Advertisement

Yash: ಅರ್ಧಂಬರ್ಧ ಅಡುಗೆ ಮಾಡಿ ಬಡಿಸಲ್ಲ…

11:07 AM Nov 25, 2023 | Team Udayavani |

“ಕೆಜಿಎಫ್-2′ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಯಶ್‌ ಹೊಸ ಸಿನಿಮಾ ಅನೌನ್ಸ್‌ ಆಗದ ಹಿನ್ನೆಲೆಯಲ್ಲಿ  ಅವರ ಹೊಸ ಸಿನಿಮಾ ಕುರಿತಾದ ಕುತೂಹಲ ಜಾಸ್ತಿಯಾಗಿದೆ. ಈ ನಡುವೆಯೇ ಅನೇಕ ನಿರ್ದೇಶಕರ ಹೆಸರುಗಳು ಯಶ್‌ ಸಿನಿಮಾ ಸುತ್ತ ಕೇಳಿಬಂದವು. ಆದರೆ, ಯಾವುದೂ ಇನ್ನೂ ಅಧಿಕೃತವಾಗಿ ಅಂತಿಮವಾಗಿಲ್ಲ. ಅವರ ಹುಟ್ಟುಹಬ್ಬದಿಂದ ಹಿಡಿದು ಪ್ರತಿ ಹಬ್ಬ ಬಂದಾಗಲೂ ಯಶ್‌ ಹೊಸ ಸಿನಿಮಾ ಅನೌನ್ಸ್‌ ಆಗುತ್ತದೆ ಎಂಬ ಮಾತು ಕೇಳಿಬರುತ್ತಲೇ ಇದೆ. ಆದರೆ, ಸಿನಿಮಾ ಮಾತ್ರ ಅನೌನ್ಸ್‌ ಆಗಿಲ್ಲ. ಸಿನಿ ಪ್ರೇಮಿಗಳ ಈ ಕಾತರ ಯಶ್‌ಗೆ ಅರ್ಥವಾಗಿದೆ. ಅದೇ ಕಾರಣದಿಂದ ಯಶ್‌ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೊಸ ಸಿನಿಮಾದ ಕಾಯುವಿಕೆಯ ಕುರಿತು ಮಾತನಾಡಿದ್ದಾರೆ. “ನನಗೆ ನಿಮ್ಮ ಕಾತರ ಅರ್ಥವಾಗುತ್ತದೆ. ನನ್ನನ್ನು ನೀವು ಪ್ರೋತ್ಸಾಹಿಸಿದ್ದೀರಿ. ಆದರೆ ನಾನು ಸುಮ್ಮನೆ ರಿಲ್ಯಾಕ್ಸ್‌  ಆಗಿ ಕುಳಿತಿಲ್ಲ. ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಜ್ಜಾಗುತ್ತಿದ್ದೇನೆ. ಸಾಧಾರಣವಾದ ಕೆಲಸ ಮಾಡಲು ನನಗೆ ಇಷ್ಟವಿಲ್ಲ, ಎಲ್ಲರೂ ಹೆಮ್ಮೆ ಪಡುವಂತಹ ಕೆಲಸವನ್ನೇ ಮಾಡುತ್ತೇನೆ’ ಎಂದಿದ್ದಾರೆ. “ನನ್ನ ಹೊಸ ಸಿನಿಮಾ ಕುರಿತಾಗಿ ನಾನು ಏನೂ ಮಾತನಾಡಿಲ್ಲ.  ಆದರೆ ಪ್ರತಿ ಹಬ್ಬ ಬಂದಾಗ, ಹುಟ್ಟುಹಬ್ಬ ಬಂದಾಗೆಲ್ಲ ಯಶ್‌ ಸಿನಿಮಾ ಘೋಷಣೆ ಎಂದು ಹೇಳುತ್ತಾರೆ. ಇದರಿಂದ ಗೊಂದಲ ಸೃಷ್ಟಿಯಾಗುಯತ್ತದೆ. ಖಂಡಿತ ಸಿನಿಮಾ ಅಪ್‌ಡೇಟ್‌ ಕೊಡುತ್ತೀನಿ. ಎಲ್ಲಾ ಊಟ ರೆಡಿಯಾದ ಮೇಲೆ ಬಡಿಸಿದರೇನೇ ಚೆಂದ. ಅರ್ಧಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆಯುವುದು ಸರಿ ಹೋಗುವುದಿಲ್ಲ’ ಎನ್ನುವ ಮೂಲಕ ಹೊಸ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಿಸಿದ್ದಾರೆ.

Advertisement

ಮಲಯಾಳಂನಲ್ಲಿ ವಿಭಿನ್ನ ಸಿನಿಮಾಗಳನ್ನು ನಿರ್ಮಿಸಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಅವರ ಸಿನಿಮಾದಲ್ಲಿ ಯಶ್‌ ನಟಿಸಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಆದರೆ, ಅಧಿಕೃತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next