಕನಸು ಮಾತ್ರ ನನಸಾಗಿರಲಿಲ್ಲ. ಈ ಸಂಬಂಧ ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿದ ಸಿ.ಪಿ.ಯೋಗೇಶ್ವರ್‌ ಅವರು, ಜಿಲ್ಲೆಯ ಜನರ ಬಹುದಿನಗಳ ರೋಪ್‌ವೇಕನಸು ನನಸು ಮಾಡುವ ದಿನಗಳು ಸಮೀಪಿಸುತ್ತಿವೆ ಎಂದು ಭರವಸೆ ನೀಡಿದರು.

ಟೆಂಡರ್‌ ಪ್ರಕ್ರಿಯೆ ಶುರು: ಯೋಗೇಶ್ವರ್‌ ಅವರು ಪ್ರವಾಸೋದ್ಯಮ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಈ ಯೋಜನೆ ಮತ್ತೆ ಹಳ್ಳಕ್ಕೆ ಬೀಳುವುದೇ ಎಂಬ ಆತಂಕ ಪ್ರವಾಸಿಗರಿಗೆ ಕಾಡಿತ್ತು. ಪ್ರಸ್ತುತ ಸರ್ಕಾರದಲ್ಲಿಪ್ರವಾಸೋದ್ಯಮ ಸಚಿವರಾಗಿರುವ ಆನಂದ್‌ಸಿಂಗ್‌ಅವರು, ಇತ್ತೀಚೆಗೆ ಜಿಲ್ಲೆಯ ನಂದಿಗಿರಿಧಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೋಪ್‌ವೇ ನಿರ್ಮಾಣ ಮಾಡುವ ಸಲುವಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಟೆಂಡರ್‌ ಪ್ರಕ್ರಿಯೆ ಸಹ ಮಾಡಿಕೊಳ್ಳಲಾಗಿದೆ ಎಂದು ಸುಳಿವು ನೀಡಿದರು.

ಇದೀಗ ರಾಜ್ಯ ಸಚಿವ ಸಂಪುಟ ಹಲವು ವರ್ಷಗಳ ನಂತರ ನಂದಿಗಿರಿಧಾಮದಲ್ಲಿ ರೋಪ್‌ವೇ ನಿರ್ಮಾಣ ಮಾಡಲು ಗ್ರೀನ್‌ ಸಿಗ್ನಲ್‌ ನೀಡುವ ಜೊತೆಗೆ ಅಗತ್ಯಅನುದಾನ ಬಿಡುಗಡೆ ಮಾಡಲು ಸಹಮತ ವ್ಯಕ್ಯಪಡಿಸಿದೆ.

ಜಿಲ್ಲಾನಾಗರಿಕರಲ್ಲಿ ಸಂತಸ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಹಿತ ಅನೇಕ ಗಣ್ಯರು ವಿಶ್ರಾಂತಿ ಪಡೆದಿರುವ ನಂದಿಗಿರಿಧಾಮ ವಿಶ್ವವಿಖ್ಯಾತ ಹೊಂದಿದೆ. ಇದೇ ಸ್ಥಳದಲ್ಲಿ ಸಾರ್ಕ್‌ ಕಾನ್ಫರೆನ್ಸ್‌ ಸಹ ನಡೆದಿದೆ. ಅನೇಕ ಔಷಧಿಯ ಗುಣಗಳನ್ನು ಹೊಂದಿರುವ ಸಸ್ಯಗಳುಸಮೃದ್ಧವಾಗಿ ಬೆಳೆದಿವೆ. ಜೊತೆಗೆ ಪ್ರಾಕೃತಿಕ ಸೌಂದರ್ಯವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ನಂದಿಗಿರಿಧಾಮವನ್ನು ನೋಡುವುದೇ ಒಂದು ಆನಂದ. ಇಂತಹ ಸ್ಥಳವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿರುವುದಕ್ಕೆ ಜಿಲ್ಲೆಯ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ರೋಪ್‌ವೇ ನಿರ್ಮಿಸುವ ಸಲುವಾಗಿ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ತಲಾ ಮೂರೂವರೆ ಎಕರೆ ಜಮೀನು ಸ್ವಾ ಧೀನಮಾಡಿಕೊಳ್ಳಲಾಗಿದೆ. ಅಲ್ಲದೆ, ನಂದಿಬೆಟ್ಟದ ದರ್ಶನ ಮಾಡಲು ಬರುವ ಪ್ರವಾಸಿಗರಿಗೆ ಟ್ರಾಫಿಕ್‌ ಸಮಸ್ಯೆಯ ಕಿರಿಕಿರಿಯಿಂದ ತಪ್ಪಿಸುವ ಸಲುವಾಗಿ ಈಗಾಗಲೇ 8ಎಕರೆ ಜಮೀನು ಸಹ ಪಾರ್ಕಿಂಗ್‌ಗಾಗಿ ಮೀಸಲಿಟ್ಟು ಕಾಂಪೌಂಡ್‌ ಸಹ ನಿರ್ಮಿಸಲಾಗುತ್ತಿದೆ.

