Advertisement

ರಸ್ತೆ ಅಗಲೀಕರಣ; ಮುಂದುವರಿದ ಧರಣಿ

06:06 PM Jun 21, 2022 | Team Udayavani |

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ (ಗಜೇಂದ್ರಗಡ-ಸೊರಬ ರಾಜ್ಯಹೆದ್ದಾರಿ-136) ಆಗ್ರಹಿಸಿ, ಅಗಲೀಕರಣ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ಹೋರಾಟ ಆರನೇ ದಿನಕ್ಕೆ ಮುಂದುವರಿದಿದೆ.

Advertisement

ಧರಣಿಯ 5ನೇ ದಿನವಾದ ಸೋಮವಾರ ಪ್ರತಿಭಟನಾ ಸ್ಥಳಕ್ಕೆ ತೆರಳಿದ ತಹಶೀಲ್ದಾರ್‌ ತಿಪ್ಪೇಸ್ವಾಮಿ, ಮುಖ್ಯಾಧಿಕಾರಿ ಏಸು ಬೆಂಗಳೂರು, ಪಿಎಸೈ ಮಂಜುನಾಥ ಕುಪ್ಪೇಲೂರ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಧರಣಿ ಕೈಬಿಡುವಂತೆ ಮನವಿ ಮಾಡಿದರೂ ಯಾವುದೇ ಫಲಪ್ರದವಾಗಲಿಲ್ಲ.

ಧರಣಿ ಕೈಬಿಡಿ: ತಹಶೀಲ್ದಾರ್‌ ತಿಪ್ಪೇಸ್ವಾಮಿ ಮಾತನಾಡಿ, ಮುಖ್ಯ ರಸ್ತೆ ಅಗಲೀಕರಣ ವಿಚಾರವಾಗಿ ತಾಲೂಕು ಆಡಳಿತ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಆದರೆ ಮುಖ್ಯ ರಸ್ತೆಯಲ್ಲಿನ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಅಗಲೀಕರಣಕ್ಕೆ ಹಿನ್ನಡೆಯಾಗಿದೆ. ಕೋರ್ಟ್‌ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸಲಾಗುವುದು. ಅಲ್ಲಿವರೆಗೂ ಧರಣಿ ಸತ್ಯಾಗ್ರಹ ಹಿಂಪಡೆಯುವಂತೆ ಮನವಿ ಮಾಡಿದರು.

ಮುಖ್ಯಾಧಿಕಾರಿ ಏಸು ಬೆಂಗಳೂರು ಮಾತನಾಡಿ, ಪಟ್ಟಣದಲ್ಲಿ ನಿರಂತರ ಕುಡಿವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಮುಖ್ಯರಸ್ತೆಯಲ್ಲಿ ಪೈಪ್‌ಲೈನ್‌ ಜೋಡಣೆಗೆ ಅವಕಾಶವಿಲ್ಲದಂತಾಗಿದೆ. ಇದರಿಂದ ನೂರಾರು ಕೋಟಿ ರೂ. ಕಾಮಗಾರಿ ಜನರ ಪ್ರಯೋಜನಕ್ಕೆ ಇಲ್ಲದಂತಾಗಿದೆ. ಹೈಕೋರ್ಟ್‌ ತೀರ್ಪಿನ ನಿರೀಕ್ಷೆಯಲ್ಲಿದ್ದು ಅಲ್ಲಿವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು.

ಅಗಲೀಕರಣಕ್ಕೆ ಮನವೊಲಿಸಿ: ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಮುಖ್ಯ ರಸ್ತೆಯಲ್ಲಿ ವಾಸಿಸುವವರು ಸ್ವಯಂಪ್ರೇರಣೆಯಿಂದ ಅಗಲೀಕರಣಕ್ಕೆ ಸಹಕರಿಸಿದ್ದಲ್ಲಿ ಅವರ ಬೇಡಿಕೆ ಪರಿಗಣಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಒಮ್ಮತದ ನಿರ್ಧಾರಕ್ಕೆ ಬಂದಲ್ಲಿ ಅವಶ್ಯವಿರುವ ಮುಖ್ಯರಸ್ತೆ ಎಲ್ಲರದ್ದಾಗುತ್ತದೆ. ನ್ಯಾಯಾಲಯದ ತೀರ್ಪು ಬರುವಷ್ಟರಲ್ಲಿ ಮುಖ್ಯ ರಸ್ತೆ ನಿರ್ಮಾಣವಾಗಬೇಕು. ಅಧಿಕಾರಿಗಳು ನಮಗೆ ಹೇಳಿದಂತೆ ಮುಖ್ಯ ರಸ್ತೆಯಲ್ಲಿನ ನಿವಾಸಿಗಳಿಗೂ ತಿಳಿಸಿ ಅಗಲೀಕರಣಕ್ಕೆ ಮನವೊಲಿಸುವ ಕಾರ್ಯಕ್ಕೆ ಮುಂದಾಗಬೇಕು. ಇಲ್ಲದಿದ್ದರೇ ರಾಜ್ಯ ಹೆದ್ದಾರಿ ನಿಯಮಗಳ ಪಾಲನೆಯಾಗಬೇಕು ಎಂದರು.

