Advertisement

ಮನೆಗೆ ನುಗ್ಗಿ ತಾಯಿ-ಮಗನಕೊಂದ ದರೋಡೆಕೋರರು

10:00 AM Oct 26, 2018 | Team Udayavani |

ಸೇಡಂ: ಐವರು ಮುಸುಕುಧಾರಿಗಳು ಮನೆಯೊಂದಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ತಾಯಿ ಮತ್ತು ಮಗನನ್ನು ಕೊಲೆ ಮಾಡಿ ನಗ-ನಾಣ್ಯ ದೋಚಿದ ಘಟನೆ ತಾಲೂಕಿನ ಮುನಕನಪಲ್ಲಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

Advertisement

ಮನೆಯ ಅಂಗಳದಲ್ಲಿ ಮಲಗಿದ್ದ ಬಸವರಾಜ ಹಾಶಪ್ಪ ತೆಲ್ಕಾಪಲ್ಲಿ (50) ಹಲ್ಲೆಗೊಳಗಾಗಿ ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಗೊಂಡಿದ್ದ ಬಸವರಾಜನ ತಾಯಿ ಬಾಲಮ್ಮ ಹಾಶಪ್ಪ (70) ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸಂಬಂಧಿಕರಾದ ರವಿ ಹಣಮಂತ (16), ವೆಂಕಟೇಶ ಬಸವರಾಜ (24) ಗಾಯಗೊಂಡಿದ್ದು , ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಬಳಿಕ 30 ಗ್ರಾಂ ಚಿನ್ನ, 10 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು, ಐಜಿಪಿ ಮನೀಶ ಕರ್ಬಿಕರ್‌, ಹೆಚ್ಚುವರಿ ಎಸ್ಪಿ
ಜಯಪ್ರಕಾಶ, ಸಿಪಿಐ ಶಂಕರಗೌಡ ಪಾಟೀಲ, ಎನ್‌. ವಿರೇಂದ್ರ, ಪಿಎಸ್‌ಐ ಸುಶೀಲಕುಮಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಾಯ್ತು?: ಮುನಕನಪಲ್ಲಿ ಗ್ರಾಮದ ಬಸವರಾಜ ಹಾಶಪ್ಪ ತೆಲ್ಕಾಪಲ್ಲಿ ಊಟ ಮುಗಿಸಿ ಮನೆ ಅಂಗಳದಲ್ಲಿ ಮಲಗಿದ್ದರು. ಈ ವೇಳೆ ದಿಢೀರ್‌ನೆ ಆಗಮಿಸಿದ ಐವರು ಅಪರಿಚಿತರು ಮನೆಗೆ ನುಗ್ಗಿ ಬಡಿಗೆಗಳಿಂದ ಹಿಗ್ಗಾಮುಗ್ಗಾ ಥಳಿಸಲು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಬಸವರಾಜನ ಸೊಸೆಯ ಕೈಲಿದ್ದ ಮಗುವನ್ನು ಕಸಿದುಕೊಂಡು ಸನ್ನೆ ಮೂಲಕ ನಗ-ನಾಣ್ಯ ನೀಡುವಂತೆ ಒತ್ತಾಯಿಸಿದ್ದಾರೆ.
 
ನಂತರ ಮಗುವನ್ನು ಬಿಸಾಕಿ ಬಾಲಮ್ಮಳ ಕೊರಳಲ್ಲಿನ ಬಂಗಾರದ ಸರಕ್ಕೆ ಕೈ ಹಾಕಿ ಎಳೆದಾಡಿದ್ದಾರೆ. ಇದಕ್ಕೂ ಮುನ್ನ ಹಲ್ಲೆಗೊಳಗಾಗಿದ್ದ ಬಸವರಾಜ ಮಂಚದ ಮೇಲೆಯೇ ಕೊನೆಯುಸಿರೆಳೆದಿದ್ದು, ಉಳಿದ ಮೂವರಿಗೆ ಗಾಯಗಳಾಗಿವೆ ಎಂದು ಗಾಯಗೊಂಡ ಯುವಕ ವೆಂಕಟೇಶ ತಿಳಿಸಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೇಲ್ನೋಟಕ್ಕೆ ಈ ಪ್ರಕರಣ ದರೋಡೆಗೆ ಯತ್ನಿಸಿದಂತೆ ಅನುಮಾನ ವ್ಯಕ್ತವಾಗಿದೆ. ಘಟನೆಯಲ್ಲಿ ನಗದು ಮತ್ತು ಬಂಗಾರ ಆಭರಣಗಳನ್ನು ಅಪರಿಚಿತರು ದೋಚಿದ್ದಾರೆ. ತನಿಖೆ ಜಾರಿಯಲ್ಲಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. 
ಜಯಪ್ರಕಾಶ, ಹೆಚ್ಚುವರಿ ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next