ಜಿಲ್ಲೆಯ ನಂದಿಗಿರಿಧಾಮ ಆಧ್ಯಾತ್ಮಿಕತೆ, ಜೀವ ವೈವಿಧ್ಯ ಹಾಗೂ ಪರಿಸರಕ್ಕೆ ಯಾವುದೇ ಧಕ್ಕೆಬಾರದೆ ರೋಪ್‌ ವೇ ಅಭಿವೃದ್ಧಿಗೊಳಿಸಬೇಕು, ಕೇವಲ ವಾಣಿಜ್ಯ ದೃಷ್ಟಿಯಿಂದ ಕೆಲಸ ಆಗಬಾರದು. ಪ್ರಾಕೃತಿಕ ಪರಂಪರೆ, ಆಮ್ಲಜನಕ ಭಂಡಾರ, ಅನೇಕ ನದಿಗಳ ಉಗಮಸ್ಥಾನ, ಬಹಳಷ್ಟು ಜೀವವಿಧ್ಯತೆ ಹೊಂದಿರುವ ಧಾರ್ಮಿಕ ಕ್ಷೇತ್ರ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಪರಿಸರ ಸ್ನೇಹಿ ರೋಪ್‌ ವೇ ನಿರ್ಮಾಣವಾಗಲಿ ಎಂಬುದು ನಮ್ಮ ಆಶಯ.– ಆಂಜನೇಯರೆಡ್ಡಿ, ಅಧ್ಯಕ್ಷ, ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ, ಚಿಕ್ಕಬಳ್ಳಾಪುರ.

ನಿಸರ್ಗ ರಮಣೀಯ ತಾಣವಾಗಿ ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಿರುವ ಜಿಲ್ಲೆಯ ನಂದಿಗಿರಿಧಾಮದಲ್ಲಿ ರೋಪ್‌ ವೇ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಸಾರ್ಕ್‌ ಸಮ್ಮೇಳನ ಒಂದಕ್ಕೆ ಸಾಕ್ಷಿಯಾಗಿರುವ ನಂದಿಗಿರಿಧಾಮ ಈ ಭಾಗದ ದೊಡ್ಡ ಸಂಪತ್ತು. ಹಲವು ಔಷಧಿಗಳ ಗಿಡ ಮೂಲಿಕೆಗಳ ಆಗರವು ಆಗಿರುವ ಈ ಗಿರಿಧಾಮ ಸಸ್ಯ ಮತ್ತು ಜೀವ ವೈವಿಧ್ಯಕ್ಕೆ ಅಪಾಯ ಆಗದಂತೆ ದೂರದೃಷ್ಟಿಯ ಅಭಿವೃದ್ಧಿಯಾಗಲಿ. – ಎನ್‌.ಚಂದ್ರಶೇಖರ್‌, ಕನ್ನಡ ಉಪನ್ಯಾಸಕ, ಚಿಕ್ಕಬಳ್ಳಾಪುರ.

ನಂದಿ ಬೆಟ್ಟದ ತಪ್ಪಲಿನಿಂದ 2.93 ಕಿ.ಮೀ. ಎತ್ತರದ ಬೆಟ್ಟ ಪ್ರದೇಶಕ್ಕೆ ರೋಪ್‌-ವೇ ನಿರ್ಮಿಸಿ ಪ್ರವಾಸಿಗರನ್ನು ಕರೆದೊಯ್ಯಲು ಉದ್ದೇಶಿಸಲಾಗಿದೆ. ಲ್ಯಾಂಡಿಂಗ್‌ ಸ್ಟೇಷನ್‌ (ಇಳಿಯುವ ಸ್ಥಳ) ಬೆಟ್ಟದ ತಳಭಾಗ, ಮೇಲ್ಭಾಗದ ಎರಡೂ ಕಡೆ ಇರುವಂತೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಒಟ್ಟು 18 ಟವರ್‌ಗಳನ್ನು ನಿರ್ಮಿಸಲಾಗುತ್ತದೆ. ಇದರಜೊತೆಗೆ ರೆಸ್ಟೋರೆಂಟ್‌, ಕೆಫೆ, ಆಹಾರ ಮಳಿಗೆ, ಇತರೆ ಮಳಿಗೆಗಳನ್ನು ನಿರ್ಮಿಸಲು ಅವಕಾಶ ಇದೆ. ರೋಪ್‌-ವೇನಲ್ಲಿ 50= ಕ್ಯಾಬಿನ್‌ಗಳಿರಲಿದೆ. ಪ್ರತಿಯೊಂದರಲ್ಲೂ10 ಮಂದಿ ಪ್ರಯಾಣಿಸಬಹುದು. ಒಟ್ಟು28 ನಿಮಿಷಗಳಲ್ಲಿ ಕ್ರಮಿಸಬಹುದು.ರೋಪವೇ ನಿರ್ಮಾಣದಿಂದ ನಂದಿ ಬೆಟ್ಟ ಕೆಲವೇ ವರ್ಷಗಳಲ್ಲಿ ಅತ್ಯಂತಆಕರ್ಷಣೀಯ ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಯಾಗಲಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಆರ್ಥಿಕಾಭಿವೃದ್ಧಿಯಲ್ಲಿ ಮಹತ್ವದ ಮೈಲುಗಲ್ಲಾಗಿದೆ. -ಡಾ.ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ.

 

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next