Advertisement

ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಹೈಕೋರ್ಟ್‌ನಲ್ಲಿ ದಾವೆ ಹೂಡಿರುವ ವ್ಯಕ್ತಿಗಳ ಚಿರಾಸ್ತಿಗಳನ್ನು ಬಿಟ್ಟು ಒಪ್ಪಿಗೆ ಇದ್ದವರದ್ದು ನಿಯಮಾನುಸಾರ ಅಗಲೀಕರಣಕ್ಕೆ ಮುಂದಾಗಬೇಕು. ಕಳೆದ 13 ವರ್ಷದಿಂದ ನಿರಂತರ ಹೋರಾಟ ನಡೆಸುತ್ತ ಬಂದಿದ್ದರೂ ಮುಖ್ಯ ರಸ್ತೆ ಅಗಲೀಕರಣವಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ನಿರ್ಧಾರಗಳಿಗೆ ಮನ್ನಣೆ ಸಿಗುತ್ತಿಲ್ಲ. ಅಗಲೀಕರಣದಲ್ಲಿ ಹೋರಾಟ ಗಾರರ ಸ್ವಾರ್ಥವಿಲ್ಲ. ಆದರೆ ಸಮಸ್ಯೆಗೆ ಪರಿಹಾರ ಸಿಗದ ಹೊರತು ಇಲ್ಲಿಂದ ಮೇಲೇಳುವ ಮಾತೇ ಇಲ್ಲ ಎಂದು ಎಚ್ಚರಿಸಿದರು.

ಈ ವೇಳೆ ಪಾಂಡುರಂಗ ಸುತಾರ, ಮಂಜುನಾಥ ಪೂಜಾರ, ವಿನಾಯಕ ಕಂಬಳಿ, ಮಂಜುನಾಥ ಬೋವಿ, ಮಹೇಶ ಉಜನಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಸದಸ್ಯರಾದ ಶಿವರಾಜ ಬನ್ನಿಹಟ್ಟಿ, ಮನೋಜ ಜಾಧವ, ಸಿಕಂದರ್‌ ಸೌದಾಗರ, ನಸ್ರುಲ್ಲಾ ನಾಶೀಪುಡಿ, ಅಬ್ದಲ್‌ಗ‌ನಿ ಮಾಳಗಿಮನಿ ಸೇರಿದಂತೆ ಇತರರಿದ್ದರು.

ಮುಖ್ಯ ರಸ್ತೆ ಅಗಲೀಕರಣ ಅವಶ್ಯವಿದೆ. ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿದ್ದು ಹಲವಾರು ಜನ ಗಾಯಗೊಂಡಿದ್ದಾರೆ. ಅಲ್ಲದೇ ಪ್ರತಿದಿನ ಟ್ರಾಫಿಕ್‌ ಜಾಮ್‌ನಿಂದ ಕಿರಿಕಿರಿ ಹೆಚ್ಚಾಗುತ್ತಿದೆ. ಮುಖ್ಯ ರಸ್ತೆ ಅಗಲೀಕರಣಕ್ಕೆ ನಮ್ಮ ಸಂಘ ಬೆಂಬಲ ಸೂಚಿಸುತ್ತದೆ. ಆದಷ್ಟು ಬೇಗ ಅಗಲೀಕರಣ ಮಾಡಬೇಕು. –ಸಿದ್ದು ಕಡಕೋಳ, ಬೀದಿಬದಿ ವ್ಯಾಪಾರಸ್ಥರ ಸಂಘ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next