Advertisement

ಎಸ್. ಆರ್. ವಿಶ್ವನಾಥ್ ಅವರಿಂದ ಬೃಹತ್ ರೋಡ್ ಶೋ

09:08 AM Apr 27, 2023 | Team Udayavani |

ಯಲಹಂಕ: ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಎಸ್ ಆರ್ ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಬುಧವಾರ ಕ್ಷೇತ್ರದ ಚಿಕ್ಕಬಿದರಕಲ್ಲು ತೋಟ ಸೇರಿದಂತೆ ಹಲವು ಬಡಾವಣೆ ಗಳಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿದರು.

ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಆರತಿ ಬೆಳಗಿ ವಿಶ್ವನಾಥ್ ಅವರಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಬಾರಿಯ ಚುನಾವಣೆಯಲ್ಲಿ ನಾವು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಹೊರಗಿನಿಂದ ಬಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಇದುವರೆಗೂ ಒಂದು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎದುರಿಸಿದವರಲ್ಲ. ನಮ್ಮ ಕ್ಷೇತ್ರದ ಬಗ್ಗೆ ಕಿಂಚಿಟ್ಟು ಮಾಹಿತಿ ಇಲ್ಲದೆ ವಿನಾಕಾರಣ ನನ್ನ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಮತ ಪಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

Advertisement

ರಾಜ್ಯದ ಮತದಾರರು ಬಿಜೆಪಿ ಪರವಾಗಿದ್ದು, ಈ ಬಾರಿಯೂ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ತಿಗಳರ ಸಮುದಾಯ ಬೆಂಬಲ ಮತ್ತೊಂದೆಡೆ ಹೆಸರಘಟ್ಟದಲ್ಲಿ ತಿಗಳರ ಸಮುದಾಯದ ಮುಖಂಡರು ವಿಶ್ವನಾಥ್ ಅವರಿಗೆ ಶುಭಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮುದಾಯದ ಮುಖಂಡ ಸುಬ್ಬಣ್ಣ ಅವರು, ವಿಶ್ವನಾಥ್ ಅವರು ಯಾವುದೇ ಜಾತಿ ಸಮುದಾಯ ಧರ್ಮಕ್ಕೆ ಸೀಮಿತರಾದವರಲ್ಲ. ಅವರು ನಮ್ಮ ಸಮುದಾಯದ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸಮುದಾಯ ಅವರ ಪರವಾಗಿ ನಿಲ್ಲಲು ನಿರ್ಧರಿಸಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವನಾಥ್, ತಾವು ಮೂರು ಬಾರಿ ಶಾಸಕರಾಗಿ ಸಮುದಾಯ ಜಾತಿ ಹೀಗೆ ಯಾವುದೇ ತಾರತಮ್ಯ ಮಾಡದೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದೇನೆ. ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಜವಾಬ್ದಾರಿ ನನ್ನ ಮೇಲಿದ್ದು ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸುವ ಗುರಿ ತಲುಪಲು ಸಮುದಾಯದ ಬೆಂಬಲ ಅಗತ್ಯವಾಗಿದೆ ಎಂದರು.

ಇದಕ್ಕೂ ಮುನ್ನ ಸಿಂಗನಾಯಕನಹಳ್ಳಿಯಲ್ಲಿ ವಿಶ್ವನಾಥ್ ಅವರು ಮನೆ ಮನೆಗೆ ತೆರಳಿ ಮತ ಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next