Advertisement

Road Mishap: ಕಾಪು; ದಂಪತಿಗೆ ಬಸ್‌ ಢಿಕ್ಕಿ: ಪತಿ ಸಾವು

08:07 AM Oct 10, 2024 | Team Udayavani |

ಕಾಪು: ರಸ್ತೆ ದಾಟುತ್ತಿದ್ದ ದಂಪತಿಗೆ ಬಸ್‌ ಢಿಕ್ಕಿ ಹೊಡೆದು ಪತಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಮಂಗಳಪೇಟೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

Advertisement

ಮಂಗಳೂರು ಉಡುಪಿ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ, ರಸ್ತೆ ಬದಿಯ ಹೊಟೇಲ್‌ಗೆ ತೆರಳುತ್ತಿದ್ದ ದಂಪತಿಗೆ ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎಕ್ಸ್‌ ಪ್ರಸ್‌ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಬಸ್‌ ಢಿಕ್ಕಿ ಹೊಡೆದ ರಭಸಕ್ಕೆ ಕಾಪು ಕಲ್ಯ ಭಾರತ್‌ನಗರ ನಿವಾಸಿ ಹಿದಾಯತುಲ್ಲಾ (57) ಮೃತ ಪಟ್ಟಿದ್ದು, ಅವರ ಪತ್ನಿ ಶಾವರ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಎಸ್‌ಡಿಪಿಐ ಆ್ಯಂಬುಲೆನ್ಸ್‌ನಲ್ಲಿ ಸ್ಥಳೀಯರು ಕೂಡಲೇ ಉಡುಪಿ ಆಸ್ಪತ್ರೆಗೆ ಕರೆದೊಯ್ದರು.

ತೀವ್ರ ಗಾಯಗೊಂಡಿದ್ದ ಹಿದಾಯತುಲ್ಲಾ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟರು.

Advertisement

ಚಾಲಕ, ನಿರ್ವಾಹಕ ಪರಾರಿ: ಅಪಘಾತದ ರಭಸಕ್ಕೆ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದ್ದು ಬಸ್‌ ಚಾಲಕ ಮತ್ತು ನಿರ್ವಾಹಕ ಬಸ್‌ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅರ್ಧ ಗಂಟೆಗಳ ಕಾಲ ಹೆದ್ದಾರಿ ಸಂಚಾರದಲ್ಲಿ ವೃತ್ಯಯವುಂಟಾಗಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಸುಗಮ ಸಂಚಾರಕ್ಕೆ ಅನುವುಗೊಳಿಸಿದ್ದಾರೆ.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾರ್ಸೆಲ್‌ ತರಲು ಹೋಗಿದ್ದ ವೇಳೆ ಅಪಘಾತ: ಪಡುಬಿದ್ರಿ ಉಚ್ಚಿಲದ ಸಂಬಂಧಿಕರ ಮನೆಗೆ ತೆರಳಿದ್ದ ಅವರು ಅಲ್ಲಿಂದ ವಾಪಸು ಕಾಪುವಿಗೆ ಮರಳುವ ವೇಳೆ ಮೂಳೂರು ಹೊಟೇಲ್‌ನಿಂದ ಮನೆಗೆ ಪಾರ್ಸೆಲ್‌ ತರಲೆಂದು ರಸ್ತೆ ದಾಟುತ್ತಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next