Advertisement

ರಾಕೆಟ್‌ ವಿಜ್ಞಾನಿ ಎಸ್‌.ಸೋಮನಾಥ್‌

11:36 PM Jan 14, 2022 | Team Udayavani |

ಅದೊಂದು ಕೇರಳದ ಅಲಪ್ಪುಳ ಜಿಲ್ಲೆಯ ಪುಟ್ಟ ಗ್ರಾಮ. ಹೆಸರು ತುರವೂರು ಗ್ರಾಪಂ ವ್ಯಾಪ್ತಿಯ ವಾಲಮಂಗಳಂ. ಮುಂದೊಂದು ದಿನ ಈ ಹೆಸರು ದೇಶದ ಭೂಪಟದಲ್ಲಿ ಮಿಂಚಬಹುದು ಎಂಬುದು ಅಲ್ಲಿನ ಯಾರಿಗೂ ಅರಿವಿರಲೇ ಇಲ್ಲ. ಅಂದ ಹಾಗೆ ಇದು ಈಗಷ್ಟೇ ಇಸ್ರೋ ಮುಖ್ಯಸ್ಥರಾಗಿ ನೇಮಕವಾಗಿರುವ ಎಸ್‌.ಸೋಮನಾಥ್‌ ಅವರ ಹುಟ್ಟೂರು. ತಂದೆ ಹಿಂದಿ ಶಿಕ್ಷಕ. ಹೆಸರು ತುರವೂರು ವೇದಂಪರಂಬಿಲ್‌ ಶ್ರೀಧರ ಪಣಿಕ್ಕರ್‌.

Advertisement

ಹಾಗೆಯೇ ತಾಯಿ ಹೆಸರು ತಂಕಮ್ಮ. ಇವರ ಊರು ಆರೂರು. ತಾಯಿಯ ಊರಿನಲ್ಲೇ ಜನಿಸಿದ ಸೋಮನಾಥ್‌ ಅವರು, ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಇಲ್ಲಿಯೇ. ಇದಾದ ಮೇಲೆ, ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದರು. ಕೊಲ್ಲಂನಲ್ಲಿರುವ ಟಿಕೆಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದ ಇವರು ಕಾಲೇಜ್‌ ಟಾಪರ್‌. ಇದಾದ ಬಳಿಕ ಬೆಂಗಳೂರಿನಲ್ಲಿರುವ ಐಐಎಸ್‌ಸಿಯಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇಲ್ಲಿ ಅವರು ಚಿನ್ನದ ಪದಕವನ್ನೂ ಗೆದ್ದಿದ್ದರು. ಪತ್ನಿ  ವಲ್ಸಲಾ  ತಿರುವನಂತಪುರದಲ್ಲಿನ ಕೇಂದ್ರ ಸುಂಕ ಮತ್ತು ಅಬಕಾರಿ ಇಲಾಖೆಯಲ್ಲಿ ಸೂಪರಿಂಟೆಂಡ್‌ ಆಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು,  ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

1985ರಲ್ಲಿ ವಿಕ್ರಂ ಸಾರಾಭಾಯಿ ಸ್ಪೇಸ್‌ ಸೆಂಟರ್‌(ವಿಎಸ್‌ಎಸ್‌ಸಿ)ಗೆ ಸೇರಿದ ಸೋಮನಾಥ್‌ ಅವರು, ಪಿಎಸ್‌ಎಲ್‌ವಿ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದರು. 2010ರಲ್ಲಿ ವಿಎಸ್‌ಎಸ್‌ಸಿಯ ಸಹಾಯಕ ನಿರ್ದೇಶಕರಾದರು. ಜಿಎಸ್‌ಎಲ್‌ವಿ ಎಂಕೆ-3 ಉಡಾವಣ ವಾಹಕದ ಪ್ರಾಜೆಕ್ಟ್ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸಿದರು. 2014ರಲ್ಲಿ ಪ್ರೊಪಲ್ಶನ್‌ ಆ್ಯಂಡ್‌ ಸ್ಪೇಸ್‌ ಆರ್ಡಿನೆನ್ಸ್‌ ಎಂಟಿಟಿಯ ಉಪ ನಿರ್ದೇಶಕರಾದರು. 2015ರಲ್ಲಿ ವಲಿಮಾಲದಲ್ಲಿರುವ ಲಿಕ್ವಿಡ್‌ ಪ್ರೊಪೋಲ್ಶನ್‌ ಸಿಸ್ಟಮ್ಸ್‌ ಸೆಂಟರ್‌ನ ನಿರ್ದೇಶಕರಾದರು. 2018ರಲ್ಲಿ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಸ್ಥಾನದ ಹೊಣೆ ಹೊತ್ತರು. ಸದ್ಯ ಇವರ ಮುಂದೆ ಚಂದ್ರಯಾನ-2 ಮತ್ತು ಮಾನವ ಸಹಿತ ಗಗನಯಾನ ಯೋಜನೆಗಳ ಸವಾಲುಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next