Advertisement

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಬಿ.ಸಿ.ನಾಗೇಶ್

04:53 PM Sep 21, 2022 | Team Udayavani |

ಬೆಂಗಳೂರು: ದೇಶದ ಪ್ರಗತಿ ಹಾಗೂ ಉನ್ನತಿಗಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಇದರಲ್ಲಿ ಪ್ರತಿಯೊಬ್ಬ ಶಿಕ್ಷಕರ ಪಾತ್ರವು ಅತ್ಯಂತ ಮಹತ್ವದ್ದಾಗಿರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

Advertisement

ಇದನ್ನೂ ಓದಿ: ಪೇ ಸಿಎಂ ಅಭಿಯಾನ: ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಷಡ್ಯಂತ್ರ; ಸಿಎಂ ಬೊಮ್ಮಾಯಿ

ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಬುಧವಾರ (ಸೆ.21) ನಡೆದ ‘ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ಬಡ್ತಿ ಮುಖ್ಯ ಶಿಕ್ಷಕರ ಸಂಘ’ದ ಉದ್ಘಾಟನೆ ಹಾಗೂ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ‘ಮಕ್ಕಳು, ಪಾಲಕರು, ಶಿಕ್ಷಕರು, ಕೈಗಾರಿಕೆ, ಉದ್ಯಮಗಳು, ಕಂಪನಿಗಳು, ಹಲವು ಕ್ಷೇತ್ರಗಳ ತಜ್ಞರು, ಶಿಕ್ಷಣ ತಜ್ಞರು, ರಾಜಕಾರಣಿಗಳು, ಪರಿಣಿತರು ಮಾತ್ರವಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಗ್ರಾಮ ಮಟ್ಟದಲ್ಲೂ ಸಭೆ ನಡೆಸಿ ನೂತನ ಶಿಕ್ಷಣ ನೀತಿ ಕುರಿತು ಅಭಿಪ್ರಾಯ ಪಡೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದರು. ಗ್ರಾಮ ಮಟ್ಟದಲ್ಲಿ ನೀಡಲಾಗುವ, ಸಲಹೆ, ಆಲೋಚನೆಗಳು, ವಿಷಯಗಳ ಕುರಿತು ಅಭಿಪ್ರಾಯಗಳನ್ನು ಪಡೆದು ಸಮಗ್ರವಾಗಿ ಪರ್ಯಾಲೋಚನೆ ನಡೆಸಿ ಹಲವು ಹಂತಗಳಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಿದ ಕೇಂದ್ರ ಸರ್ಕಾರ, ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ಅನುಷ್ಠಾನಗೊಳಿಸುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಲಿರುವ ನೂತನ ನೀತಿಯ ಅನುಷ್ಠಾನ ವಿಚಾರವನ್ನು ಶಿಕ್ಷಕರು ತಮ್ಮ ಮನಸ್ಸು ಹಾಗೂ ಹೃದಯಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು. ರಾಷ್ಟ್ರವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಅವಕಾಶ ನಮಗೆ ಲಭಿಸಿದೆ ಎನ್ನುವುದು ಸದಾ ಮನಸ್ಸಿನಲ್ಲಿರಬೇಕು’ ಎಂದರು.

‘ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ರಚಿಸಿಕೊಂಡ ಮೆಕಾಲೆ ಶಿಕ್ಷಣ ಪದ್ಧತಿಗೆ ಕೊನೆ ಹಾಡಬೇಕು ಎಂಬುದು ಸ್ವಾತಂತ್ರ್ಯಪೂರ್ವದಿಂದಲೂ ನಮ್ಮ ಹಿರಿಯರು, ಮಹನೀಯರು ಕಂಡ ಕನಸಾಗಿದೆ. ಅದನ್ನು ನನಸು ಮಾಡಲು, ಭಾರತೀಯರನ್ನು ಸ್ವಾವಲಂಬಿ, ಸ್ವಾಭಿಮಾನಿ, ಸರ್ವರ ಅಭಿವೃದ್ಧಿಪರವಾದ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ’ ಎಂದರು.

‘ಅಭಿವೃದ್ಧಿಪರವಾದ, ತಾರತಮ್ಯರಹಿತ ಸಮಾನ ಅವಕಾಶಗಳನ್ನು ಎಲ್ಲರಿಗೂ ನೀಡುವ ಸಮಾಜವನ್ನು ಕಟ್ಟುವ ಸಾಮರ್ಥ್ಯ, ಶಕ್ತಿ ಇರುವುದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಇದೆ. ಉತ್ತಮ ಶಿಕ್ಷಣದ ಜೊತೆಗೆ ಭಾರತೀಯತೆ, ನೈತಿಕತೆ ಮತ್ತು ಉತ್ತಮ ಗುಣ, ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕಿದೆ’ ಎಂದರು.

Advertisement

‘ದೇಶ, ಸಮಾಜದ ಬಗ್ಗೆ ಚಿಂತನೆ ಬದಲು ವೈಯಕ್ತಿಕ ಲಾಭ, ಸ್ವಾರ್ಥವೇ ಮೊದಲು ಎನ್ನುವ ಹಂತಕ್ಕೆ ಸಮಾಜ ಬಂದಿದೆ. ಅದನ್ನು ಬದಲಿಸಿ, ಸಮಾಜದ ಹಿತಾಸಕ್ತಿಯ, ಸಮಾಜಮುಖಿ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಸುಶಿಕ್ಷತರನ್ನಾಗಿಸಬೇಕು. ಶಿಕ್ಷಣ ಕೇವಲ ಉದ್ಯೋಗ ಕೊಡಿಸುವ ವ್ಯವಸ್ಥೆ ಮಾತ್ರ ಆಗಬಾರದು. ಹಿಂದಿನ ಕಾಲದಲ್ಲಿ ಮನೆ ಮನೆಗೆ ತೆರಳುತ್ತಿದ್ದ ಶಿಕ್ಷಕರು, ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದರು. ಅಂತಹ ಶಿಕ್ಷಕರನ್ನು ಜನರು ಪೂಜ್ಯ ಸ್ಥಾನದಲ್ಲಿಟ್ಟು ವಿಶೇಷವಾಗಿ ಗೌರವಿಸುತ್ತಿದ್ದರು. ಅಂತಹ ಗುರುಗಳ ಬಳಿ ಕಲಿತ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಂಡು ಸಾಧನೆ ಮಾಡಿದ ಅಸಂಖ್ಯಾತ ಉದಾಹರಣೆಗಳು ಇವೆ. ಆದರೆ, ಅಂದಿನ ಪರಿಸ್ಥಿತಿ ಇಂದು ಇಲ್ಲ. ಸರ್ಕಾರಿ ಶಾಲೆಗಳಿಗೆ ಬರುವ ಎಲ್ಲ ವರ್ಗದ ಮಕ್ಕಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಬೇಕು. ಆ ಮಕ್ಕಳು ಜೀವನ ರೂಪಿಸಿಕೊಳ್ಳುವ ಜೊತೆಗೆ ಭಾರತದ ಜವಾಬ್ದಾರಿಯುತ ಪ್ರಜೆಗಳಾಬೇಕು’ ಎಂದು ಕರೆ ನೀಡಿದರು.

‘ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಉಳಿದ ಬೇಡಿಕೆಗಳನ್ನು ಹಂತ ಹಂತವಾಗಿಬಈಡೇರಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ’ ಎಂದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಪುಟ್ಟಣ್ಣ, ಚಿದಾನಂದಗೌಡ, ಅ.ದೇವೇಗೌಡ, ಎಸ್‌.ಎಲ್.ಬೋಜೇಗೌಡ ಸೇರಿ ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next